ತೀರ್ಥಹಳ್ಳಿ: ಮಲೆನಾಡಿನಲ್ಲಿ ವರುಣನ ಆರ್ಭಟ ಶುರುವಾಗಿದ್ದು, ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಸಿಡಿಲು ಗುಡುಗಿನ ಮಳೆಗೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ಗಬಡಿಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಶಿವಮೊಗ್ಗ ಗ್ರಾಮಾಂತರ : ರಾಗಿ ಗುಡ್ಡದ ವೈನ್ಶಾಪ್ನಲ್ಲಿ ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ
ನಿನ್ನೆ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಗಬಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಭಸದ ಗಾಳಿಯೊಂದಿಗೆ ಮಳೆ ಸುರಿದಿದೆ. ಈ ವೇಳೆ ಗಬಡಿಯ ಪ್ರಶಾಂತ್ ಎಂಬುವವರ ತೋಟದಲ್ಲಿದ್ದ 10ಕ್ಕೂ ಹೆಚ್ಚು ಅಡಿಕೆ ಮರಗಳು ಗಾಳಿಯ ರಭಸಕ್ಕೆ ತುಂಡಾಗಿ ಮುರಿದು ಬಿದ್ದಿವೆ. ವರ್ಷಾನುಗಟ್ಟಲೆ ಕಷ್ಟಪಟ್ಟು ಬೆಳೆಸಿದ ಅಡಿಕೆ ಮರಗಳು ನೆಲಸಮವಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಗಾಳಿಯ ವೇಗ ಎಷ್ಟಿತ್ತೆಂದರೆ ಪ್ರಶಾಂತ್ ಅವರ ಮನೆಯ ಶೀಟ್ ಹಾರಿ ಹೋಗಿದ್ದು, ಮನೆಯೊಳಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಹಾಗೆಯೇ ಗ್ರಾಮದ ಪ್ರದೀಪ್ ಎಂಬುವವರ ಮನೆಯ ಹಂಚುಗಳು ಸಹ ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಇದರಿಂದಾಗಿ ಮನೆಯೊಳಗಿದ್ದ ವಸ್ತುಗಳೆಲ್ಲವೂ ಮಳೆಗೆ ಸಿಲುಕಿ ಹಾನಿಗೊಳಗಾಗಿವೆ.
ಅಷ್ಟೇ ಅಲ್ಲದೆ ಬಿರುಗಾಳಿಯ ಅಬ್ಬರಕ್ಕೆ ಸಿಲುಕಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದ ಪರಿಣಾಮ, ಲೈನ್ಗಳು ತುಂಡಾಗಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಕಳೆದ ಕೆಲವು ದಿನಗಳಿಂದ ಸೆಕೆಯ ಬೇಗೆಯಿಂದ ಕಂಗೆಟ್ಟಿದ್ದ ಜನರು, ಒಂಚೂರು ಮಳೆ ಬಂದು ಭೂಮಿ ತಂಪಾದರೆ ಸಾಕು ಎಂದುಕೊಳ್ಳುತ್ತಿದ್ದರು. ಆದರೆ ಬಂದ ಮಳೆ ತಂಪೆರೆಯುವ ಬದಲು ಹೀಗೆ ಅನಾಹುತ ಸೃಷ್ಟಿಸಿರುವುದು ಜನರ ಮನದಲ್ಲಿ ಯಾಕಾದರೂ ಮಳೆ ಬಂತೋ” ಎಂಬ ಆತಂಕ ಮೂಡಿಸುವಂತೆ ಮಾಡಿದೆ.
Heavy Rain and Wind Storm Hits Thirthahalli


