ಸಾಗರ: ಹಸಿರುಮಕ್ಕಿ ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಮೇ ತಿಂಗಳ ಅಂತ್ಯದೊಳಗೆ ಇದನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ವಿಶ್ವ ಎಐ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಕರಾಮತ್ತು!
ಶಾಸಕ ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ಇಂದು ಹಸಿರುಮಕ್ಕಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಲಾಂಚ್ ಮೂಲಕ ಹಿನ್ನೀರಿನಲ್ಲಿ ಸಂಚರಿಸಿ ಸೇತುವೆಯ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಿದರು. ಕೆಆರ್ಡಿಸಿಎಲ್ (KRDCL) ವತಿಯಿಂದ ಸುಮಾರು 125.67 ಕೋಟಿ ರೂ. ವೆಚ್ಚದಲ್ಲಿ ಈ ಬೃಹತ್ ಸೇತುವೆ ನಿರ್ಮಾಣವಾಗುತ್ತಿದೆ.
ಕೊಲ್ಲೂರಿಗೆ 32 ಕಿ.ಮೀ ದೂರ ಕಡಿತ
ಈ ಸೇತುವೆ ಸಾರ್ವಜನಿಕರ ಬಳಕೆಗೆ ಮುಕ್ತವಾದರೆ ಸಾಗರದಿಂದ ಕರಾವಳಿಯ ಕೊಲ್ಲೂರಿಗೆ ಇರುವ ಅಂತರದಲ್ಲಿ 32 ಕಿ.ಮೀ ಕಡಿತವಾಗಲಿದೆ. ಇದು ಶರಾವತಿ ಹಿನ್ನೀರಿನ ಆರು ಗ್ರಾಮ ಪಂಚಾಯಿತಿಗಳ ನಿವಾಸಿಗಳಿಗೆ ಸಂಜೀವಿನಿಯಾಗಲಿದೆ. ಮಧ್ಯ ಮತ್ತು ಉತ್ತರ ಕರ್ನಾಟಕದಿಂದ ಮಂಗಳೂರು, ಉಡುಪಿ ಹಾಗೂ ಕುಂದಾಪುರಕ್ಕೆ ತೆರಳುವ ಪ್ರವಾಸಿಗರಿಗೆ ಈ ಮಾರ್ಗ ಅತ್ಯಂತ ಸುಗಮವಾಗಲಿದೆ.
ಕಾಮಗಾರಿಯಲ್ಲಿ ಬಳಕೆಯಾಗುತ್ತಿದ್ದ ದೈತ್ಯ ಕಾಂಕ್ರೀಟ್ ಬ್ಲಾಕ್ಗಳ ಗುಣಮಟ್ಟದಲ್ಲಿ ನ್ಯೂನತೆ ಕಂಡುಬಂದ ಹಿನ್ನೆಲೆಯಲ್ಲಿ ಬದಲಿ ವ್ಯವಸ್ಥೆ ಮಾಡುವಾಗ ಸ್ವಲ್ಪ ವಿಳಂಬವಾಗಿದೆ. ಆದರೆ, ಇನ್ನು ಮುಂದೆ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಮೇ ತಿಂಗಳಲ್ಲಿ ಮುಖ್ಯಮಂತ್ರಿಗಳ ಹಸ್ತದಿಂದ ಉದ್ಘಾಟನೆ ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದರು. ಸಾಗರ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಬಾಕಿ ಇರುವ 11 ಕೋಟಿ ರೂ. ಪರಿಹಾರ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಆಶಯದಂತೆ ಸಚಿವರು ಈ ಯೋಜನೆಗೆ ವೇಗ ನೀಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲೂ ಈ ಬಗ್ಗೆ ಕಟ್ಟುನಿಟ್ಟಿನ ಸಭೆ ನಡೆಸಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿತ್ತು, ಎಂದು ಹರ್ಷ ವ್ಯಕ್ತಪಡಿಸಿದರು.
Hasirumakki Bridge Launch in date fix

