ಶಿವಮೊಗ್ಗ: ಮಧ್ಯಪ್ರಾಚ್ಯ ದೇಶಗಳ ಯುದ್ಧದ ಬಿಸಿ ಇದೀಗ ನೇರವಾಗಿ ಕರ್ನಾಟಕದ ಹೋಟೆಲ್ ಉದ್ಯಮಕ್ಕೆ ತಟ್ಟಿದೆ. ಕಳೆದ ಅನೇಕ ದಿನಗಳಿಂದ ವಾಣಿಜ್ಯ ಬಳಕೆಯ ಅಡುಗೆ ಅನಿಲದ ಕೊರತೆಯಿಂದಾಗಿ ಹೋಟೆಲ್ ಬಂದ್ ಮಾಡುವ ನಿರ್ಧಾರದಲ್ಲಿದ್ದ ಮಾಲೀಕರು, ಇದೀಗ ಅನಿವಾರ್ಯವಾಗಿ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿ ಬಡಿಸಲು ಮುಂದಾಗಿದ್ದಾರೆ. ಅದರಂತೆ, ಇಂದು ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ‘ನಿಸರ್ಗ ಹೋಟೆಲ್’ನಲ್ಲಿ ಸೌದೆ ಒಲೆಯ ಮೂಲಕ ಅಡುಗೆ ತಯಾರಿಸಲಾಯಿತು.
ಶಿವಮೊಗ್ಗ: ಕಾರು ತೊಳೆಯುವಾಗ ಪಕ್ಕದ ಮನೆಯ ಗೋಡೆಗೆ ಹಾರಿತು ನೀರು, ಆಮೇಲೆ ಆಗಿದ್ದೇ ಬೇರೆ
ಹೌದು, ಶಿವಮೊಗ್ಗದ ಸವಳಂಗ ರಸ್ತೆಯ ಫ್ಲೈ ಓವರ್ ಕೆಳಗಿರುವ ನಿಸರ್ಗ ಹೋಟೆಲ್ನ ಹೊರಗಿನ ಪಾರ್ಕಿಂಗ್ ಜಾಗದಲ್ಲಿ ಸೌದೆ ಒಲೆ ಹಚ್ಚಿ ಅಡುಗೆ ಸಿದ್ಧಪಡಿಸಲಾಗುತ್ತಿದೆ. ಅಡುಗೆ ಅನಿಲದ ತೀವ್ರ ಅಭಾವವಿರುವುದರಿಂದ ಹೋಟೆಲ್ನ ಮೆನುವನ್ನು ಕಡಿತಗೊಳಿಸಲಾಗಿದ್ದು, ಸೀಮಿತ ಪ್ರಮಾಣದ ಆಹಾರವನ್ನು ಮಾತ್ರ ತಯಾರಿಸಲಾಗುತ್ತಿದೆ. ಈ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಗ್ರಾಹಕರು ಸಹಕರಿಸಬೇಕೆಂದು ಹೋಟೆಲ್ ಮುಂದೆ ಫಲಕ ಅಳವಡಿಸಲಾಗಿದೆ.
ಈ ಕುರಿತು ನಿಸರ್ಗ ಹೋಟೆಲ್ನ ಮ್ಯಾನೇಜರ್ ರಮೇಶ್ ಮಾತನಾಡಿ, ಗ್ಯಾಸ್ ಕೊರತೆಯಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಹೋಟೆಲ್ ಒಳಗಡೆ ಸೌದೆ ಒಲೆ ಹಚ್ಚಿದರೆ ಪಿಓಪಿ (POP) ಹಾಳಾಗುತ್ತದೆ. ಆದ್ದರಿಂದ ಪಾರ್ಕಿಂಗ್ ಜಾಗವನ್ನು ದಿನಕ್ಕೆ 4 ಸಾವಿರ ರೂಪಾಯಿಯಂತೆ ಬಾಡಿಗೆಗೆ ಪಡೆದು ಅಡುಗೆ ಮಾಡುತ್ತಿದ್ದೇವೆ. ಪಕ್ಕದಲ್ಲೇ ಶಾಲೆ ಇರುವುದರಿಂದ ಮಕ್ಕಳಿಗೆ ತೊಂದರೆಯಾಗಬಾರದೆಂದು ಬೆಳಿಗ್ಗೆ 3 ಗಂಟೆಗೆ ಬಂದು ಅಡುಗೆ ಕೆಲಸ ಆರಂಭಿಸುತ್ತೇವೆ. ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಹೋಟೆಲ್ ನಿರ್ವಹಣೆ ಬಹಳ ಕಷ್ಟವಾಗಿದೆ, ಎಂದು ಅಳಲು ತೋಡಿಕೊಂಡರು.
Gas Shortage Firewood Cooking in Shivamogga Hotels


