Shivamogga Central Jail / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಕೇಂದ್ರ ಕಾರಾಗೃಹ / ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬನ ಮೇಲೆ ಇನ್ನೊಬ್ಬ ಕೈದಿ ಹಲ್ಲೆ ಮಾಡಿದ ಕಾರಣಕ್ಕೆ ಜೈಲು ಮುಖ್ಯ ಅಧೀಕ್ಷಕರ ಡಾ. ಪಿ ರಂಗನಾಥ್ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ನಂತೆ ಸುದ್ದಿ ವಿವರ ಹೀಗಿದೆ.
ಕಳೆದ ಜೂನ್ 16 ರಂದು ಸಂಜೆ ಸುಮಾರು 6 ಗಂಟೆಗೆ ಈ ಘಟನೆ ನಡೆದಿದ್ದು, ಕಾರಾಗೃಹದಲ್ಲಿರುವ (Shivamogga Central Jail) ಕುಮಧ್ವತಿ ವಿಭಾಗದ ಕೊಠಡಿಯಲ್ಲಿರಿಸಲಾಗಿದ್ದ ವಿಚಾರಣಾಧೀನ ಬಂಧಿ, ಕಾರಾಗೃಹದ ಆಸ್ಪತ್ರೆಗೆ ಹೋಗುತ್ತಿದ್ದರು. ಈ ವೇಳೆ ಅಲ್ಲಿಯೇ ತುಂಗಾ ವಿಭಾಗದ ಕೊಠಡಿಯಲ್ಲಿದ್ದ ಶಿಕ್ಷಾಬಂಧಿ ಕೈದಿಯನ್ನ ಮಾತನಾಡಿಸಲು ತೆರಳಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿ ಜಗಳವಾಗಿದೆ. ಆಗ ಶಿಕ್ಷಾ ಬಂಧಿ ತನ್ನ ಕೈಲಿದ್ದ ಸ್ಟೀಲ್ ಲೋಟದಿಂದ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ಮಾಡಿದ್ದಾನೆ.
ಪರಿಣಾಮ ವಿಚಾರಣಾಧೀನ ಕೈದಿ ಗಾಯಗೊಂಡಿದ್ದು, ಆತನನ್ನು ಸ್ಥಳಕ್ಕೆ ಧಾವಿಸಿದ ಜೈಲು ಸಿಬ್ಬಂದಿ ರೆಸ್ಕ್ಯೂ ಮಾಡಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಿ ಕಾರಾಗೃಹದ ಆಸ್ಪತ್ರೆಯಲ್ಲಿಯೇ ವಿಚಾರಣಾಧೀನ ಕೈದಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಈ ಘಟನೆ ಸಂಬಂಧ ಕಾರಾಗೃಹದ ಸುಗಮ ಆಡಳಿತಕ್ಕೆ ಧಕ್ಕೆ ತಂದು, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಿಕ್ಷಾ ಬಂಧಿ ವಿರುದ್ಧ ಡಾ. ರಂಗನಾಥ್ ಅವರು ನೀಡಿದ ಅಧಿಕೃತ ದೂರನ್ನು ಆಧರಿಸಿ ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ.
