ಭದ್ರಾವತಿ: ತಾಲೂಕಿನ ಕೊಮರನಹಳ್ಳಿ ತಾಂಡಾದಲ್ಲಿ ನಡೆದಿದ್ದ ರವಿ ನಾಯ್ಕ್ ಎಂಬುವವರ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ.
ಶಿವಮೊಗ್ಗ ಹವಾಮಾನ ಮುನ್ಸೂಚನೆ: ಬಿರುಗಾಳಿ ಸಹಿತ ಮಳೆ ಸಾಧ್ಯತೆ
Bhadravati ಘಟನೆ ವಿವರ
2021ರ ಜೂನ್ 3ರಂದು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಆರೋಪಿಗಳಾದ ಶರತ್, ವಿನಯ್ ಕುಮಾರ್, ಸರೋಜಾಬಾಯಿ ಮತ್ತು ಜಯಾಬಾಯಿ ಎಂಬುವವರು ರವಿ ನಾಯ್ಕ್ ಅವರನ್ನು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ನಿಂದಿಸಿ ಚಾಕುವಿನಿಂದ ಬೆನ್ನು ಹಾಗೂ ಎದೆಯ ಭಾಗಕ್ಕೆ ಇರಿದು ಕೊಲೆ ಮಾಡಲು ಯತ್ನಿಸಿದ್ದರು. ಈ ವೇಳೆ ಜಗಳ ಬಿಡಿಸಲು ಬಂದ ರಾಜಾ ನಾಯ್ಕ್ ಅವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಲಾಗಿತ್ತು. ಈ ಘಟನೆಯ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಂದಿನ ಎಎಸ್ಐ ಕೆ.ಕೆ. ತ್ಯಾಗರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು
ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರ ವಾದ ಮತ್ತು ಸಾಕ್ಷ್ಯಾಧಾರಗಳನ್ನು ಪುರಸ್ಕರಿಸಿ ಆರೋಪಿಗಳ ಮೇಲಿನ ಅಪರಾಧ ದೃಢಪಟ್ಟಿದೆ ಎಂದು ಘೋಷಿಸಿದರು.
ಈ ಹಿನ್ನೆಲೆಯಲ್ಲಿ ಮುಖ್ಯ ಆರೋಪಿ ಎ1 ಶರತ್ಗೆ 8 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 2,31,000 ರೂಪಾಯಿ ದಂಡ ವಿಧಿಸಲಾಗಿದ್ದರೆ, ಎ2 ವಿನಯ್ ಹಾಗೂ ಎ3 ಸರೋಜಾಬಾಯಿ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 62,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ದಂಡದ ಮೊತ್ತದಲ್ಲಿ ಸಂತ್ರಸ್ತ ರವಿ ನಾಯ್ಕ್ ಅವರಿಗೆ 1,00,000 ರೂಪಾಯಿ ಹಾಗೂ ಗಾಯಗೊಂಡ ರಾಜಾ ನಾಯ್ಕ್ ಅವರಿಗೆ 50,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ನಾಲ್ಕನೇ ಆರೋಪಿ ಜಯಾಬಾಯಿ ವಿಚಾರಣೆ ಅವಧಿಯಲ್ಲೇ ಮೃತಪಟ್ಟಿದ್ದರಿಂದ ಅವರ ಮೇಲಿನ ಪ್ರಕರಣ ರದ್ದಾಗಿದೆ.
Bhadravati Murder Attempt Case 3 Convicts Jailed

