Areca Nut Not Cancerous ಶಿವಮೊಗ್ಗ : ವಿಶ್ವ ಆರೋಗ್ಯ ಸಂಸ್ಥೆಯು (WHO) ಅಡಿಕೆಯನ್ನು ಕ್ಯಾನ್ಸರ್ ಕಾರಕ (Carcinogen) ಎಂದು ವರ್ಗೀಕರಿಸಿರುವುದು ವೈಜ್ಞಾನಿಕವಾಗಿ ದೋಷಪೂರ್ಣವಾಗಿದ್ದು, ಇದನ್ನು ಕೂಡಲೇ ರದ್ದುಗೊಳಿಸಲು ಭಾರತ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ ಅವರು, ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಬಲವಾದ ವಾದ ಮಂಡಿಸುವಂತೆ ಮನವಿ ಸಲ್ಲಿಸಿದರು.
ಏಪ್ರಿಲ್ 1ರಿಂದ ಹೊಸ ಆರ್ಥಿಕ ನಿಯಮಗಳ ಜಾರಿ: ಈ ಬದಲಾವಣೆ ಬಗ್ಗೆ ಗಮನಿಸಿ
ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇ. 65ರಷ್ಟು ಪಾಲು ಹೊಂದಿರುವ ಮಲೆನಾಡಿನ ರೈತರು ಇತ್ತೀಚಿನ ಬೆಳವಣಿಗೆಗಳಿಂದ ಆತಂಕದಲ್ಲಿದ್ದಾರೆ. ಸುಮಾರು 2 ಕೋಟಿ ಜನರ ಜೀವನೋಪಾಯವಾಗಿರುವ ಅಡಿಕೆ ಉದ್ಯಮವು 1 ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕತೆಯನ್ನು ಹೊಂದಿದೆ. ತಂಬಾಕು ಮಿಶ್ರಿತ ಉತ್ಪನ್ನಗಳ ಅಧ್ಯಯನವನ್ನು ಶುದ್ಧ ಅಡಿಕೆಗೆ ಅನ್ವಯಿಸಿ WHO ತಪ್ಪು ತೀರ್ಮಾನಕ್ಕೆ ಬಂದಿದೆ ಎಂದು ಸಂಸದರು ಪ್ರತಿಪಾದಿಸಿದರು.
ಅಡಿಕೆ ಹಾಳೆಯ ತಟ್ಟೆಗಳ ಮೇಲೆ ಅಮೆರಿಕ ಹೇರಿರುವ ನಿಷೇಧವು ಗ್ರಾಮೀಣ ಕೈಗಾರಿಕೆಗಳಿಗೆ ದೊಡ್ಡ ಹೊಡೆತ ನೀಡಿದೆ. ಇದನ್ನು ರಾಜತಾಂತ್ರಿಕವಾಗಿ ಪ್ರಶ್ನಿಸಬೇಕು ಮತ್ತು AIIMS, IISc ನಂತಹ ಉನ್ನತ ಸಂಸ್ಥೆಗಳ ತಜ್ಞರ ತಂಡವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಿ ವಾಸ್ತವಾಂಶ ಮನದಟ್ಟು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು. ಇದು ಕೇವಲ ಒಂದು ಜಿಲ್ಲೆಯ ಪ್ರಶ್ನೆಯಲ್ಲ, ಇಡೀ ದೇಶದ ಅಡಿಕೆ ಬೆಳೆಗಾರರ ಅಸ್ತಿತ್ವದ ಹೋರಾಟವಾಗಿದೆ ಎಂದು ಬಿ,ವೈ ರಾಘವೇಂದ್ರ ತಿಳಿಸಿದರು.
ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, CPCRI ನೇತೃತ್ವದಲ್ಲಿ 11 ರಾಷ್ಟ್ರೀಯ ಸಂಸ್ಥೆಗಳು ಅಡಿಕೆ ಕುರಿತು ಸಂಶೋಧನೆ ನಡೆಸುತ್ತಿವೆ ಎಂದು ತಿಳಿಸಿದರು. ಈ ಸಮಗ್ರ ವರದಿ ಸಿದ್ಧವಾದ ಕೂಡಲೇ ಅದನ್ನು ಐಸಿಎಂಆರ್ (ICMR) ಮೂಲಕ ಕೇಂದ್ರಕ್ಕೆ ಸಲ್ಲಿಸಿ, ಅಡಿಕೆ ಬೆಳೆಗಾರರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
Areca Nut Not Cancerous MP Urges Centre


