ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಅಡಿಕೆ ಬೇಯಿಸುವ ವೇಳೆ ಹಂಡೆಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ವಡ್ಡಿನಕೊಪ್ಪದಲ್ಲಿ ನಡೆದಿದೆ. ವಡ್ಡಿನಕೊಪ್ಪ ನಿವಾಸಿ ಜೇನುಕುಮಾರ್.ಆರ್(44) ಮೃತಪಟ್ಟ ದುರ್ದೈವಿ.
ಘಟನೆ ವಿವರ
ಜೇನು ಕುಮಾರ್ ಸೆಪ್ಟಂಬರ್ 08 ರಂದು ತಮ್ಮ ಮನೆ ಬಳಿಯ ಶೆಡ್ನಲ್ಲಿ ಅಡಿಕೆಯನ್ನು ಬೇಯಿಸಿ ಜೋಗರನ್ನು ತೆಗೆಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಹಂಡೆಗೆ ಬಿದ್ದಿದ್ದರು. ಸ್ಥಳದಲ್ಲಿದ್ದ ಕೆಲಸಗಾರರು ಕೂಡಲೇ ಜೇನುಕುಮಾರ್ರವರನ್ನು ಮೇಲಕ್ಕೆತ್ತಿದ್ದರಾದರೂ, ಕಾದ ಚೊಗರಿನಿಂದಾಗಿ ಅವರ ದೇಹದ ಬಹುತೇಕ ಭಾಗ ತೀವ್ರವಾಗಿ ಸುಟ್ಟು ಹೋಗಿತ್ತು.
ನೋವಿನಲ್ಲಿ ಬಟ್ಟೆ ತೆಗೆಯುತ್ತಾ ಹೊರಬಂದಿದ್ದ ಜೇನುಕುಮಾರ್ ಅವರನ್ನು ತಕ್ಷಣವೇ ಕುಟುಂಬಸ್ಥರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ 8 ದಿನಗಳ ಬಳಿಕ ಮಣಿಪಾಲ್ ಆಸ್ಪತ್ರೆಯಲ್ಲಿ ಜೇನು ಕುಮಾರ್ ಕೊನೆಯುಸಿರೆಳೆದಿದ್ದಾರೆ. ಜೇನುಕುಮಾರ್ ಆಯತಪ್ಪಿ ಹಂಡೆಗೆ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
