ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮೊಬೈಲ್ ಹಾಗೂ ಅಗತ್ಯ ದಾಖಲೆಗಳನ್ನು ಕಳೆದುಕೊಂಡು ಊರಿಗೆ ಮರಳಲಾಗದೆ ಸಂಕಷ್ಟದಲ್ಲಿದ್ದ 19 ವರ್ಷದ ಯುವತಿಗೆ ಶಿವಮೊಗ್ಗದ ಅಕ್ಕ ಪಡೆ ನೆರವಾಗಿದ್ದರ ಬಗ್ಗೆ ಶಿವಮೊಗ್ಗ ಪೊಲೀಸ್ ಮಾಧ್ಯಮ ಗ್ರೂಪ್ನಲ್ಲಿ ವರದಿ ನೀಡಲಾಗಿದೆ. ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯನ್ನ ಗಮನಿಸುವುದಾದರೆ, ಯುವತಿಯ ತಾಯಿಯನ್ನು ಸಂಪರ್ಕಿಸಿದ ಅಕ್ಕಪಡೆ ಸಿಬ್ಬಂದಿಗೆ , ಆಕೆಯನ್ನು ಸುರಕ್ಷಿತವಾಗಿ, ಪೋಷಕರ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿನ್ನೆದಿನ ಬುಧವಾರ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಕ್ಕ ಪಡೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, 19 ವರ್ಷದ ಯುವತಿಯೊಬ್ಬರು ಅಲ್ಲೇ ಕುಳಿತಿರುವುದು ಗಮನಕ್ಕೆ ಬಂದಿದೆ, ಆಕೆಯ ಚಲನವಲನದಿಂದಾಗಿ ಆಕೆ ಸಂಕಷ್ಟದಲ್ಲಿರಬಹುದು ಎಂದು ಪೊಲೀಸರಿಗೆ ಅನಿಸಿದೆ. ಹೀಗಾಗಿ ಆಕೆ ಬಳಿ ತೆರಳಿ ವಿಚಾರಿಸಿದಾಗ, ತಾನು ಮೂಲತಃ ಅರಸೀಕೆರೆಯವಳಾಗಿದ್ದು, ಕಾರಣಾಂತರಗಳಿಂದ ಶಿವಮೊಗ್ಗಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಶಿವಮೊಗ್ಗಕ್ಕೆ ಬಂದ ಬಳಿಕ ತನ್ನ ಮೊಬೈಲ್ ಫೋನ್, ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಕಳೆದುಕೊಂಡಿರುವುದಾಗಿ ಯುವತಿ ತಿಳಿಸಿದ್ದಾಳೆ. ಈ ಕಾರಣಕ್ಕೆ ತನ್ನ ಪೋಷಕರನ್ನು ಕೂಡ ಸಂಪರ್ಕಿಸಲು ಸಾಧ್ಯವಾಗದೆ, ಊರಿಗೆ ಮರಳಿ ಹೋಗುವುದಕ್ಕೂ ಆಗದೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಯುವತಿಯ ಪರಿಸ್ಥಿತಿ ತಿಳಿದ ಅಕ್ಕ ಪಡೆ ಸಿಬ್ಬಂದಿ, ಯುವತಿಯ ತಾಯಿಯ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ, ಅವರನ್ನ ಸಂರ್ಪಕಿಸಿ, ಯುವತಿಯನ್ನು ಸುರಕ್ಷಿತವಾಗಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
