AHINDA Empowerment ತೀರ್ಥಹಳ್ಳಿ: ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ವರ್ಗಗಳ ಧ್ವನಿಯಾಗಿ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರ (ಅಹಿಂದ) ಸಂಘಟನೆಯು ತಳಮಟ್ಟದಲ್ಲಿ ಸಬಲೀಕರಣಗೊಳ್ಳುವುದು ಅತ್ಯಗತ್ಯವಾಗಿದೆ. ಸಂಘಟನೆಯು ಕೇವಲ ನಗರ ಅಥವಾ ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೆ ತಾಲೂಕು ಹಾಗೂ ಗ್ರಾಮ ಮಟ್ಟಕ್ಕೂ ತಲುಪುವ ಮೂಲಕ ತಳಮಟ್ಟದ ಧ್ವನಿಯಾಗಬೇಕಿದೆ ಎಂದು ಅಹಿಂದ ಮುಖಂಡರಾದ ಬಿ. ವರಲಕ್ಷ್ಮೀ ಪ್ರಕಾಶ್ ಹೇಳಿದರು.
ಶಿವಮೊಗ್ಗದಲ್ಲಿ ಎಸ್ ಜಾನಕಿ ಗೀತ ಗಾಯನ ಕಾರ್ಯಕ್ರಮ, ಉಚಿತ ಪ್ರವೇಶ, ಯಾವಾಗ?
ಮಲೆನಾಡು ಅಹಿಂದ ಸಂಘಟನೆ ವತಿಯಿಂದ ಇತ್ತೀಚೆಗೆ ಇಲ್ಲಿನ ಕುವೆಂಪು ಬಡಾವಣೆಯ ಶಿಕ್ಷಕರ ಭವನದಲ್ಲಿ ಹಮ್ಮಿಕೊಂಡಿದ್ದ ಸಂಘಟನಾ ಅಭಿಯಾನ ಹಾಗೂ ಅಹಿಂದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶತಶತಮಾನಗಳ ಕಾಲದಿಂದಲೂ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮೇಲೆ ಅನ್ಯಾಯ ಹಾಗೂ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಇಂದಿನ ಎಐ ತಂತ್ರಜ್ಞಾನದ ಆಧುನಿಕ ಕಾಲಘಟ್ಟದಲ್ಲೂ ಸಹ ಇದು ನಿಂತಿಲ್ಲ. ಅನ್ಯಾಯ, ಅಕ್ರಮ ಹಾಗೂ ದೌರ್ಜನ್ಯಗಳು ವಿರುದ್ಧ ಧ್ವನಿ ಎತ್ತುವುದು ಅಗತ್ಯ. ಆದ್ದರಿಂದ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದರು.
ಬಡತನದಲ್ಲಿರುವವರ ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣ, ಸಾಮಾಜಿಕ ಅನ್ಯಾಯ ಮತ್ತು ದೌರ್ಜನ್ಯ ತಡೆಗಟ್ಟುವಿಕೆ, ಸಂವಿಧಾನದ ಮೂಲ ಆಶಯಗಳನ್ನು ಗಟ್ಟಿಗೊಳಿಸಲು ಮತ್ತು ರಾಜಕೀಯ ಹಾಗೂ ಅಧಿಕಾರದಲ್ಲಿ ಸಮಾನ ಪ್ರಾತಿನಿಧ್ಯ ಪಡೆಯಲು ಅಹಿಂದ ಬಲವರ್ಧನೆಗೊಳ್ಳಬೇಕೆಂದು ಪ್ರತಿಪಾದಿಸಿದರು.
ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ರೋಹಿತ್ ಕುಮಾರ್ ಮಾತನಾಡಿ ನೊಂದವರ ಪರ ಧ್ವನಿ ಎತ್ತಲು, ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಬಲಿಷ್ಠವಾದ ಸಂಘಟನೆ ಬೇಕು. ಸಂಖ್ಯೆ ಇದ್ದರೆ ಮಾತ್ರ ಸಾಲದು, ಒಳ್ಳೆಯ ಮನಸ್ಸಿರುವಂತಹವರ ಒಂದು ಒಕ್ಕೂಟದಿಂದ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ನಮ್ಮ ಕೂಗು ಆಡಳಿತ ಪಕ್ಷಕ್ಕೆ ಕೇಳಿಸಿ ಸಮಸ್ಯೆಗೆ ಪರಿಹಾರ ದೊರೆಯುವಂತಿರಬೇಕೆಂದರು.
ಮಲೆನಾಡು ಅಹಿಂದ ಸಂಘಟನೆ ಅಧ್ಯಕ್ಷ ಸಚಿನ್ ಗರಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಸಚಿನ್ ಆಗಮಿಸಿದ್ದರು. ರವಿ ಕುರವಳ್ಳಿ, ಹರಿಯಪ್ಪ ನಾಯಕ್, ಚಿಡುವ ಮಂಜುನಾಥ್, ಭಾಸ್ಕರ್, ಸುಬ್ಬಣ್ಣ ಬೇಗೊಳ್ಳಿ, ಅಭಿದ್, ಖಜಾಂಜಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಧರ್ ಮೂರ್ತಿ ಸ್ವಾಗತಿಸಿ, ಕಾರ್ಯಾಧ್ಯಕ್ಷ ರಹಮತುಲ್ಲಾ ಅಸಾದಿ ಪ್ರಾಸ್ತಾವಿಸಿ, ಪುತ್ತ್ತಾಬ್ಬ ನಿರೂಪಿಸಿ, ವಂದಿಸಿದರು.
