22 ವರ್ಷಗಳಲ್ಲಿ ಸಿಗದ ನಕ್ಸಲ್​ ನಾಯಕ ಬಿ.ಜಿ ಕೃಷ್ಣಮೂರ್ತಿ

ಹಂಚಿಕೊಳ್ಳಿ
WhatsApp Facebook X Telegram

22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರೀಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ (bg krishnamurthy) 2021 ರ ಡಿಸೆಂಬರ್​ ತಿಂಗಳು ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಆದ್ರೆ ಅದುವರೆಗೂ ಬಿ.ಜಿ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ ಎಂಬುದೇ ಗೊತ್ತಿರಲಿಲ್ಲ.  ಕೇರಳ ಪೊಲೀಸರಿಗೆ ಬಿ.ಜಿ.ಕೆ ಬಂಧನಕ್ಕೂ ಮುನ್ನಾ ನಕ್ಸಲ್​ ವಿಚಾರದಲ್ಲಿ ದೊಡ್ಡ ಲೀಡ್​ ಸಿಕ್ಕಿತ್ತು. ಲಿಜೇಶ್​ ಅಲಿಯಾಸ್​ ರಾಮು ಎಂಬಾತ 2021 ರ ಅಕ್ಟೋಬರ್​ ಅಂತ್ಯದಲ್ಲಿ ಕೇರಳ ಪೊಲೀಸರ ಮುಂದೆ ಶರಣಾಗಿದ್ದ. ಅಲ್ಲದೆ ರಾಘವೇಂದ್ರ ಎಂಬಾತನನ್ನ ಕೇರಳ ಪೊಲೀಸರು ಅದಕ್ಕೂ ಎರಡು ದಿನದ  ಹಿಂದಷ್ಟೆ ಬಂಧಿಸಿದ್ದರು. ಇವರಿಬ್ಬರ ವಿಚಾರಣೆ ವೇಳೆ ಹೇಳಿಕೊಂಡಂತೆ, ಕಬಿನಿ ದಳದಲ್ಲಿ ಡೆಪ್ಯೂಟಿ ಕಮಾಂಡರ್​ ಆಗಿದ್ದ ಲಿಜೇಶ್​ ಅಲಿಯಾಸ್​ ರಾಮು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಇನ್ನೂ ಕಳೆದ ಕೆಲವು ವರ್ಷಗಳಿಂದ ನಕ್ಸಲ್​ ಗುಂಪಿನ ಕೊರಿಯರ್ ಬಾಯ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಘವೇಂದ್ರ ಬಿಜಿಕೆ ಹಾಗೂ ಸಾವಿತ್ರಿ ಸೇರಿದಂತೆ ಹಲವರ ಬಗ್ಗೆ ಮಾಹಿತಿ ನೀಡಿದ್ದ.

b g krishnamurthy

ಮೈಸೂರು ಊಟಿ ಮಾರ್ಗದಲ್ಲಿ ನಿಶ್ಚಿಂತೆಯಾಗಿ ಓಡಾಡಿಕೊಂಡಿದ್ದ ಬಿಜಿಕೆ

ಬಿ.ಜಿ ಕೃಷ್ಣಮೂರ್ತಿ ಕೇರಳದ ಗಡಿಭಾಗದಲ್ಲಿದ್ದರೂ. ಮೈಸೂರಿನಲ್ಲಿಯೇ ಹೆಚ್ಚು ಓಡಾಡಿಕೊಂಡಿದ್ದ ಎಂಬುದು ಮೂಲಗಳಿಂದ ತಿಳಿದು ಬಂದಿದೆ.ಮೈಸೂರಿನಲ್ಲಿ ಸಾರ್ವಜನಿಕವಾಗಿ ಓಡಾಡಿಕೊಂಡಿದ್ದರೂ ಪೊಲೀಸರಿಗೆ ಈತನೇ ಬಿಜಿಕೆ ಎಂದು ಗುರುತಿಸಲು ಸಾಧ್ಯವಾಗಿರಲಿಲ್ಲ. ಪೊಲೀಸರಿಗೆ ಶರಣಾದ ನಕ್ಸಲರು ಯಾವಾಗ ಮಾಹಿತಿದಾರರಾಗಿ ಬದಲಾಗುತ್ತಾರೋ..ಆಗ ಬಿಜಿಕೆಯ ಗೃಹಚಾರವೇ ಕೆಟ್ಟುಹೋಗಿತ್ತು. ನಕ್ಸಲ್ ಸಂಘಟನೆಗೆ ಅದು ದೊಡ್ಡ ಸೆಟ್ ಬ್ಯಾಕ್ ಕೂಡ ಆಗಿ ಹೋಯ್ತು. ಶರಣಾದ ನಕ್ಸಲರು ನೀಡಿದ ಮಾಹಿತಿ ಕೇರಳ ಪೊಲೀಸರಿದೆ ದೊಡ್ಡ ಲೀಡ್ ಸಿಕ್ಕಂತಾಯಿತು. ಆಗ ಕೇರಳ ಪೊಲೀಸರು ಬಿಜಿಕೆಗೆ ಬಲೆ ಬೀಸಲು ಖೆಡ್ಡಾ ತೋಡಿದ್ರು. ಅಂದುಕೊಂಡಂತೆ ಅಂದು ಮೈಸೂರು ಕೇರಳ ಗಡಿಭಾಗದ  ಟ್ರೈ ಜಂಕ್ಷನ್ ಮಾರ್ಗವಾಗಿ ಬಿ.ಜಿ ಕೃಷ್ಣಮೂರ್ತಿ ಕಾರಿನಲ್ಲಿ ಪಯಣಿಸುತ್ತಿರುವ ಮಾಹಿತಿ ಕೇರಳ ವೈನಾಡು ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ಕಾರ್ಯತಂತ್ರ ರೂಪಿಸಿದರು. ಮಾರುವೇಶದಲ್ಲಿ ಶಸ್ತ್ರಸಜ್ಜಿತರಾದರೂ, ನಿರಾಯುಧರಂತೆ ಕುಟುಂಬದವರು ಪ್ರಯಾಣಕ್ಕೆ ಹೋಗುವಂತೆ ರಸ್ತೆಯಲ್ಲಿ ಬಿಜಿಕೆಯನ್ನು ಹಿಂಬಾಲಿಸಿದರು.ಮುಂದೆ ಕಾರಿನಲ್ಲಿ ಸಾಗುತ್ತಿದ್ದ ಬಿಜಿಕೆ ಕಾರು ಇದ್ದಕ್ಕಿದ್ದ ಹಾಗೆ ಕೈ ಕೆಟ್ಟಿದೆ. ಆಗ ಬಿಜಿಕೆ  ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ದಾರಿಹೋಕರ ಬಳಿ  ಡ್ರಾಪ್ ಕೇಳುತ್ತಿದ್ದ. ಹಿಂಬದಿಯಿಂದ ಮಾರುವೇಶದಲ್ಲಿ ಫಾಲೋ ಮಾಡಿಕೊಂಡ ಬಂದ ಪೊಲೀಸರು ವಾಹನ ಚಲಾಯಿಸಿಕೊಂಡು ಬಿಜಿಕೆ ಸನಿಹವೇ ಬಂದರು. ಬಿಜಿಕೆ ಆ ಮಾರುವೇಶಧ ಪೊಲೀಸರಿಗೂ ಕೈ ಮಾಡಿ ನಿಲ್ಲಿಸುವಂತೆ ಮನವಿ ಮಾಡಿದ. ಪೊಲೀಸರು ಬಿಜಿಕೆ ಸಮಸ್ಯೆ ತಿಳಿಯುವ ನೆಪದಲ್ಲಿ ಡ್ರಾಪ್ ಮಾಡುವುದಾಗಿ ಕಾರು ಹತ್ತಿಸಿಕೊಂಡಿದ್ದಾರೆ ಅಷ್ಟೆ. ಆದ್ರೆ ಕಾರಿನಲ್ಲಿ ಸಾಗುತ್ತಿದ್ದಾಗಲೇ ಪೊಲೀಸರು ಗನ್ ಟ್ರಿಗ್ಗರ್ ಒತ್ತಿದಾಗಲೇ ನಾನು ಅಂದರ್ ಆಗಿದ್ದೇನೆ ಎಂದು ಬಿಜಿಕೆಗೆ ಗೊತ್ತಾಗಿದೆ.

b g krishnamurthy

ಹುಲಿ ಬೋನಿಗೆ ಕುರಿ ತಾನಾಗೆ ಹೋಗಿ ಸಿಕ್ಕಂತಾದ ಕಥೆಗೆ ಕೃಷ್ಣಮೂರ್ತಿ ಸಾಕ್ಷಿಭೂತನಾದ. 22 ವರ್ಷಗಳಿಂದ ಬಿಜಿಕೆ ಹೇಗಿದ್ದಾನೆ ಎಂದು ಗೊತ್ತಿರದ ಪೊಲೀಸರಿಗೆ, ಬಿಜಿಕೆ ಅರೆಸ್ಟ್ ಆದಾಗ ಅಚ್ಚರಿ ಆಶ್ಚರ್ಯ ಎರಡು ಮೂಡಿತ್ತು. ಮೈಸೂರಿಗೆ ಹಲವು ಬಾರಿ ಬಂದೋಗುತ್ತಿದ್ದ ಬಿಜಿಕೆ ಹಲವು ಬಾರಿ ಪೊಲೀಸರ ಸಮ್ಮುಖದಲ್ಲಿಯೇ ಚೆಕ್ ಪೋಸ್ಟ್ ಹಾದು ಹೋಗಿದ್ರೂ, ಆತನ ಸುಳಿವು ಪತ್ತೆಯಾಗಿರಲಿಲ್ಲ. ಈ ಮಾಹಿತಿಯನ್ನ ಆಧರಿಸಿ ಕೇರಳ ಪೊಲೀಸರು ವೈನಾಡುವಿನ ಸುಲ್ತಾನ್​ ಬತ್ತೇರಿಯಲ್ಲಿ ಬಿಜಿಕೆಯನ್ನ ಬಂಧಿಸಿದ್ದಾರೆ. ಅಲ್ಲದೆ ಈತನ ಜೊತೆಗಿದ್ದ ಸಾವಿತ್ರಿಯನ್ನು ಅರೆಸ್ಟ್​ ಮಾಡಿದ್ದಾರೆ. ಸಾವಿತ್ರಿ ಕಬಿನಿ ದಳದ ಕಮಾಂಡರ್ ಆಗಿದ್ದು, ವೈನಾಡು ಕೋಜಿಕೋಡ್​ನಲ್ಲಿ ಸಕ್ರಿಯವಾಗಿರುವ ಈ ದಳದ ಮುಖ್ಯಸ್ಥ ವಿಕ್ರಂಗೌಡನ ಪತ್ನಿ ಕೂಡ ಹೌದು. ಹೀಗೆ 22 ವರ್ಷಗಳಿಂದ ಪೊಲೀಸರಿಗೆ ತಾನ್ಯಾರೆಂಬ ಚಹರೆಯನ್ನೇ ತೋರಿಸಿದ ಬಿಜಿಕೆ, ತನ್ನ ಇರುವಿಕೆಯನ್ನು ಹೇಗೋ ಗೊತ್ತಾಗುವಂತೆ ಮಾಡಿಕೊಂಡು ಅಂದರ್ ಆಗಿದ್ದೇ ಅಚ್ಚರಿಯ ಸಂಗತಿ ನಕ್ಸಲ್​ ಮುಖಂಡ ಬಿ.ಜಿ ಕೃಷ್ಣ ಮೂರ್ತಿ ಮತ್ತು ಸಾವಿತ್ರಿ ಬಂಧನದ ಬೆನ್ನಲ್ಲೆ ತಮಿಳುನಾಡಿನ ವೆಲ್ಲೂರು ಪೊಲೀಸರು ಹೊಸಗದ್ದೆ ಪ್ರಭಾಳನ್ನು ಬಂಧಿಸುವ ಮೂಲಕ ನಕ್ಸಲ್ ಸಂಘಟನೆಗೆ ದೊಡ್ಡ ಹಿನ್ನಡೆಯನ್ನುಂಟುಮಾಡಿದ್ದಾರೆ. ಪ್ರಭಾ ಪತಿ, ನಕ್ಸಲ್ ಮುಖಂಡ ಬಿ.ಜಿ ಕೃಷ್ಣಮೂರ್ತಿ ಬಂಧನದ ಬೆನ್ನಲ್ಲೇ ಪತ್ನಿ ಹೊಸಗದ್ದೆ ಪ್ರಭಾ ತಮಿಳುನಾಡು ವೆಲ್ಲೂರು ಪೊಲೀಸರಿಗೆ ಶರಣಾಗತಿಯಾಗಿದ್ದಾಳೆ. ಪತಿ ಬಂಧನದ ನಂತರ ಮಾನಸೀಕ ಖಿನ್ನತೆಗೊಳಗಾಗಿದ್ದ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಪತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರಭಾ, ಕೃಷ್ಣಮೂರ್ತಿ ಬಂಧನದ ಬೆನ್ನಲ್ಲೆ ತಾನೂ ಕೂಡ ಪೊಲೀಸರಿಗೆ ಶರಣಾಗಿದ್ದಾಳೆ.

b g krishnamurthy

ಸಾವನ್ನಪ್ಪಿದ್ದಾಳೆ ಎಂದವಳು, ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಳು

ಹೊಸಗದ್ದೆ ಪ್ರಭಾ ಮೂಲತಃ ಆಗುಂಬೆ ಸನಿಹದ ಹೊಸಗದ್ದೆಯ ಗ್ರಾಮದವಳಾಗಿದ್ದು, ನಕ್ಸಲ್ ಸಂಘಟನೆಯಲ್ಲಿ ಮಂಚೂಣಿಯಲ್ಲಿದ್ದಳು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಂಘಟನೆಯನ್ನು ಮುನ್ನೆಡೆಸುತ್ತಿದ್ದವಳು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆಯಾದ ಬೆನ್ನಲ್ಲೆ ಹಲವು ಮಂದಿ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದರು. ಮತ್ತೆ ಕೆಲವರು ಸೈದ್ದಾತಿಂಕ ಬಿನ್ನಾಭಿಪ್ರಾಯದಿಂದ ಸಂಘಟನೆ ತೊರೆದರು, ಮತ್ತೆ ಕೆಲವರು ಪೊಲೀಸರಿಗೆ ಶರಣಾಗತಿಯಾದರು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆಯಾಗುತ್ತಿದ್ದಂತೆ ತಮ್ಮ ಕ್ಷೇತ್ರವ್ಯಾಪ್ತಿಯನ್ನು ಕರ್ನಾಟಕ ತಮಿಳುನಾಡು ಕೇರಳ ಗಡಿಭಾಗದಲ್ಲಿ ವಿಸ್ತರಿಸಿದ್ದರು.

b g krishnamurthy

2010 ರಲ್ಲಿ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು

2010 ರಲ್ಲಿ ನಕ್ಸಲ್ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದ ಮುಖಂಡರೊಬ್ಬರಿಗೆ ಪ್ರಭಾ ಸಾವನ್ನಪ್ಪಿದ್ದಾಳೆ ಆಕೆಗೆ ಶೃದ್ದಾಂಜಲಿ ಅರ್ಪಿಸಿ ಎಂದು ದೂರವಾಣಿ ಕರೆ ಬಂದಿತ್ತು. ಹೀಗಾಗಿ ಅಂದು ಗ್ರಾಮಸ್ಥರೆಲ್ಲಾ ಪ್ರಭಾ ಮನೆ ಮುಂದೆ ಜಮಾಯಿಸಿದ್ದರು. ಆದರೆ ಪೊಲೀಸರು ಪ್ರಭಾ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಆಕೆಯ ಶವ ಸಿಗದೆ ಡೆತ್ ಡಿಕ್ಲೇರ್ ಮಾಡಲು ಸಾಧ್ಯವಿಲ್ಲ ಎಂದು ಅಂದಿನ ಎಸ್ಪಿ ಮುರುಗನ್ ಹೇಳಿದ್ದರು. ಆದರೆ ನಕ್ಸಲ್ ಪ್ರಭಾ ಕೇರಳದಲ್ಲಿ ನಕ್ಸಲ್ ಸಂಘಟನೆಯಲ್ಲಿ ಸಕ್ರೀಯಳಾಗಿರುವ ಬಗ್ಗೆ ಆನಂತರದ ವರ್ಷಗಳಲ್ಲಿ ಪೊಲೀಸರಿಗೆ ಮಾಹಿತಿ ದಟ್ಟವಾಗಿ ಸಿಕ್ಕಿತ್ತು. ಈ ಮಧ್ಯೆ ಬಿ.ಜಿ ಕೃಷ್ಣಮೂರ್ತಿ ಸಾವಿತ್ರಿ ಕೇರಳ ಪೊಲೀಸರಿಂದ ಬಂಧನಕ್ಕೊಳಗಾದ ಒಂದು ತಿಂಗಳಲ್ಲಿ ಪ್ರಭಾ ತಮಿಳು ನಾಡು ಪೊಲೀಸರಿಗೆ ಶರಣಾಗಿದ್ದಳು. ಇದು ಆ ಕಾಲಕ್ಕೆ ಹಾಗೂ ಮಲೆನಾಡಿನ ಮೇನ್​ ಸ್ಟ್ರೀಮ್​ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.

b g krishnamurthy

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor