story of blind elephant in sakrebail ಕಾಡುಕಥೆಗಳ ಸರಣಿಯಲ್ಲಿ ಕೇಶವ ಫ್ರಾಮ್ ಸಕಲೇಶಪುರದ ಸ್ಟೋರಿಯ ಪಾರ್ಟ್ ಒನ್ನ್ನ ಈಗಾಗಲೇ ಮಲೆನಾಡ ಮುಂದಿಟ್ಟಿದ್ದೇವೆ. ಅದರ ಲಿಂಕ್ ಈ ಸ್ಟೋರಿಯ ಕೆಳಗಡೆಯಲ್ಲಿ ಕೊಟ್ಟಿದ್ದೇವೆ. ಸಕಲೇಶಪುರ ಕಾಡಿನಿಂದ ಸಕ್ರೆಬೈಲ್ ಕಾಡಿಗೆ ಬಂದ ಕೇಶವನ ಬದುಕನ್ನೆ ಗೆದ್ದ ಕಥೆ ಇಲ್ಲಿದೆ ಓದಿ!
ಕುರುಡ ಎಂದು ಕರೆಸಿಕೊಳ್ತಿದ್ದ ಆನೆಗೆ ಕೇಶವ ಎಂದರು ಮಾವುತರು
ಸಕ್ರೆಬೈಲಿಗೆ ಅತಿಥಿಯಾಗಿ ಬರುವ ಕಾಡಾನೆಗಳಿಗೆ ಮೊದಲು ನಾಮಕರಣ ಮಾಡುವುದು ಸಾಮಾನ್ಯ. ಇಲ್ಲೊಂದು ವಿಶೇಷತೆ ಇದೆ, ಸಕ್ರೆಬೈಲ್ ಅನ್ನೋದು ಸರ್ವಧರ್ಮ ಸಮನ್ವಯದ ಕೇಂದ್ರವಿದ್ದಂತೆ. ಇಲ್ಲಿ ತುಂಗೆ ಹಾಗೂ ಅಭಯಾರಣ್ಯದ ಸಂಬಂಧ ಬಿಟ್ಟರೇ, ಮತ್ಯಾವ ಭೇದಭಾವಗಳು ಇಣುಕಿಯು ಸಹ ನೋಡಲಾಗದು. ಉದಾಹರಣೆಗೆ ಹೇಳುವುದಾದರೆ, ಆನೆಗಳಿಗೆ ಹೆಸರಿಡುವಾಗ , ಮಕ್ಕಳಿಗೆ ಹೆಸರು ಇಡುವ ಹಾಗೆ, ನೋಡಿ ಮಾಡಿ ಹೆಸರಿಡಲಾಗುತ್ತದೆ. ಇಲ್ಲಿ ಮಾವುತರ ಪೈಕಿ ಬಹುತೇಕರು ಮುಸ್ಲಿಮರಾದರೂ, ಆನೆಗಳನ್ನ ದೇವರೆಂದೆ ಭಾವಿಸಿ, ಪೂಜಿಸುತ್ತಾರೆ. ಆನೆಗಳಿದ್ದರೇ ನಾವು ನಮ್ಮ ಬದುಕು ಎನ್ನುವ ಮಾವುತರು ಆನೆಗಳನ್ನ ಮೈ ಮುಟ್ಟಿ ನಮಸ್ಕರಿಸಿಯೇ ಮುಂದಿನ ಕೆಲಸಕ್ಕೆ ಅನುವು ಮಾಡಿಕೊಳ್ತಾರೆ.
ಈಗ ವಿಷಯಕ್ಕೆ ಬರೋಣ ಎಲ್ಲರಿಂದಲೂ ಕುರುಡಾನೆ ಎಂದೆ ಕರೆಸಿಕೊಳ್ತಿದ್ದ ಆನೆಗೆ, ಸಕ್ರೆಬೈಲ್ನಲ್ಲಿ ಅರಣ್ಯಾಧಿಕಾರಿಗಳು ಕೇಶವ ಎಂದು ನಾಮಕರಣ ಮಾಡಿದರು. ಶೆಟ್ಟಿಹಳ್ಳಿ ಕಾಡಿನಲ್ಲಿರುವ ಕ್ರಾಲ್ ಅಂದರೆ ಮರದ ದಿಣ್ಣೆಯ ಖೆಡ್ಡಾದಲ್ಲಿ ಕೇಶವನನ್ನು ಬಂಧಿಯನ್ನಾಗಿ ಮಾಡಲಾಯಿತು.

ಮೊದ ಮೊದಲು ಆರ್ತನಾದ, ಆರ್ಭಟ, ಆತಂಕ
ಮೊದಲು ಎರಡು ಮೂರು ದಿನ ಕೇಶವನ ಆರ್ತನಾದಕ್ಕೆ ಸಕ್ರೆಬೈಲು ಗ್ರಾಮಸ್ಥರೇ ಹೌಹಾರಿದ್ದರು. ಕುರುಡಾಗಿದ್ದ ಕೇಶವ ಖೆಡ್ಡಾದ ಮರದ ದಿಣ್ಣೆಗಳಿಗೆ ಹೊಡೆದುಕೊಳ್ಳುವ ಮೂಲಕ ಗಾಯ ಮಾಡಿಕೊಳ್ಳುತ್ತಿದ್ದ. 35 ವರ್ಷ ಕಾಡಿನಲ್ಲಿ ಯಾವ ಹಂಗಿಲ್ಲದೆ. ತನ್ನ ಜಾಣ್ಮೆಯಿಂದಲೇ ಕಾಡನ್ನು ಸುತ್ತಿದ್ದಿದ್ದ ಕೇಶವನಿಗೆ ಖೆಡ್ಡಾ ದೊಡ್ಡ ಶತ್ರುವಾಗಿ ಪರಿಣಮಿಸಿತ್ತು.
ಇದನ್ನು ವೈದ್ಯರು ಮತ್ತು ಮಾವುತರು ಅರಿಯಲು ಬಹಳ ಸಮಯ ಬೇಕಾಗಲಿಲ್ಲ. ಯಾರಾದರೂ..ಖೆಡ್ಡಾ ಬಳಿ ಹೋಗುತ್ತಿದ್ದಂತೆ ಮುನ್ನುಗ್ಗಿ ಸೊಂಡಲು ಬೀಸುತ್ತಿದ್ದ. ಕೇಶವನನ್ನು ನಿಯಂತ್ರಣಕ್ಕೆ ತರುವುದು ದೊಡ್ಡ ಸವಾಲಾಗಿ ಪರಿಣಮಿಸಿತು. ಈ ಆನೆಯನ್ನು ಪಳಗಿಸುವುದು ಒಂದೇ. ನೇಣಿಗೆ ಕೊರಳೊಡ್ಡೋದು ಒಂದೇ ಎಂಬ ತೀರ್ಮಾನಕ್ಕೆ ಮಾವುತರು ಬಂದಿದ್ರು. ಇಷ್ಟರ ನಡುವೆ ಆನೆಯ ಕಣ್ಣನ್ನು ಪರೀಕ್ಷಿಸಬೇಕು. ಆದರೆ ಚಿಕಿತ್ಸೆ ಕೊಡುವುದಾದರೂ ಹೇಗೆ ಎಂಬುದು ಪ್ರಶ್ನೆಯಾಗಿತ್ತು.
ಈ ನಡುವೆ ಮಾವುತರು ಕ್ರಾಲ್ ನಲ್ಲಿ ಕೇಶವ ಎಲ್ಲೂ ಅಲುಗಾಡದಂತೆ. ಕ್ರಾಲ್ನ ಆವರಣದೊಳಗೇನೆ ಮರದ ದಿಣ್ಣೆಗಳಿಂದ ಗೋಡೆಯನ್ನು ನಿರ್ಮಿಸಿದರು. ಆಗ ಕೇಶವ ಅಲುಗಾಡದೆ ಮರದ ದಿಣ್ಣೆಗಳ ನಡುವೆ ಬಂಧಿಯಾದ. ವೈದ್ಯ ವಿನಯ್ ಕುಮಾರ್, ಆನೆಯ ಕಣ್ಣು ಪರಿಕ್ಷಿಸಲು ಮತ್ತೊಂದು ಉಪಾಯ ಕಂಡುಕೊಂಡರು.ಆನೆಗೆ ಅರವಳಿಕೆ ನೀಡಿ. ಚಿಕಿತ್ಸೆ ಕೊಡುವ ಸಾಹಸಕ್ಕೆ ಕೈ ಹಾಕಿದರು. ಅರವಳಿಕೆಯನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂದು ನಿರ್ಧರಿಸಿ ಮೊದಲ ಸಲ ಚಿಕಿತ್ಸೆ ಆರಂಭಿಸಲಾಯ್ತು. ಕೇಶವ ಮಂಪರಿಗೆ ಜಾರಿದಾಗ ವಿನಯ್ ಆನೆಯ ಬಳಿ ಹೋಗಲು ಸಾಧ್ಯವಾಯಿತು. ಕ್ರಾಲ್ ಬಿಗಿಯಾಗಿದ್ದರಿಂದ ಕೇಶವ ಕೂಡ ಅಲುಗಾಡಲು ಸಾಧ್ಯವಾಗಲಿಲ್ಲ. ಆಗ ಮಾವುತ ಕಾವಾಡಿಗಳ ಸಹಾಯದಿಂದ ವಿನಯ್ ಚಿಕಿತ್ಸೆ ನೀಡಲು ಆರಂಭಿಸಿದರು. ಕೇಶವನ ಕಣ್ಣು ಹೊರಬಂದಂತೆ ಗೋಚರಿಸುತ್ತಿತ್ತು.ಕಣ್ಣುಗುಡ್ಡೆ ಬಿಳಿಯಾಗಿ ಹೊರಬಂದಿದ್ದರಿಂದ ಸಾವಾಕಾಶವಾಗಿಯೇ ಚಿಕಿತ್ಸೆ ನೀಡಲು ವಿನಯ್ ಆರಂಭಿಸಿದರು. ಇದಕ್ಕೆ ಪೂರಕವಾಗಿ ಮಾವುತ ಕಾವಾಡಿಯನ್ನು ಹಗಲು ರಾತ್ರಿ ಕೇಶವನ ಬಳಿ ಬಿಡಲಾಯಿತು.

ಕೇಶವನ ಪ್ರೀತಿ ಗಿಟ್ಟಿಸಿಲು, ಅದರೊಂದಿಗೆ ಹಗಲು, ರಾತ್ರಿ ಕಳೆದ ಮಾವುತರು
ಹೌದು ಬಿಡಾರಕ್ಕೆ ಬಂದ ಕೇಶವವನ್ನು ಪಳಗಿಸುವ ಮೊದಲು ಅದರ ಪ್ರೀತಿ ವಿಶ್ವಾಸ ಗಳಿಸುವುದು ಮಾವುತ ಕಾವಾಡಿಗಳ ಒಂದಂಶದ ಕಾರ್ಯವಾಗಿತ್ತು. ಅದಕ್ಕಾಗಿ ಮಾವುತ ಸಂಶುದ್ದೀನ್ ಹಾಗು ಕಾವಾಡಿ ಮುಬಾರಕ್ ರನ್ನು ನೇಮಿಸಲಾಯಿತು.
ಆರಂಭದಲ್ಲಿ ಸಂಶುದ್ದೀನ್ ಮತ್ತು ಮುಬಾರಕ್ ಕೇಶವನ ಬಳಿ ಹೋದಾಗಲೆಲ್ಲಾ ಸೊಂಡಲು ಬೀಸುತ್ತಿತ್ತು. ಇದನ್ನು ಮೊದಲೇ ಅರಿತಿದ್ದ ಇಬ್ಬರು. ಕೇಶವನ ಪ್ರೀತಿ ಗಳಿಸಲು ಹಗಲು ರಾತ್ರಿ ಆತನ ಬಳಿಯೇ ಲಂಗುರು ಹಾಕಿದರು. ಸಾಮಾನ್ಯವಾಗಿ ಆನೆಗಳ ಲಾಲನೆ ಪಾಲನೆ ಮಾಡುವಾಗ. ಆನೆಗಳಿಗೆ ಮಾವುತರು ತೋರುವ ಪ್ರೀತಿಯ ಆದಾರದಲ್ಲಿಯೇ ಆನೆಗಳು ಮಾತು ಕೇಳುತ್ತವೆ. ಈ ರೀತಿಯಲ್ಲಿ ಆನೆಗಳ ಮನವೊಲಿಸುವುದು ಸಹ ಸಾಂಪ್ರಾದಾಯಿಕ ಕಲೆ.

ಈ ಕಲೆಯನ್ನೇ ಕರಗತ ಮಾಡಿಕೊಂಡಿರುವ ಸಕ್ರೆಬೈಲು ಮಾವುತರು ಅದೆಂತಹ ಆನೆಗಳು ಬಿಡಾರಕ್ಕೆ ಬಂದರೂ. ಕೇವಲ ಒಂದರಿಂದ ನಾಲ್ಕು ತಿಂಗಳ ಒಳಗೆ ಆನೆಯನ್ನು ಪಳಗಿಸಿ, ಅದರ ಮೇಲೆ ಕೂರುವ ಮೂಲಕ ಅಚ್ಚರಿ ಮೂಡಿಸುತ್ತಾರೆ. ಹೀಗಾಗಿ ಖೆಡ್ಡಾದಲ್ಲಿದ್ದ ಕೇಶವನನ್ನು ಮಾತಿನ ಮೂಲಕವೇ. ಆತನ ವಿಶ್ವಾಸ ಗಳಿಸಲು ಮುಂದಾದರು ಸಂಶುದ್ದೀನ್ ಮತ್ತು ಮುಬಾರಕ್.
ಕೇಶವ ಆನೆ ಮಾವುತ ಕಾವಾಡಿ ದೇಹದ ವಾಸನೆ ಹಾಗು ದ್ವನಿಯನ್ನು ಗ್ರಹಿಸಲು ಆರಂಭಿಸಿದ. ಜಸ್ಟ್ ಮಾತ್ ಮಾತಲ್ಲೆ ಆನೆಯೊಂದಿಗೆ ಸಂಪರ್ಕ ಬೆಸದ ಸಂಶುದ್ದೀನ್ ಹಾಗೂ ಮುಬಾರಕ್, ಆನೆಯೊಂದಿಗೆ ಪ್ರತಿ ಕ್ಷಣವೂ ಮಾತನಾಡುತ್ತಿದ್ರು. ಹೀಗೆ ತನ್ನೊಂದಿಗೆ ಮಾತನಾಡುತ್ತಿದ್ದವರ ಧ್ವನಿಯನ್ನು ಗೃಹಿಸಲು ಆರಂಭಿಸಿದೆ ಕೇಶವ ಅವರ ವಾಸನೆಯನ್ನು ಪರಿಚಯಿಸಿಕೊಂಡ. ದಿನಕಳೆದಂತೆ ಸಂಶುದ್ದೀನ್ ಧ್ವನಿ ಕೇಳಿದರೇ ತನ್ನ ಬಳಿಯೇ ಮಾತನಾಡಿರಬೇಕು ಎಂದು ಘೀಳಿಡಲು ಆರಂಭಿಸಿದ ಕೇಶವ ಮುಬಾರಕ್ ಹಾಗೂ ಸಂಶುದ್ದೀನ್ ಇಬ್ಬರನ್ನು ತನ್ನ ಬಳಿ ಬಿಟ್ಟುಕೊಂಡ.

ಆನೆಗೂ ಇಷ್ಟವಾದ ಜನಪದದ ಹಾಡು!
ಕೆಲವೊಂದು ಕೇಳಲು ತಮಾಷೆ ಎನಿಸಬಹುದು. ಆದರೆ ಸಕ್ರೆಬೈಲ್ ಕ್ಯಾಂಪ್ನ ಆವರಣದಲ್ಲಿ ಹಕ್ಕಿಯ ಕೂಗು ಕೂಡ ಒಂದು ರೀತಿಯಲ್ಲಿ ಕೆಲಸ ಮಾಡುತ್ತದೆ. ಕೇಶವನ ವಿಷಯದಲ್ಲಿಯು ಸಹ ಸಂಶುದ್ದೀನ್ ಹಾಗೂ ಮುಬಾರಕ್ ಏನೇನೆಲ್ಲಾ ಮಾಡಿದ್ದರೆಂದರೆ, ಕೇಶವನ ಎದುರು ನಿಂತು ಜನಪದ ಹಾಡುಗಳನ್ನ ಹಾಡುತ್ತಿದ್ದರು. ಹಗಲು, ರಾತ್ರಿ ಆನೆಯೊಂದಿಗೆ ಕಳೆಯಬೇಕಾಗಿದ್ದರಿಂದ ಬೇಸರವೂ ಕಳೆವುದಕ್ಕಾಗಿ ಹಾಡುತ್ತಿದ್ದ ಇವರಿಬ್ಬರ ಹಾಡಿಗೆ ಕೇಶವ ರಿಯಾಕ್ಟ್ ಮಾಡುತ್ತಿದ್ದ. ಇದನ್ನ ಗಮನಿಸಿದ ಇಬ್ಬರು ಸಹ ಮೂರನೇ ಸ್ನೇಹಿತನಾಗಿ ಕೇಶವನನ್ನ ಗುರುತಿಸಿದರು. ಪ್ರತಿ ಕ್ಷಣದ ಸಮಾಚಾರಗಳನ್ನ ವಿಚಾರಿಸ್ತಿದ್ದ ಇಬ್ಬರು ಕೇಶವನಿಗೆ ಎಲ್ಲೋ ಆದ ಘಟನೆಗಳನ್ನ ಕೂಡ ಹೇಳುತ್ತಿದ್ರು. ಅದಕ್ಕೆಷ್ಟರ ಮಟ್ಟಿಗೆ ಅರ್ಥವಾಗುತ್ತಿತ್ತೋ ಏನೋ, ಆದರೆ ಇಬ್ಬರ ಸ್ನೇಹವನ್ನು ಕೇಶವ ಗಟ್ಟಿಗೊಳಿಸಿಕೊಂಡು ಬಿಟ್ಟಿದ್ದ.
ಬಿಡಾರದಲ್ಲಿ ಯಾವುದೇ ಮಾವುತ ಕಾವಾಡಿಗಳು ಕೇಶವನ ಹತ್ತಿರ ಹೋದರೂ ಸೊಂಡಲು ಬೀಸುತ್ತಿದ್ದ ಕೇಶವ. ಸಂಶುದ್ದಿನ್ ಮತ್ತು ಮುಬಾರಕ್ ಬಂದಾಗ ಮಾತ್ರ ಮೌನಕ್ಕೆ ಶರಣಾಗಿ ಸ್ಪಂದಿಸುತ್ತಿದ್ದ ಪ್ರತಿದಿನ ಊಟ ಉಪಚಾರ ಮಾಡುತ್ತಿದ್ದ ಮಾವುತರು. ನಂತರ ಕೇಶವನ ಮೇಲೆ ಕೈಯಾಡಿಸಿ..ಮಸಾಜ್ ಮಾಡುವಷ್ಟು ಹತ್ತಿರವಾದರು.

ಬಂಧನದಿಂದ ಮುಕ್ತನಾದ ಕೇಶವ
ಯಾವಾಗ ಕೇಶವ ಗೆಳಯನಾದ ಆಗಲೇ ಕ್ರಾಲ್ನಲ್ಲಿ ಹಾಕಲಾಗಿದ್ದ ಮರದ ದಿಣ್ಣೆಗಳನ್ನು ಸಡಿಲಿಸಿ ಕೇಶವನಿಗೆ ಕೊಂಚ ಸ್ವಾತಂತ್ರ ನೀಡಲಾಯಿತು. ಕೇಶವನ ಪ್ರೀತಿಗೆ ಫೀದಾ ಆದ ಮಾವುತ ಸಂಶುದ್ದೀನ್. ಕೇಶವನ ಮೇಲೆ ಕೂರುವಷ್ಟು ಮಟ್ಟಿಗೆ ಹತ್ತಿರವಾದ. ಇದು ಅರವಳಿಕೆ ನೀಡಿ ಚಿಕಿತ್ಸೆ ನೀಡುತ್ತಿದ್ದ ವೈದ್ಯ ವಿನಯ್ ಗೆ. ಇನ್ನು ಹತ್ತಿರದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಯಿತು. ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನ ನುರಿತ ವೈದ್ಯರ ತಂಡ ಹಾಗು ವಿನಯ್ ಜೊತೆಗೂಡಿ ಕೇಶವನ ಕಣ್ಣಿನ ಆರೈಕೆಯನ್ನು ಮಾಡಿದರು. ಹೊರಬಂದ ಕಣ್ಣುಗುಡ್ಡೆ ನೈಜ ಸ್ಥಿತಿಗೆ ತರುವಷ್ಟು ವಿನಯ್ ಚಿಕಿತ್ಸೆ ನೀಡಿದ್ದರು. ಆದರೆ ಅಂದತ್ವದಿಂದ ಕೇಶವನನ್ನು ಮುಕ್ತ ಮಾಡಲು ಸಾಧ್ಯವಾಗಲಿಲ್ಲ.ವಿನಯ್ ಗರಡಿಯಲ್ಲಿ ಕೇಶವನ ಕಣ್ಣುಗಳು ಕಾಂತಿಯುಕ್ತವಾಗಿ ಹೊಳೆದು, ಸಾಮಾನ್ಯ ಆನೆಯಂತೆ, ಸೆಟೆದು ನಿಲ್ಲುವಷ್ಟರ ಮಟ್ಟಿಗೆ ಆರೋಗ್ಯವಂತನಾದ. ಈಗ ಕೇಶವನ್ನು ನೋಡಿದರೆ. ನೀವು ಕುರುಡು ಎಂದು ಹೇಳಲು ಸಾಧ್ಯವೇ ಇಲ್ಲ.

ಸೋಮಣ್ಣ, ಬಾಲಣ್ಣ, ಕೇಶವ, ಏಕದಂತ
ಕ್ರಾಲ್ ಕಷ್ಟಗಳನ್ನ ಹೊರಬಂದ ಬಳಿಕ ಕೇಶವನಿಗೆ ಸೋಮಣ್ಣ, ಬಾಲಣ್ಣ, ಏಕದಂತ ಆನೆಗಳು ಫ್ರೆಂಡ್ಸ್ ಆದವು. ಮಾವುತ ಸಂಶುದ್ದಿನ್ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಓಡಾಡಲು ಆರಂಭಿಸಿದ ಕೇಶವನಿಗೆ ಬಿಡಾರದ ಸಿಬ್ಬಂದಿಗಳು ಭಾಷೆ ಹಾಗೂ ಕಮಾಂಡಿಂಗ್ ಕಲಿಸಲು ಮುಂದಾದರು. ಹಿರಿಯ ಮಾವುತರು ಜಮೇದಾರ್ ಗಳ ತಂಡ ಇದಕ್ಕಾಗಿ ಅಂಕುಶವನ್ನ ಬಳಸಲಿಲ್ಲ. ಪ್ರೀತಿ ವಿಶ್ವಾಸವನ್ನೆ ಅಸ್ತ್ರ ಮಾಡಿಕೊಂಡು ತರಭೇತಿ ನೀಡಲು ಆರಂಭಿಸಿದರು.

ಕಾಡಿನ ದಾರಿಯಲ್ಲಿ..ಹಳ್ಳ ಕೊಳ್ಳಗಳಲ್ಲಿ ತರಬೇತಿ.
ಕೇಶವನಿಗೆ ಅಂಧತ್ವ ಇರುವುದರಿಂದ ಆತ ತನ್ನೆದುರಿಗೆ ಎನೆಲ್ಲಾ ವಸ್ತುಗಳಿವೆ ಎಂಬುದನ್ನು ಗ್ರಹಿಸಬಲ್ಲ ಎಂಬುದನ್ನು ಅರಿಯಲು ಮುಂದಾದರು ಮಾವುತರು. ಹೀಗಾಗಿ ಆತನನ್ನ ಕಾಡಿನಲ್ಲಿ ವಾಕ್ ಮಾಡಿಸಿದರು ಆರಂಭಿಸಿದರು. ಆತನಿಗೆ ತನ್ನೆದುರಿಗೆ ಅಡ್ಡವಾಗಿ ಬರುವ ಮರಗಳ ಗ್ರಹಿಕೆ ಕಷ್ಟವಾಗಿತ್ತು.
ಇಂತಹ ಸಂದರ್ಭದಲ್ಲಿ ಸಂಶುದ್ದೀನ್ ಮತ್ತು ಮುಬಾರಕ್ ಮಾರ್ಗ ಬದಲಿಸುತ್ತಿದ್ದರು. ಹಳ್ಳಕೊಳ್ಳ ದಾಟುವಾಗ. ಅದಕ್ಕೆ ನೆಲದ ಹಾಸಿನ ಬಗ್ಗೆ ಪರಿಚಯಿಸಿದರು. ಇದಕ್ಕೆ ಮಾವುತ ಕಾವಾಡಿಗಳ ಆಜ್ಞೆಯನ್ನು ಹೇಗೆ ಪಾಲಿಸಬೇಕೆಂಬುದನ್ನು ಕೇಶವನಿಗೆ ಮನದಟ್ಟು ಮಾಡಿಕೊಟ್ಟರು. ಕೇಶವನ ಜೊತೆಗೆ ಸಂಗಾತಿಗಳಾಗಿ ಸೋಮಣ್ಣ,ಏಕದಂತ ಬಾಲಣ್ಣ ಎಂಬ ಆನೆಗಳನ್ನು ಒಟ್ಟಿಗೆ ಬಿಡಲಾಯಿತು. ಕೇಶವ ಈ ಸಂಗಾತಿ ಆನೆಗಳ ಗುಂಪಿನಲ್ಲಿಯೇ ಸರಾಗವಾಗಿ ನಡೆಯುದನ್ನು ಕಲಿಸಲಾಯಿತು. ಒಟ್ಟಿಗೆ ತನ್ನ ಲಾಲನೆ ಪಾಲನೆ ಮಾಡುವ ಮಾವುತ ಕಾವಾಡಿ ನನಗೆ ಎಲ್ಲಾ ರೀತಿಯ ರಕ್ಷಣಾತ್ಮಕವಾಗಿ ಶಕ್ತಿಯಾಗಿದ್ದಾರೆಂಬ ಅರಿವು ಕೇಶವನಿಗಿರುವ ಕಾರಣಕ್ಕೆ ಆತ ಅಂತಿಮವಾಗಿ ಮಾವುತ ಕಾವಾಡಿಗೆ ಶರಣಾಗಿ ಕಲಿಸಿದ್ದನ್ನೆಲ್ಲಾ ಕಲಿತ!

ಕೇಶವ ಕೇರ್ ಆಫ್ ಸಕ್ರೆಬೈಲ್
ಸರಿರಾತ್ರಿಯ ಹೊತ್ತನ್ನು ಸಹ ಕಾಡಿನಲ್ಲಿ ಕಳೆದು ವಾಪಸ್ ಹಗಲು ಬಿಡಾರಕ್ಕೆ ಬರುವಷ್ಟರ ಮಟ್ಟಿಗೆ ಕೇಶವ ಟ್ರೈನ್ ಆಗಿದ್ಧಾನೆ. ತನ್ನ ಬದುಕನ್ನ ಆತ ಬದಲಾಯಿಸಿಕೊಂಡ ರೀತಿಗೆ, ಶಹಬ್ಬಾಸ್ ಎನ್ನದಿರಲು ಸಾದ್ಯವೇ ಇಲ್ಲ. ಅರಣ್ಯ ಇಲಾಖೆ ಅತಿರಥ ಮಹಾರಥರೇ ಕೇಶವನನ್ನ ಕಂಡು ದಂಗಾಗಿದ್ದಾರೆ. ಹುಬ್ಬೇರಿಸಿದ್ದಾರೆ. ಆತನನ್ನ ತಮ್ಮ ಇಲಾಖೆಯ ಸಾಧನೆಯ ಹೆಮ್ಮೆಯೆಂದೇ ಭಾವಿಸುತ್ತಾರೆ. ಕೇಶವ ಫ್ರಾಮ್ ಸಕಲೇಶಪುರ ಎಂಬತ್ತಿದ್ದ ಕೇಶವ ಕೇರ್ ಆಫ್ ಸಕ್ರೆಬೈಲ್ ಎಂದು ಅಡ್ರೆಸ್ ತೋರಿಸುವಂತೆ ಮಾಡಿದ್ಧಾನೆ. ಈ ಕೇಶವ ಈತನ ಬದುಕಿಗೆ ಊರುಗೋಲಾಗಿ ನಿಂತಿದ್ದು ಸಕ್ರೆಬೈಲ್ ಕ್ಯಾಂಪ್.
ವೀಕೆಂಡ್ನಲ್ಲಿ ಕ್ಯಾಂಪ್ಗೆ ಹೋಗುವಾಗ, ಕೇಶವನನ್ನ ವಿಚಾರಿಸದೇ ಬರದಿರಿ, ಅಲ್ಲಿಯ ಮಾವುತರಿಗೆ ಒಂದು ವಿಶ್ ಮಾಡದೇ ಬರದಿರಿ. ಏಕೆಂದರೆ, ನೀವು ಹೇಳುವ ಒಂದು ಮಾತು, ಕ್ಯಾಂಪ್ನಲ್ಲಿರೋ ಮುಗ್ದ ಮುನಸ್ಸುಗಳಲ್ಲಿ ಹೂವಿನ ನಗುವನ್ನ ಅರಳಿಸಬಲ್ಲದು.
