blind elephant in sakrebail ಕಾಡಲ್ಲಿ ಸಿಕ್ಕ ಕುರುಡು ಆನೆ, ವನ್ಯಲೋಕದಲ್ಲಿ ಇತಿಹಾಸ ಬರೆದಿದ್ದು ಹೇಗೆ ಗೊತ್ತಾ!? ಸಕ್ರೆಬೈಲ್ ಬಿಡಾರದಲ್ಲಿ, ರಾಷ್ಟ್ರದಲ್ಲಿಯೇ ಹಿಂದೆಂದೂ ಸಾಧಿಸದ ರಾವಣ ‘ಟ್ರೈನಿಂಗ್’ ಕಥೆ! ಕೇಶವ ಫ್ರಾಮ್ ಸಕಲೇಶಪುರ!?: JP Exclusive Story! dont miss it
ಕಣ್ಣಿರುವ ಆನೆಯನ್ನು ಪಳಗಿಸುವುದೇ ದೊಡ್ಡ ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಎರಡು ಕಣ್ಣಿಲ್ಲದ ಕಾಡಾನೆಯನ್ನು ಪಳಗಿಸುವಲ್ಲಿ ಸಕ್ರೆಬೈಲು ಮಾವುತ ಕಾವಾಡಿಗಳು ಯಶಸ್ವಿಯಾದ ಸ್ಟೋರಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಗಜಲೋಕದ ಇತಿಹಾಸದಲ್ಲಿ..ಸಕ್ರೆಬೈಲು ಆನೆ ಬಿಡಾರ ಹೊಸ ಮೈಲುಗಲ್ಲನ್ನು ಸೃಷ್ಟಿಸಿದ ಯಶೋಗಾಥೆ. ಕಾಡಿನಲ್ಲಿ ಸೆರೆಸಿಕ್ಕ ಅಂಧ ಆನೆಗೆ..ಕೇವಲ ನಾಲ್ಕು ತಿಂಗಳಲ್ಲಿ ತರಬೇತಿ ನೀಡಿ ಭಾಷೆಯನ್ನು ಕಲಿಸಿದ್ದಾರೆ. ದೇಶದ ಇತಿಹಾಸದಲ್ಲಿಇದು ಪ್ರಥಮ,
ಸಕ್ರೆಬೈಲ್ ಪವರ್ ಫುಲ್ ಫ್ಲೇಸ್ ಆಫ್ ಎಲಿಫೆಂಟ್
ರಾಜ್ಯದ ಪ್ರತಿಷ್ಠಿತ ಆನೆ ಬಿಡಾರಗಳಲ್ಲಿ ಒಂದಾಗಿರುವ ಸಕ್ರೆಬೈಲು ಆನೆ ಬಿಡಾರದಲ್ಲಿ ನುರಿತ ಮಾವುತ ಕಾವಾಡಿಗಳಿರುವ ಕಾರಣಕ್ಕೆ ಇಲ್ಲಿ ವೈದ್ಯಲೋಕಕ್ಕೂ ಸವಾಲಾಗಿರುವ ಹಲವು ಪ್ರಕರಣಗಳಲ್ಲಿ ಅಚ್ಚರಿ ಮೂಡಿಸುವ ಘಟನೆಗಳು ನಡೆಯುತ್ತಲೇ ಇರುತ್ತದೆ..
ನರಹಂತಕ ಆನೆಗಳು ಇಲ್ಲಿ ಶಾಂತ ಸ್ವಭಾವ ತಾಳಿವೆ.ರೈತರ ಜಮೀನಿನಲ್ಲಿ ಘೀಳಿಟ್ಟು ಬೆಳೆ ಹಾನಿ ಮಾಡಿದ ಆನೆಗಳು ಮೌನಕ್ಕೆ ಶರಣಾಗಿವೆ.ರೌಡಿಯಂತೆ ಜನರನ್ನು ಕಂಡರೆ ಎರಗುವ ಆನೆಗಳು ಸಹ ಮಾವುತ ಕಾವಾಡಿಗಳ ಪ್ರೀತಿಗೆ ತಲೆಬಾಗಿ ಬದುಕು ಬದಲಿಸಿಕೊಂಡಿವೆ.ಮಠಮಾನ್ಯಗಳಲ್ಲಿ ಬೇಡವಾದ ಆನೆಗಳು ಸಹ ಮಾವುತರ ಪ್ರೀತಿಯ ಸೆಲೆಗೆ ಸಿಕ್ಕು ಬಿಡಾರದ ಅತಿಥಿಗಳಾಗಿವೆ.ಇನ್ನು ಆರೋಗ್ಯ ಹದಗೆಟ್ಟು ಸಾವಿನ ಮನೆಕದತಟ್ಟಿದ ಆನೆಗಳು..ಕಾಡಾನೆ ದಾಳಿಗೆ ಸಿಲುಕಿದ ಮದಗಜಗಳೆಲ್ಲಾ…ಇಲ್ಲಿ ಹೊಸಜೀವನ ಕಂಡುಕೊಂಡಿವೆ.

ಸಕ್ರೆಬೈಲು ಬಿಡಾರ ಒಂದು ರೀತಿಯಲ್ಲಿ ಆನೆಗಳ ಪಾಲಿಗೆ ಶಾಂತಿಧಾಮವಾಗಿದೆ. ಇದಕ್ಕೆಲ್ಲಾ ಕಾರಣ..ಇಲ್ಲಿನ ಸಿಬ್ಬಂದಿಗಳು ಆನೆಗಳಿಗೆ ತೋರುವ ಪ್ರೀತಿ ಮತ್ತು ಆರೈಕೆ ಹಾಗೂ ಲಾಲನೆ ಪಾಲನೆ ಮಾಡುವ ಶೈಲಿ.
ಸಾಂಪ್ರಾದಾಯಿಕ ಪದ್ಧತಿಯಲ್ಲಿಯೇ ಆನೆಗಳನ್ನು ಪಳಗಿಸುವ ಇಲ್ಲಿನ ಮಾವುತರು..ಈಗ ಮತ್ತೊಂದು ಚರಿತ್ರೆಯನ್ನು ಸೃಷ್ಟಿಸಿದ್ದಾರೆ..ಕಾಡಿನಲ್ಲಿ ಸೆರೆಸಿಕ್ಕ ಅಂಧ ಆನೆಗೆ..ಕೇವಲ ನಾಲ್ಕು ತಿಂಗಳಲ್ಲಿ ತರಬೇತಿ ನೀಡಿ ಭಾಷೆಯನ್ನು ಕಲಿಸಿ ಎಲ್ಲಾ ಆನೆಗಳಿಗೆ ಸರಿಸಮಾನವಾಗಿ ಒಡಾಡುವಂತೆ ಮಾಡಿದ್ದಾರೆ..ಅಂದಹಾಗೆ ಎರಡು ಕಣ್ಣುಗಳನ್ನು ಕಳೆದುಕೊಂಡು ಶಾಶ್ವತ ಅಂಧತ್ವದೊಂದಿಗೆ ಬಿಡಾರಕ್ಕೆ ಬಂದ ಆನೆಯ ಹೆಸರು ಕೇಶವ.

ಕೇಶವ ಫ್ರಾಮ್ ಸಕಲೇಶಪುರ
2018 ನವೆಂಬರ್ ತಿಂಗಳಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಕಾಡಿನಲ್ಲಿ ಸೆರೆಸಿಕ್ಕ ಗಂಡಾನೆಯೇ ಈ ಕೇಶವ. ಸಕಲೇಶಪುರದಲ್ಲಿ ಹಿಂಡನ್ನಗಲಿ ಬೇರ್ಪಟ್ಟು ಅಡ್ಡಾದಿಡ್ಡಿಯಾಗಿ ಕಾಡುಮೇಡು ರೈತರ ಹೊಲಗದ್ದೆಗಳಿಗೆ ನುಗ್ಗುತ್ತಿದ್ದ ಈ ಆನೆಗೆ ಎರಡು ಕಣ್ಣುಗಳಿಲ್ಲ ಎಂಬುದು ಸ್ಥಳೀಯ ಜನರಿಗೂ ಗೊತ್ತಿರಲಿಲ್ಲ..ಆನೆಯನ್ನು ಸೆರೆಹಿಡಿಯಲು ಹೋದ ವೈದ್ಯರು ಮಾವುತರಿಗೂ ಗೊತ್ತಿರಲಿಲ್ಲ.
ಕಾಡಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನುಗ್ಗುವ ಆನೆಯನ್ನು ನೋಡಿದ ಮಾವುತರು ಅದರ ಸನಿಹಕ್ಕೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆನೆಯನ್ನು ಸೆರೆಹಿಡಿಯಲು ಅರವಳಿಕೆ ಮದ್ದಿನಿಂದ ಡಾಟ್ ಮಾಡಿದಾಗ ಕೆಲವೇ ಕ್ಷಣಗಳಲ್ಲಿ ಆನೆ ಪ್ರಜ್ಞಾಹೀನವಾಗಿ ನೆಲಕ್ಕೆ ಉರುಳಿದೆ. ತಕ್ಷಣ.ವೈದ್ಯರು ಹಾಗು ಮಾವುತರು ಹಾಗು ಅರಣ್ಯ ಸಿಬ್ಬಂದಿಗಳು ಕೇವಲ 40 ನಿಮಿಷದಲ್ಲಿ ಆನೆಯನ್ನು ಬಂಧಿಯನ್ನಾಗಿ ಮಾಡಲು ಹಗ್ಗ ಕಟ್ಟುವ ಸಂದರ್ಭದಲ್ಲಿ ಒಂದು ಬದಿಯಲ್ಲಿ ಬಿದ್ದ ಕಾಡಾನೆ ಕಣ್ಣನ್ನು ನೋಡಿದಾಗ..ಅದರ ಕಣ್ಣುಗುಡ್ಡೆ ಬಿಳಿರೂಪದಲ್ಲಿ ಹೊರಬಂದಿತ್ತು.

ಕುರುಡು ಆನೆಯ ಚಿಕಿತ್ಸೆಗೆ ಮುಂದಾದ ವೈದ್ಯರು
ವೈದ್ಯ ವಿನಯ್ ಕುಮಾರ್ ಆನೆಯ ಕಣ್ಣನ್ನು ಪರೀಕ್ಷಿಸಿದಾಗ. ಒಂದು ಕಣ್ಣು ಕುರುಡಾಗಿರುವುದು ಗೊತ್ತಾಗಿದೆ. ನಂತರ ಆನೆಗೆ ಪ್ರಜ್ಞೆ ಬಂದ ಸಂದರ್ಭದಲ್ಲಿ ಎದ್ದಾಗ ಮತ್ತೊಂದು ಕಣ್ಣನ್ನು ನೋಡಿದ ವೈದ್ಯರಿಗೆ ಅದು ಕೂಡ ಕುರುಡಾಗಿರುವುದು ಗೊತ್ತಾಗಿದೆ.ಸುಮಾರು 35 ವರ್ಷದ ಆನೆ ಶಾಶ್ವತವಾಗಿ ಕಣ್ಣು ಕಳೆದುಕೊಂಡು ಕಾಡುಮೇಡುಗಳಲ್ಲಿ ಹೇಗೆ ಅಲೆಯುತ್ತಿತ್ತು. ಆಹಾರ ಹರಸಿಕೊಂಡು ಹೇಗೆ ಸಾಗುತ್ತಿತ್ತು ಎಂಬ ಅಚ್ಚರಿ..ಎಲ್ಲರನ್ನು ಕಾಡತೊಡಗಿತು.
ಕುರುಡಾಗಿರುವ ಆನೆಯ ಸ್ಥಿತಿ ಕಂಡು ಮಾವುತ ಕಾವಾಡಿಗಳು ಸೇರಿದಂತೆ ನೆರೆದಿದ್ದ ಜನರೆಲ್ಲರೂ ಮರುಗಿದರು.ಕಣ್ಣಿಲ್ಲದಿದ್ದರೂ. ತನ್ನ ಆಂಗಿಕ ಸೌಂದರ್ಯದಿಂದಲೇ ಎಲ್ಲರನ್ನು ಆಕರ್ಷಿಸಿತ್ತು ಈ ಕಾಡಾನೆ. ಕಾಡಿನಲ್ಲಿ ಸೆರೆಸಿಕ್ಕ ಆನೆಯನ್ನು ಕಾಡಿಗೆ ಬಿಡುವುದೋ ಅಥವಾ ರಾಜ್ಯದ ಯಾವುದಾದರೂ ಆನೆ ಬಿಡಾರಕ್ಕೆ ಸ್ಥಳಾಂತರಿಸುವುದೋ ಎಂಬ ಗೊಂದಲ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಾಡತೊಡಗಿತು.

ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದ ಕೇಶವ
ಕಣ್ಣು ಕುರುಡಾಗಿರುವ ಆನೆಯನ್ನು ಬಿಡಾರಕ್ಕೆ ತಂದು ಸಾಕುವುದು ಕಷ್ಟ. ಅದು 35 ವರ್ಷ ಕಾಡಿನಲ್ಲಿ ಬದುಕಿದ ಶೈಲಿಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಬಿಡಾರಕ್ಕೆ ತಂದರೆ ಅದರಿಂದ ಅಪಾಯವೇ ಹೆಚ್ಚು ಎಂಬ ಚರ್ಚೆಗಳು ನಡೆದವು. ಇದಕ್ಕೆ ಪೂರಕವೆಂಬಂತೆ ಪ್ರಜ್ಞೆ ಬಂದಾಗ ಕಾಡಾನೆಯೂ ಕೂಡ ಜನರ ಸದ್ದು ಕೇಳಿದ ಕಡೆ ಸೊಂಡಲು ಬೀಸತೊಡಗಿತ್ತು. ಈ ಕುರುಡಾನೆಯಿಂದ ಅಪಾಯವೇ ಹೆಚ್ಚು ಎಂಬುದನ್ನು ಅರಿತ ಕೆಲವು ಮಾವುತರು ಅದನ್ನು ಕಾಡಿನಲ್ಲಿಯೇ ಬಿಡುವುದು ಸೂಕ್ತ ಎಂಬ ಸಲಹೆ ನೀಡಿದರು.
ಆದರೆ ವೈದ್ಯ ವಿನಯ್ ಕುಮಾರ್ ಆನೆಗೆ ಸೂಕ್ತ ಚಿಕಿತ್ಸೆ ನೀಡಿದರೆ ಕಣ್ಣು ಬರುವ ಸಾಧ್ಯತೆಗಳು ಇರಬಹುದು. ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನ ವೈದ್ಯರ ಸಹಾಯ ಪಡೆದು ಆನೆಗೆ ಚಿಕಿತ್ಸೆ ನೀಡುವ ಮನಸ್ಸು ಮಾಡಿದರು. ಅದಕ್ಕೆ ಹಿರಿಯ ಅಧಿಕಾರಿಗಳು ಒಪ್ಪಿಗೆಯನ್ನು ನೀಡಿದರು.ಹಾಗಿದ್ದರೆ ಕುರುಡಾನೆಯನ್ನು ಯಾವ ಬಿಡಾರಕ್ಕೆ ಸ್ಥಳಾಂತರಿಸುವುದು ಎಂದು ಯೋಚಿಸುವಾಗಲೇ. ಅದು ಸಕ್ರೆಬೈಲು ಆನೆ ಬಿಡಾರವನ್ನು ಬೊಟ್ಟು ಮಾಡಿ ತೋರಿಸಿತ್ತು.

ಆನೆ ಕ್ಯಾಂಪ್ನಲ್ಲಿ ಕೇಶವನಿಗೆ ಆತ್ಮೀಯ ಸ್ವಾಗತ
ಸಕಲೇಶಪುರದಿಂದ ಕುರುಡಾನೆ ಸಕ್ರೆಬೈಲು ಬಿಡಾರಕ್ಕೆ ಬರುತ್ತಿರುವ ಸುದ್ದಿ ಕೇಳುತ್ತಿದ್ದಂತೆ ಗ್ರಾಮಸ್ಥರು ಆನೆ ಕ್ರಾಲ್ ನತ್ತ ಜಮಾಯಿಸಿದ್ದರು. ಸಕ್ರೆಬೈಲ್ ಕ್ಯಾಂಪ್ನಲ್ಲಿ ಆನೆಯನ್ನು ಕ್ರಾಲ್ ಗೆ ತಳ್ಳುವಾಗ ಅದು ಮಾಡಿದ ಅವಾಂತರ ಮಾವುತರಲ್ಲಿ ಮೊದಲು ಆತಂಕ ಭಯವನ್ನು ಸೃಷ್ಚಿಸಿತ್ತು. ಈ ಕಾಡಾನೆಯನ್ನು ಲಾಲನೆ ಪಾಲನೆ ಮಾಡುವುದು ಹೇಗೆ ಎಂಬ ಚಿಂತೆ ಮಾವುತರನ್ನು ಕಾಡತೊಡಗಿತು. ವೈದ್ಯ ವಿನಯ್ ಗೆ ಇನ್ನು ಪಳಗದ ಆನೆಯ ಬಳಿ ಹೋಗಿ ಹೇಗೆ ಕಣ್ಣಿಗೆ ಚಿಕಿತ್ಸೆ ನೀಡುವುದು ಎಂಬ ಸವಾಲುಗಳು ಎದುರಾದವು..ಆದಾಗ್ಯು, ತಮ್ಮ ಬಿಡಾರಕ್ಕೆ ಬಂದ ಅತಿಥಿಯನ್ನ ನಡುದಾರಿಯಲ್ಲಿ ಕೈ ಬಿಡುವ ಪ್ರಶ್ನೆಯೇ ಇಲ್ಲವೆಂದ ಮಾವುತರು, ವೈದ್ಯರು , ಅಧಿಕಾರಿಗಳು ಒಂದು ಕೈ ನೋಡೋಣ ಏನೋ ಮಾಡೋಣ, ಕೇಶವನಿಗೆ ದಾರಿ ಮಾಡೋಣ ಅಂತಲೇ ಅದನ್ನ ಆತ್ಮೀಯತೆಯಿಂದಲೇ ಪೂಜಿಸಿ ಬರಮಾಡಿಕೊಂಡರು.

ಕೇಶವ ಫ್ರಾಮ್ ಸಕಲೇಶಪುರ ಮುಂದೆ ಕೇಶವ ಕೇರ್ ಆಫ್ ಸಕ್ರೆಬೈಲ್ ಆಗಿದ್ದು ಹೇಗೆ ಅನ್ನೋದನ್ನ ನೀವು ತಿಳಿದುಕೊಳ್ಳಲೇಬೇಕು. ಅದು ಈಗ ನಾವು ಹೇಳಿದ್ದಕ್ಕಿಂತಲೂ ರೋಚಕವಾದ ಸ್ಟೋರಿ.. ಇನ್ನೊಂದು ಪಾರ್ಟ್ನಲ್ಲಿ ತಿಳಿಸುತ್ತೇವೆ. ಇದು ಮಲೆನಾಡು ಟುಡೇ ತಂಡ ಕಾಡು ಕಥೆಗಳ ಸರಣಿ! ಮಲೆನಾಡು ಅಂದರೆ ಕೇವಲ ಕಾಡು ಮೇಡು, ಕಾಡಂಚಿನ ಜನರಷ್ಟೆ ಅಲ್ಲದೆ ಇಲ್ಲಿರೋದು ರೋಚಕ ಬದುಕುಗಳು ಅದರ ಸುಂದರತೆಯನ್ನು ವಿವರಿಸುವ ಪ್ರಯತ್ನವಿದು ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ ಸಾಗುವ ಬಯಕೆ ಟುಡೆ ತಂಡದ್ದಾಗಿದೆ.
ಕೇಶವನ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: ಕೇಶವ ಫ್ರಾಮ್ ಸಕಲೇಶಪುರ, ಕೇಶವ ಕೇರ್ ಆಫ್ ಸಕ್ರೆಬೈಲ್ ಆಗಿದ್ದು ಹೇಗೆ ಅನ್ನೋದರ ಇನ್ನೊಂದು ಕಥಾ ಭಾಗ ಈ ವಿಡಿಯೋದ ಕೆಳಕ್ಕೆ ಇದೆ ಕ್ಲಿಕ ಮಾಡಿ