ಹೊಳೆಹೊನ್ನೂರು, ಮಲೆನಾಡು ಟುಡೆ ಸುದ್ದಿ : ವಾಲ್ ಕೇರ್ ಪುಟ್ಟಿ ಮಿಷನ್ ಅನ್ನು ಮನೆಯಲ್ಲಿ ಟ್ರಯಲ್ ನೋಡುವ ವೇಳೆ ಕರೆಂಟ್ ಶಾಕ್ ಹೊಡೆದು ಪೇಂಟರ್ ಒಬ್ಬರು ಮೃತಪಟ್ಟಿರುವ ಘಟನೆ ಹೊಳೆಹೊನ್ನೂರು ಸಮೀಪದ ಯಡೇಹಳ್ಳಿಯಲ್ಲಿ ನಡೆದಿದೆ. ಯಡೇಹಳ್ಳಿ ನಿವಾಸಿ ಶಾರುಖ್ ಖಾನ್ (26) ಮೃತ ದುರ್ದೈವಿ.
ಘಟನೆಯ ವಿವರ
ಪೇಂಟಿಂಗ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಾರುಖ್ ಖಾನ್ ಹೊಸದಾಗಿ ವಾಲ್ ಕೇರ್ ಪುಟ್ಟಿ (ಲಪ್ಪ) ಉಜ್ಜುವ ಮಿಷನ್ ಒಂದನ್ನು ಖರೀದಿಸಿದ್ದರು. ನಂತರ ಅದನ್ನು ಮನೆಗೆ ತಂದು ಟ್ರಯಲ್ ನೋಡಲು ಸ್ವಿಚ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆದಿದೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದರೂ, ದುರದೃಷ್ಟವಶಾತ್ ಶಾರುಖ್ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಶಾರುಖ್ಗೆ ಪತ್ನಿ, ಎರಡು ವರ್ಷದ ಹೆಣ್ಣು ಮಗು ಹಾಗೂ ಎರಡು ತಿಂಗಳ ಗಂಡು ಮಗು ಇದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
