Maharaja Trophy 2026 / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಇದೇ ಮೊದಲ ಸಲ ಶಿವಮೊಗ್ಗ ಕಪ್ ಗೆದ್ದಿದೆ, ಹಿಂದಿನ ಸೋಲುಗಳನ್ನ ಮೆಟ್ಟಿ ನಿಂತ ಶಿವಮೊಗ್ಗ ತಂಡ ಮಲ್ನಾಡಿಗರು ಈ ಸಲ ಕಪ್ ನಮ್ಮದೆ ಅಂತಾ ಹೇಳುವಂತಹ ಸಾಧನೆ ಮಾಡಿದ್ದಾರೆ.
ಹೌದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ದಿನ ಅಂದರೆ ಭಾನುವಾರ ನಡೆದ 2026ನೇ ಸಾಲಿನ ಡಿಎಸಿಎಸ್ಎಸ್ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಕದನದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 4 ವಿಕೆಟ್ಗಳಿಂದ ಶಿವಮೊಗ್ಗ ಯೋಧಾಸ್ ತಂಡ ಸೋಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದ ಬೆಂಗಳೂರು ಬ್ಲಾಸ್ಟರ್ಸ್, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್ ಕಲೆಹಾಕಿತ್ತು. ಸವಾಲಿನ ಗುರಿಯನ್ನು ಬೆನ್ನತ್ತಿದ ಶಿವಮೊಗ್ಗ ಯೋಧಾಸ್ , 19.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸುವ ಮೂಲಕ ಕಪ್ ಗೆದ್ದಿದೆ.
ಇನ್ನೂ ನಾಯಕ ಲುವ್ನಿತ್ ಸಿಸೋಡಿಯಾ ಅವರು 45 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 87 ರನ್ ಸಿಡಿಸಿದರು. ವೇಗಿ ಸಮಿತ್ ದ್ರಾವಿಡ್ ಅವರು ತುಷಾರ್ ಸಿಂಗ್ ಹಾಗೂ ಆದರ್ಶ್ ಪ್ರಜ್ವಲ್ ಅವರನ್ನು ಔಟ್ ಮಾಡುವ ಮೂಲಕ ಯೋಧಾಸ್ ತಂಡಕ್ಕೆ ಆಘಾತ ನೀಡಿದ್ದರು. ಆದರೆ, ಸಿಸೋಡಿಯಾ ಮತ್ತು ಎಂ.ಜಿ. ನವೀನ್ ಮೂರನೇ ವಿಕೆಟ್ಗೆ 68 ರನ್ಗಳ ಜೊತೆಯಾಟವಾಡಿ ಚೇತರಿಕೆ ನೀಡಿದರು.
ಇನ್ನೂ ಕೆ.ವಿ. ಅನೀಶ್ 15ನೇ ಓವರ್ನಲ್ಲಿ ರೋಹನ್ ನವೀನ್ ಬೌಲಿಂಗ್ನಲ್ಲಿ ಎರಡು ಬೃಹತ್ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಅನೀಶ್ ಕೇವಲ 19 ಎಸೆತಗಳಲ್ಲಿ 38 ರನ್ ಹಾಗೂ ಹರ್ಷಿಲ್ ಧರ್ಮಾನಿ 10 ಎಸೆತಗಳಲ್ಲಿ 17 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಪರ ಫೈಜಾನ್ ಖಾನ್ 8 ಎಸೆತಗಳಲ್ಲಿ 29 ರನ್ ಹಾಗೂ ರೋಹನ್ ನವೀನ್ 8 ಎಸೆತಗಳಲ್ಲಿ ಅಜೇಯ 25 ರನ್ ಬಾರಿಸಿದ್ದರು. ಕೊನೆಯ ಆರು ಓವರ್ಗಳಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 90 ರನ್ ಕಲೆಹಾಕಿತ್ತು. ಬೆಂಗಳೂರು ಪರ ಸಮಿತ್ ದ್ರಾವಿಡ್ 36 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
