Shivamogga District crime News / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳ ಪೈಕಿ, ಘಟನೆಯೊಂದರಲ್ಲಿ ಮೊಮ್ಮಗನೇ ತನ್ನ ಅಜ್ಜಿಯನ್ನುಕೊಲೆ ಮಾಡಿದ್ದಾನೆ. ಇನ್ನೊಂದೆಡೆ ಸಂಭವಿಸಿದ ಅಪಘಾತದಲ್ಲಿ ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ಇತ್ತ ವಿನೋಬನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ, ಇವೆಲ್ಲದರ ನಡುವೆ ಉದ್ಯಮಿಯೊಬ್ಬರು ಆನ್ಲೈನ್ ಸ್ಕ್ಯಾಮ್ನಲ್ಲಿ ಹಣ ಕಳೆದುಕೊಂಡಿದ್ದಾರೆ. ಘಟನೆ ವಿವರ ಹೀಗಿದೆ.
ಬೈಕ್ ಅಪಘಾತ: ಶಿಕ್ಷಕ ಸಾವು
ಆನಂದಪುರ: ರಾಷ್ಟ್ರೀಯ ಹೆದ್ದಾರಿ 69ರ ಸಾಗರ ರಸ್ತೆಯ ಜಂಬೆಕೊಪ್ಪ ಬಸ್ ನಿಲ್ದಾಣದ ಬಳಿ ಮಂಗಳವಾರ ನಡೆದ ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಶಿಕ್ಷಕ ಸಿ. ನಾರಾಯಣಪ್ಪ (57) ಮೃತಪಟ್ಟಿದ್ದಾರೆ. ಇವರು ಆನಂದಪುರ ಕಡೆಯಿಂದ ಸ್ವಗ್ರಾಮ ನೇದರವಳ್ಳಿ ತೆರಳುತ್ತಿರುವ ಸಂದರ್ಭದಲ್ಲಿ ಸಾಗರ ಕಡೆಯಿಂದ ಆನಂದಪುರ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಶಿಕ್ಷಕ ಸಿ.ನಾರಾಯಣಪ್ಪ ಗಾಯಗೊಂಡಿದ್ದು ಅವರನ್ನು ಸಾಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯುತ್ತಿರುವಾಗ ಸಾವನ್ನಪ್ಪಿದ್ದಾರೆ.
ವ್ಯಕ್ತಿಯ ಮೇಲೆ ಹಲ್ಲೆ
ಶಿವಮೊಗ್ಗ: ವಿನೋಬನಗರದಲ್ಲಿ ಮನೆಯೊಂದರ ಬಳಿ ಇದ್ದ ಪಕ್ಕದ ಖಾಲಿ ಜಾಗದಲ್ಲಿ ಕುಳಿತು ಮದ್ಯಪಾನ ಮಾಡುತ್ತಾ ಮೊಬೈಲ್ ನೋಡುತ್ತಿದ್ದಾಗ ಬೈಕ್ನಲ್ಲಿ ಬಂದು ಹಲ್ಲೆ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆಯಲ್ಲಿ ರವಿ ಅಲಿಯಾಸ್ ಜುಟ್ಟು (30) ಎಂಬಾತ ಗಾಯಗೊಂಡಿದ್ದು, ವಿನೋಬನಗರ ಪೊಲೀಸರು ತನಿಖೆ ಕೈಗೊಂಡು ಒಬ್ಬರನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆದಿದೆ.
ಅಜ್ಜಿಯನ್ನೇ ಕೊಂದ ಮೊಮ್ಮಗ
ಶಿವಮೊಗ್ಗ; ಮೊಮ್ಮಗನೇ ತನ್ನ ಅಜ್ಜಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮಿಳಘಟ್ಟ ವಾರ್ಡ್ ಆನಂದರಾವ್ ಬಡಾವಣೆಯಲ್ಲಿ ಬುಧವಾರ ನಡೆದಿದೆ. ಸುಶೀಲಮ್ಮ (65) ಎಂಬುವವರು ಮೃತಪಟ್ಟಿದ್ದು, ಕಿಶೋರ್ (26) ಕೊಲೆ ಮಾಡಿ ಪರಾರಿಯಾಗಿದ್ದಾನೆ. ಒಂದು ವಾರದ ಹಿಂದಷ್ಟೇ ಜಗಳವಾಗುತ್ತಿರುವುದಾಗಿ ಕುಟುಂಬದವರು ಠಾಣೆಗೆ ಬಂದಿದ್ದರು, ಆಗ ಎಚ್ಚರಿಸಿ ಕಳಿಸಲಾಗಿತ್ತು. ಆದರೆ, ಇದೀಗ ಮೊಮ್ಮಗನೇ ಅಜ್ಜಿಯನ್ನೇ ಕೊಲೆ ಮಾಡಿದ್ದಾನೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್.ಪಿ ಬಿ.ನಿಖಿಲ್ ಭೇಟಿ ಪರಿಶೀಲಿಸಿದ್ದಾರೆ. ಮೂಲಗಳ ಪ್ರಕಾರ, ಆರೋಪಿ ವಿರುದ್ಧ ಈ ಹಿಂದೆ ಬೆಟ್ಟಿಂಗ್, ಗಾಂಜಾ ಸೇವನೆ ಮತ್ತು ಮಾರಾಟದ ಪ್ರಕರಣಗಳು ದಾಖಲಾಗಿವೆ. ಗಾಂಜಾ ವಿಚಾರಕ್ಕೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ತನಿಖೆ ಮುಂದುವರಿದಿದೆ.


