ಶಿವಮೊಗ್ಗ: ಜಿಲ್ಲೆಯಲ್ಲಿ 112 ಪೊಲೀಸ್ ತುರ್ತು ಸಿಬ್ಬಂದಿಗೆ ನಿತ್ಯವೂ ಹತ್ತಾರು ರೀತಿಯ ವಿಚಾರಗಳಿಗೆ ಕರೆಗಳು ಬರುತ್ತಿರುತ್ತವೆ. ಅದರಲ್ಲಿ ಬರುವ ಕೆಲವು ಪ್ರಕರಣಗಳು ತುಂಬಾ ವಿಚಿತ್ರವಾಗಿದ್ದರೂ ಸಹ, ಹೀಗೆ ಮಾಡಿದರೆ ಕಾನೂನು ಪ್ರಕಾರ ತಪ್ಪಾಗುತ್ತದೆ ಎಂಬ ಅರಿವು ಮೂಡುವುದು ಇಂತಹ ಘಟನೆಗಳು ಬೆಳಕಿಗೆ ಬಂದಾಗ ಮಾತ್ರ. ಇದೀಗ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಸಹ ಅಂತಹದ್ದೇ ಒಂದು ವಿಚಿತ್ರ ಘಟನೆ ನಡೆದಿದ್ದು, ಗದ್ದೆಯಲ್ಲಿ ಹಕ್ಕಿ ಓಡಿಸಲು ರೈತನೊಬ್ಬ ಮಾಡಿದ ಪ್ಲಾನ್ ನೋಡಿ ಸ್ಥಳೀಯರು ನೇರವಾಗಿ 112 ಪೊಲೀಸರಿಗೆ ದೂರು ನೀಡಿದ್ದಾರೆ.
Shivamogga ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಸಾಮಾನ್ಯವಾಗಿ ರೈತರು ತಮ್ಮ ಹೊಲ-ಗದ್ದೆಗಳಿಗೆ ಪ್ರಾಣಿ-ಪಕ್ಷಿಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಗದ್ದೆಯ ಸುತ್ತ ಗಂಟೆ ಕಟ್ಟೋದು, ಬೆಲ್ಚಪ್ಪ (ಮನುಷ್ಯನ ಆಕಾರದ ಗೊಂಬೆ) ನಿಲ್ಲಿಸೋದನ್ನು ನಾವು ನೋಡಿಯೇ ಇರುತ್ತೇವೆ. ಆದರೆ, ಇಲ್ಲಿನ ರೈತನೊಬ್ಬ ಹಕ್ಕಿಗಳನ್ನು ಓಡಿಸಲು ಗದ್ದೆಯಲ್ಲೇ ದೊಡ್ಡ ಧ್ವನಿವರ್ಧಕವನ್ನು ( ಸ್ಪೀಕರ್) ಅಳವಡಿಸಿದ್ದಾನೆ. ಇದರಿಂದ ಸುತ್ತಮುತ್ತಲಿನ ಸ್ಥಳೀಯರಿಗೆ ತೀವ್ರ ಕಿರಿಕಿರಿ ಉಂಟಾಗಿದ್ದು, ಶಬ್ದ ಮಾಲಿನ್ಯ ತಡೆಯಲಾರದೆ ಅವರು ಕೂಡಲೇ 112 ಪೊಲೀಸ್ ಸಿಬ್ಬಂದಿಗೆ ಫೋನ್ ಮಾಡಿ ದೂರು ನೀಡಿದ್ದಾರೆ.
ದೂರು ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ 112 ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಧ್ವನಿವರ್ಧಕ ಅಳವಡಿಸಿದ್ದ ರೈತ ಆ ಸಮಯದಲ್ಲಿ ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಪೊಲೀಸರೇ ಸ್ವತಃ ಆ ಧ್ವನಿವರ್ಧಕವನ್ನು ಬಂದ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲೂ ಇಂತಹದ್ದೇ ಕಿರಿಕಿರಿ ಮುಂದುವರಿದರೆ ನೇರವಾಗಿ ಪೊಲೀಸ್ ಠಾಣೆಗೆ ಬಂದು ಅಧಿಕೃತ ಕಂಪ್ಲೆಂಟ್ ನೀಡುವಂತೆ ಸ್ಥಳೀಯರಿಗೆ ತಿಳಿಸಿದ್ದಾರೆ.





