ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಗ್ರಾಮಮವೊಂದರ ಯುವತಿಗೆ ಕೇರಳ ಲಾಟರಿ ಬಂದಿದೆ ಎಂದು ನಂಬಿಸಿ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಘಟನೆಯ ವಿವರ
ತಾಲೂಕಿನ ಗ್ರಾಮವೊಂದರ ಯುವತಿಯ ಮೊಬೈಲ್ಗೆ ಅಪರಿಚಿತ ನಂಬರ್ನಿಂದ ಕರೆಯೊಂದು ಬಂದಿತ್ತು. ಕರೆ ಮಾಡಿದ ವ್ಯಕ್ತಿಗಳು ತಾವು ಕೇರಳ ಲಾಟರಿ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಪ್ರಸ್ತುತ ಕೇರಳ ಲಾಟರಿ ಹೆಚ್ಚು ಟ್ರೆಂಡಿಂಗ್ನಲ್ಲಿ ಇರೋದ್ರಿಂದ, ಇದನ್ನು ನಿಜವೆಂದು ನಂಬಿದ ಯುವತಿ ಅವರೊಂದಿಗೆ ಮಾತುಕತೆ ಮುಂದುವರಿಸಿದ್ದಾರೆ.
ಈ ವೇಳೆ ವಂಚಕರು, ಮೇಡಂ, ಕೇವಲ 50 ರೂಪಾಯಿಗೆ ಒಂದು ಲಾಟರಿ ಮಾರಾಟ ಮಾಡುತ್ತಿದ್ದೇವೆ. ನೀವು 50 ರೂಪಾಯಿಯ ಎರಡು ಲಾಟರಿಗಳನ್ನು ಖರೀದಿಸಿ ಎಂದು ಆಮಿಷ ಒಡ್ಡಿದ್ದಾರೆ. ಇದನ್ನು ನಂಬಿದ ಯುವತಿ ತಕ್ಷಣವೇ ಅವರ ಖಾತೆಗೆ 100 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ನೂರು ರೂಪಾಯಿ ಪಡೆದ ನಂತರ ವಂಚಕರು ಯುವತಿಯನ್ನು ಹಂತ ಹಂತವಾಗಿ ವಂಚಿಸಲು ಸಂಚು ರೂಪಿಸಿದ್ದಾರೆ. ಯುವತಿಗೆ ಕರೆ ಮಾಡಿ, ನಿಮಗೆ ಲಾಟರಿ ಬಂದಿದೆ ಎಂದು ನಂಬಿಸಿ ವಾಟ್ಸಾಪ್ನಲ್ಲಿ ಪೇಕ್ ಲಾಟರಿಯ ಇಮೇಜ್ನ್ನು ಕಳುಹಿಸಿದ್ದಾರೆ.
ನಂತರ್ ಲಾಟರಿ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲು ಟಿಡಿಎಸ್ ಹಾಗೂ ವಿವಿಧ ತೆರಿಗೆಗಳನ್ನು ಪಾವತಿಸಬೇಕು ಎಂದು ವಂಚಕರು ಯುವತಿಯನ್ನು ನಂಬಿಸಿದ್ದಾರೆ.ಇದನ್ನು ಸತ್ಯವೆಂದು ಭಾವಿಸಿದ ಯುವತಿ, ವಂಚಕರು ಹೇಳಿದ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1,99,710 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ.ಯಾವಾಗ ಇಷ್ಟೊಂದು ದೊಡ್ಡ ಮೊತ್ತದ ಹಣ ಕೈಸೇರಿತೋ, ಆ ಕೂಡಲೇ ವಂಚಕರು ತಮ್ಮ ಮೊಬೈಲ್ ನಂಬರ್ಗಳನ್ನು ಬ್ಲಾಕ್ ಮಾಡಿದ್ದಾರೆ. ಇದರಿಂದ ತಾನು ಮೋಸ ಹೋಗಿರುವುದನ್ನು ಅರಿತ ಯುವತಿ, ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
