ಶಿವಮೊಗ್ಗ ಜಿಲ್ಲಾ ಸುದ್ದಿ! ಆಂಬುಲೆನ್ಸ್​, ಆಗುಂಬೆ, VISL, ವಿನೋಬನಗರದ ಘಟನೆಗಳ ಕಂಪ್ಲೀಟ್ ಡಿಟೇಲ್ಸ್​!

ಹಂಚಿಕೊಳ್ಳಿ
WhatsApp Facebook X Telegram
Shivamogga District News

ಶಿವಮೊಗ್ಗ ಜಿಲ್ಲಾ ಸುದ್ದಿ / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರಮುಖ ಘಟನೆಗಳ ವಿವರ ಇವತ್ತಿನ ಈ ಬೆಳಗಿನ ವರದಿಯಲ್ಲಿವೆ. ಆನಂದಪುರ ವ್ಯಾಪ್ತಿಯ ಐಗಿನಬೈಲು ತಿರುವಿನಲ್ಲಿ ಅಂಬ್ಯುಲೆನ್ಸ್ ಅಪಘಾತಕ್ಕೀಡಾಗಿದ್ದರೆ, ಆಗುಂಬೆ ಮತ್ತು ವಿನೋಬನಗರ ಪೊಲೀಸರು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಭದ್ರಾವತಿಯಲ್ಲಿ ವಿಐಎಸ್ಎಲ್ ಕಾರ್ಖಾನೆಗೆ ತೆರಳಿದ್ದ ಕಾರ್ಮಿಕರೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಿದೆ.

ಶಿವಮೊಗ್ಗ ಜಿಲ್ಲಾ ಸುದ್ದಿ : ಐಗಿನಬೈಲು ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಅಂಬ್ಯುಲೆನ್ಸ್

ಶಿವಮೊಗ್ಗದಿಂದ ಸಾಗರಕ್ಕೆ ಹೋಗುತ್ತಿದ್ದ ಖಾಲಿ ಅಂಬ್ಯುಲೆನ್ಸ್ ಒಂದು ಚಾಲಕನ ಹತೋಟಿ ಕಳೆದುಕೊಂಡು ಆನಂದಪುರ ಠಾಣಾ ವ್ಯಾಪ್ತಿಯ ಐಗಿನಬೈಲು ತಿರುವಿನ ಸಮೀಪ ಉರುಳಿಬಿದ್ದಿದೆ. ಜೂನ್ 5 ಶುಕ್ರವಾರ ಬೆಳಿಗ್ಗೆ ಎದುರು ದಿಕ್ಕಿನಿಂದ ಅತಿ ವೇಗವಾಗಿ ಧಾವಿಸಿ ಬಂದ ಬೊಲೆರೋ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಅಂಬ್ಯುಲೆನ್ಸ್ ಚಾಲಕ ದಿಢೀರ್ ಬ್ರೇಕ್ ಒತ್ತಿದ್ದ , ಪರಿಣಾಮ ವಾಹನ ರಸ್ತೆ ಬದಿಗೆ ಉರುಳಿದ್ದು, ಬೊಲೆರೋ ವಾಹನದ ಮುಂಭಾಗಕ್ಕೂ ತೀವ್ರ ಹಾನಿಯಾಗಿದೆ. ಅಂಬ್ಯುಲೆನ್ಸ್ ಒಳಗೆ ರೋಗಿಗಳು ಇಲ್ಲದೆ ಇದ್ದುದರಿಂದ ಸಂಭಾವ್ಯ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಆಗುಂಬೆ ಪೊಲೀಸರಿಂದ ಮೊಬೈಲ್ ಕಳ್ಳರ ಬಂಧನ

ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣುವಳ್ಳಿ ಸಮೀಪದ ತೋಟದ ಮನೆಯೊಂದರಲ್ಲಿ ಕಾರ್ಮಿಕರು ನಿದ್ರಿಸುತ್ತಿದ್ದಾಗ ಕಿಟಕಿ ಮೂಲಕ ಮೊಬೈಲ್ ಫೋನ್ ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ಆಗುಂಬೆ ಪೊಲೀಸರು ಸೆರೆಹಿಡಿದಿದ್ದಾರೆ. ಬಂಧಿತರನ್ನು ಬಾಲರಾಜ್ ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಇವರಿಂದ 1,71,000 ರೂಪಾಯಿ ಮೌಲ್ಯದ 7 ಮೊಬೈಲ್ ಫೋನ್ ಗಳು ಹಾಗೂ 1 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಕಳ್ಳತನದ ಕುರಿತು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿಯಲ್ಲಿ ವಿಐಎಸ್ಎಲ್ ಗುತ್ತಿಗೆ ಕಾರ್ಮಿಕ ನಿಗೂಢ ನಾಪತ್ತೆ

ಕೆಲಸಕ್ಕೆಂದು ಮನೆಯಿಂದ ತೆರಳಿದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರೊಬ್ಬರು ವಾಪಸ್ಸಾಗದೆ ನಾಪತ್ತೆಯಾಗಿರುವ ಬಗ್ಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ 15 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಭರತೇಶ್ (36) ಎಂಬುವವರು ಕಾಣೆಯಾಗಿದ್ದಾರೆ. ಜೂನ್ 1ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಯಿಂದ ಟಿವಿಎಸ್ ರೈಡರ್ ನಲ್ಲಿ ಹೊರಟಿದ್ದ ಇವರ ಮೊಬೈಲ್ ಸಂಜೆಯ ಹೊತ್ತಿಗೆ ಸ್ವಿಚ್ ಆಫ್ ಆಗಿದೆ. ಸುಳಿವು ಸಿಗದ ಕಾರಣ ಪತ್ನಿ ಸವಿತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಳ್ಳತನ ಪ್ರಕರಣ ಭೇದಿಸಿದ ವಿನೋಬನಗರ ಪೊಲೀಸರು

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹುಡ್ಕೋ ಕಾಲೋನಿಯಲ್ಲಿ ಒಂಬತ್ತು ತಿಂಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದಾರೆ. 2025ರ ಆಗಸ್ಟ್ 3ರಿಂದ 10ರ ನಡುವೆ ಉಷಾ ಎಂಬುವವರ ಮನೆಯಿಂದ 12 ಗ್ರಾಂ ಚಿನ್ನಾಭರಣ ಕಳುವಾಗಿತ್ತು. ಈ ಬಗ್ಗೆ 2026ರ ಮೇ 26ರಂದು ದೂರು ದಾಖಲಾಗಿತ್ತು. ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಸಂತೋಷಕುಮಾರ್ ಡಿ.ಕೆ. ನೇತೃತ್ವದ ತಂಡವು, ಶಿವಮೊಗ್ಗ ತಾಲ್ಲೂಕಿನ ರಟ್ಟೆಹಳ್ಳಿಯ ಲೋಹಿತ್ ಕುಮಾರ್ ಬಿ. (29) ಎಂಬಾತನನ್ನು ಬಂಧಿಸಿದೆ. ಆತನಿಂದ 1.50 ಲಕ್ಷ ರೂಪಾಯಿ ಮೌಲ್ಯದ 10.7 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor