ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಣಿ ಕಳ್ಳತನ ಪ್ರಕರಣ ವರದಿಯಾಗಿವೆ. ವಿನೋಬನಗರ ಹಾಗೂ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ. ಈ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಬಿಎನ್ಎಸ್ 2023 ರ ಅಡಿಯಲ್ಲಿ ಕೇಸ್ ಸಹ ದಾಖಲಾಗಿದೆ.
ಎರಡು ಸ್ಟೇಷನ್ ವ್ಯಾಪ್ತಿಯಲ್ಲಿ ಎರಡು ಕೇಸ್!
ಮೊದಲನೇ ಪ್ರಕರಣ ಕಾಶೀಪುರದ ಲಕ್ಕಪ್ಪ ಲೇಔಟ್ನ 2ನೇ ಕ್ರಾಸ್ನಲ್ಲಿ ನಡೆದಿದೆ. 46 ವರ್ಷದ ಉದ್ಯಮಿ ಹೆಚ್.ಎಲ್ ಸೋಮಶೇಖರ್ ಅವರು ಜಮೀನು ಮಾರಾಟದಿಂದ ಬಂದ ಹಣದಲ್ಲಿ 700000 ರೂಪಾಯಿಗಳನ್ನು ತಾವು ನಿರ್ಮಾಣ ಮಾಡುತ್ತಿರುವ ಮನೆಯ ರೂಮ್ನಲ್ಲಿದ್ದ ಬೀರೊದಲ್ಲಿ ಭದ್ರವಾಗಿ ಇರಿಸಿದ್ದರು. ದಿನಾಂಕ 26/05/2026 ರಂದು ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ಬೀರುವಿನಲ್ಲಿ ದುಡ್ಡು ಇರುವುದನ್ನ ಸ್ವತಃ ಅವರೇ ಗಮನಿಸಿದ್ದರು. ಆದರೆ ಸಂಜೆ ನಾಲ್ಕು ಗಂಟೆಗೆ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಕೊಡಲು ಮುಂದಾದಾಗ, ಬೀರು ಓಪನ್ ಆಗಿದ್ದನ್ನ ಗಮನಿಸಿದ್ದಾರೆ. ಹೀಗಾಗಿ ಸಂಶಯಗೊಂಡು ಲಾಕರ್ ನೋಡಿದಾಗ ಅದರಲ್ಲಿದ್ದ ಒಟ್ಟು 700000 ರೂಪಾಯಿ ಕಳುವಾಗಿರೋದು ಗೊತ್ತಾಗಿದೆ. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ವಿನೋಬನಗರ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇತ್ತ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗದ ವಾಜಪೇಯಿ ಬಡಾವಣೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. 30 ವರ್ಷದ ಮಾರುತಿ ಎಂಬವರು ಮನೆಗೆ ಬೀಗ ಹಾಕಿಕೊಂಡು ತಮ್ಮ ಕೆಲಸಕ್ಕೆ ಹೋಗಿದ್ದ ವೇಳೆ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ವಿಷಯ ತಿಳಿದು ಮನೆಗೆ ಹೋಗಿ ನೋಡಿದ ಮಾರುತಿಯವರಿಗೆ ಮನೆಯ ಬೀರುವಿನಲ್ಲಿರಿಸಿದ್ದ ಒಟ್ಟು 365000 ರೂಪಾಯಿ ಮೌಲ್ಯದ ವಸ್ತುಗಳು ಕಳವಾಗಿರುವುದು ಗೊತ್ತಾಗಿದೆ. ಈ ಪೈಕಿ 110000 ರೂಪಾಯಿ ಬೆಲೆಯ 12 ಗ್ರಾಂ ತೂಕದ ಒಂದು ಬಂಗಾರದ ಚೈನ್, 50000 ರೂಪಾಯಿ ಮೌಲ್ಯದ 5 ಗ್ರಾಂ ತೂಕದ ಒಂದು ಜೊತೆ ಬಂಗಾರದ ಓಲೆ, ಹಾಗೂ 90000 ರೂಪಾಯಿ ಬೆಲೆಯ 10 ಗ್ರಾಂ ತೂಕದ ಒಂದು ಜೊತೆ ಬಂಗಾರದ ಓಲೆ ಜುಮುಕಿ ಸೇರಿ ಒಟ್ಟು 250000 ರೂಪಾಯಿ ಮೌಲ್ಯದ 27 ಗ್ರಾಂ ಚಿನ್ನಾಭರಣಗಳು ಕಳುವಾಗಿದ್ದವು ಜೊತೆಗೆ 90000 ರೂಪಾಯಿ ನಗದು ಹಣ ಮತ್ತು 25000 ರೂಪಾಯಿ ಮೌಲ್ಯದ, ಸಿಮ್ ಕಾರ್ಡ್ ಇಲ್ಲದ ಒಂದು ಸ್ಯಾಮ್ಸಂಗ್ ಮೊಬೈಲ್ ಫೋನ್ ಕೂಡ ಕಳವಾಗಿದೆ.
