STATE NEWS

ಇಕೋ ಸ್ಪೋರ್ಟ್ಸ್​ ಕಾರು & ಅಬ್ಬಲಗೆರೆಯಲ್ಲಿ ಯುವತಿ ಚಿನ್ನದ ಸರಗಳ್ಳತನ! ಜಸ್ಟ್ 2 ಗಂಟೆಯ ಕಂಪ್ಲೀಟ್ ವರದಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ / ನಿರ್ಜನ ಪ್ರದೇಶದಲ್ಲಿ ಯುವತಿಯೊಬ್ಬರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಅನಿರೀಕ್ಷಿತವಾಗಿ ಎರಗಿದ್ದ ಆಘಂತುಕರು ಆಕೆ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದರು. ಈ ಘಟನೆ ನಡೆದು ಎರಡು ಗಂಟೆಯಲ್ಲೆ ಶಿವಮೊಗ್ಗ ಪೊಲೀಸರು ಆರೋಪಿಯನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಘಟನೆ ಹೇಗೆ ನಡೀತು? ಯಾರು ಆರೋಪಿ? ಯಾವ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಈ ಘಟನೆ ನಡೆಯಿತು? ಪೊಲೀಸರು ಆರೋಪಿಯನ್ನ ಹಿಡಿದಿದ್ದು ಹೇಗೆ? ಎಲ್ಲದಕ್ಕೂ ಉತ್ತರವನ್ನ ಈ ಸ್ಟೋರಿಯಲ್ಲಿ ಗಮನಿಸೋಣ

ಶಿವಮೊಗ್ಗ ಸಮೀಪದ ಅಬ್ಬಲಗೆರೆ ಬಳಿ ನಡೆದಿದೆ. ಕಳೆದ ಮೇ 22 ರ ಸಂಜೆ ಘಟನೆ ನಡೆದ ಬೆನ್ನಲ್ಲೇ ಎಚ್ಚೆತ್ತ ಶಿವಮೊಗ್ಗ ಗ್ರಾಮಾಂತರ ಪೊಲೀಸರು, ಕೇವಲ 2 ಗಂಟೆಗಳ ಅಂತರದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಅಬ್ಬಲಗೆರೆಯಲ್ಲಿ ನಡೆದ ಘಟನೆಯ ವಿವರ

ಅಬ್ಬಲಗೆರೆಯ ಬಳಿ ಯುವತಿಯೊಬ್ಬರು ರಸ್ತೆ ಬದಿ ಕಾರು ನಿಲ್ಲಿಸಿ ಅದರಿಂದ ಇಳಿಯುತ್ತಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಇಕೋ ಸ್ಪೋರ್ಟ್ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಆಕೆಯ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಆರೋಪಿಗಳು ಯುವತಿಯ ಕೊರಳಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದರು.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ದೂರು

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಆರೋಪಿಗಳ ಬೆನ್ನತ್ತಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು. ಪಿಐ ರಾಘವೇಂದ್ರ ಕಾಂಡಿಕೆ ಹಾಗೂ ಪಿಎಸ್‌ಐ ನವೀನ್ ಮಠಪತಿ ಅವರ ನೇತೃತ್ವದಲ್ಲಿ, ಸಿಪಿಸಿ ಶ್ರೀಕಾಂತ್, ಕಾಶಿನಾಥ ಹಾಗೂ ಕವನ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ಆರಂಭಿಸಿತ್ತು.

ಆರೋಪಿಗಳ ವೆಹಿಕಲ್​ ಟ್ರೇಸ್ ಹಾಗೂ ಟೆಕ್ನಿಕಲ್​ ಎವಿಡೆನ್ಸ್ ಮತ್ತು ಸಿಸಿ ಟಿವಿ ತಪಾಸಣೆಯ ಮಾಹಿತಿ ಆಧರಿಸಿದ ಪೊಲೀಸ್ ತಂಡಕ್ಕೆ ಆರೋಪಿಗಳ ಜಾಡು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಆಕ್ಷನ್​ಗೆ ಇಳಿದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ನಾಯ್ಕ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಇಕೋ ಸ್ಪೋರ್ಟ್ ಕಾರು ಹಾಗೂ ಕಳುವಾಗಿದ್ದ 1.50 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ ಬಂಗಾರದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೊಲೀಸರ ಈ ಕ್ವಿಕ್​ ಆಕ್ಷನ್​ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಯುವಕ, ನಮ್ಮ ಏರಿಯಾದಲ್ಲಿ ಚೈನ್ ಕಳತನ ಆಗಿತ್ತು, ಗ್ರಾಮಾಂತರ ಸ್ಟೇಷನ್‌ನಲ್ಲಿ ಕಂಪ್ಲೇಂಟ್ ಆಗಿತ್ತು. ದೂರು ದಾಖಲಾದ ಕೇವಲ 2 ಗಂಟೆಯಲ್ಲಿ ಗ್ರಾಮಾಂತರ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆರೋಪಿಯನ್ನು ಹಿಡಿದು ಬಂಧಿಸಿದ್ದಾರೆ. ಈ ಕ್ಷಿಪ್ರ ಕಾರ್ಯಾಚರಣೆಗಾಗಿ ಎಸ್ಪಿ ಹಾಗೂ ಇಡೀ ಗ್ರಾಮಾಂತರ ಠಾಣೆಯ ತಂಡಕ್ಕೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಅಬ್ಬಲಗೆರೆ ಸುತ್ತಮುತ್ತ ಹೆಣ್ಣುಮಕ್ಕಳು ಮತ್ತು ಫ್ಯಾಮಿಲಿಯವರು ಅಲ್ಲಿ ಸ್ವಲ್ಪ ಹುಷಾರಾಗಿ ಓಡಾಡಬೇಕು. ಯುವಕರು ಕಳ್ಳತನಕ್ಕೆ ಹೋಗಬಾರದು, ಓದಬೇಕು ಮತ್ತು ಕೆಲಸ ಮಾಡಬೇಕು. ಈ ರೀತಿ ಕಳ್ಳತನ, ದರೋಡೆ ಮಾಡಿಕೊಂಡು ಲೈಫ್ ಹಾಳು ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಅಬ್ಬಲಗೆರೆ ನಿವಾಸಿ

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ