Araga Jnanendra ಶಿವಮೊಗ್ಗ : ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಂದಿದ್ದ ಸಮವಸ್ತ್ರ ಕಾಯ್ದೆಯನ್ನು ಸಮರ್ಥಿಸಿಕೊಂಡರು. ನಮಗೆ ಹಿಜಾಬ್ ಧರಿಸುವುದಕ್ಕೆ ಯಾವುದೇ ವಿರೋಧವಿಲ್ಲ, ಅದು ಅವರ ಧಾರ್ಮಿಕ ವಸ್ತ್ರವಾಗಿದ್ದು ಅವರ ಇಷ್ಟ ಬಂದ ಕಡೆ ಧರಿಸಿಕೊಳ್ಳಲಿ. ಆದರೆ, ಶಾಲಾ ಆವರಣದೊಳಗೆ ಎಲ್ಲ ಧರ್ಮದ ಮಕ್ಕಳು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬೆಳೆಯಬೇಕು ಮತ್ತು ಅದಕ್ಕಾಗಿಯೇ ಹಿಂದೆ ಕಾಂಗ್ರೆಸ್ ಸರ್ಕಾರವೇ ಯೂನಿಫಾರ್ಮ್ ಪದ್ಧತಿಯನ್ನು ಪರಿಚಯಿಸಿತ್ತು ಎಂದು ನೆನಪಿಸಿದರು.
ಶಿವಮೊಗ್ಗ: ಬಕ್ರೀದ್ ವೇಳೆ ಅಕ್ರಮ ಗೋ ಸಾಗಾಟ ತಡೆಗೆ ಬಜರಂಗದಳ ಆಗ್ರಹ; ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಮುಂದುವರಿದು ಮಾತನಾಡಿದ ಅವರು, ಎಳೆಯ ಮನಸ್ಸುಗಳಲ್ಲಿ ನಾವೆಲ್ಲ ಸಹೋದರರು ಎಂಬ ಒಗ್ಗಟ್ಟಿನ ಭಾವನೆ ಶಾಲೆಯಲ್ಲಿ ಬೆಳೆಯದೇ ಹೋದರೆ ಮುಂದೆ ದೇಶ ಮತ್ತು ಊರುಗಳು ಇಬ್ಭಾಗವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆದರೆ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರವು ಉಲೇಮಾಗಳ ಸಭೆಗೆ ಹೆದರಿ, ಕೇವಲ ಮತಬ್ಯಾಂಕ್ಗಾಗಿ ಅನಗತ್ಯ ತುಷ್ಟೀಕರಣದ ಆದೇಶ ಹೊರಡಿಸುತ್ತಿದೆ. ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂಪಾಯಿ ಅನುದಾನ ನೀಡಿರುವ ಸರ್ಕಾರ, ಒಂದೆಡೆ ಹಿಜಾಬ್ಗೆ ಅವಕಾಶ ಕೊಟ್ಟು ಮತ್ತೊಂದೆಡೆ ಕೇಸರಿ ಶಾಲು ಹಾಕಬಾರದು ಎನ್ನುತ್ತಿದೆ. ಇಂತಹ ಒಡೆದಾಳುವ ನೀತಿಯನ್ನು ಕೈಬಿಟ್ಟು, ಉಡುಪಿಯಿಂದ ಆರಂಭವಾದ ಈ ದುರುದ್ದೇಶಪೂರ್ವಕ ವಿವಾದಕ್ಕೆ ಆಸ್ಪದ ನೀಡದೆ ಶಾಲೆಗಳಲ್ಲಿ ಕಡ್ಡಾಯವಾಗಿ ಯೂನಿಫಾರ್ಮ್ ನಿಯಮ ಪಾಲಿಸಬೇಕು ಎಂದು ಒತ್ತಾಯಿಸಿದರು.
Araga Jnanendra ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಎದುರು ಆನೆ ಹಾವಳಿ ಮತ್ತು ಮಳೆ ಹಾನಿ ಸಂಬಂಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಶಾಸಕರು ಬೆಂಬಲಿಸಿದರು. ಇತ್ತೀಚಿನ ಭೀಕರ ಮಳೆ ಹಾಗೂ ಬಿರುಗಾಳಿಗೆ ಶಿವಮೊಗ್ಗ ಗ್ರಾಮಾಂತರ ಮತ್ತು ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯಾದ್ಯಂತ ವ್ಯಾಪಕ ಬೆಳೆ ಹಾನಿಯಾಗಿದೆ. ಭತ್ತದ ಬೆಳೆ ನಷ್ಟವಾದರೆ ಅದು ಕೇವಲ ಒಂದು ವರ್ಷದ ಸಮಸ್ಯೆಯಾಗಿರುತ್ತದೆ, ಆದರೆ ಅಡಿಕೆ ಮರಗಳು ನಾಶವಾದರೆ ರೈತರ ಬದುಕೇ ಕಸಿದುಕೊಂಡಂತಾಗುತ್ತದೆ. ಹೀಗಾಗಿ ರೈತರ ಬೇಡಿಕೆಗಳು ಸಂಪೂರ್ಣ ನ್ಯಾಯಯುತವಾಗಿದ್ದು, ಈ ಬಗ್ಗೆ ತಕ್ಷಣವೇ ಸರ್ಕಾರದ ಗಮನ ಸೆಳೆದು ಸೂಕ್ತ ಮತ್ತು ಸಕಾಲಿಕ ಪರಿಹಾರ ಒದಗಿಸುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ತೀರ್ಥಹಳ್ಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧವೂ ಆರಗ ಜ್ಞಾನೇಂದ್ರ ಅವರು ವಾಗ್ದಾಳಿ ನಡೆಸಿದರು. ನದಿಯ ಮರಳನ್ನು ತೆಗೆಯುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಅದನ್ನು ಸಂಪೂರ್ಣವಾಗಿ ಕಾನೂನುಬದ್ಧವಾಗಿ ಮಾಡಬೇಕು. ಪ್ರಸ್ತುತ ತೀರ್ಥಹಳ್ಳಿಯಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಮರಳು ಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಸ್ವತಃ ತಹಶೀಲ್ದಾರ್ ಅವರೇ ನಿಂತು ಕಳ್ಳತನದಿಂದ ಮರಳು ಸಾಗಾಟ ಮಾಡಿಸುತ್ತಿದ್ದಾರೆ ಎಂದು ದೂರಿದ ಅವರು, ಈ ಬಗ್ಗೆ ಈಗಾಗಲೇ ಹಲವು ಬಾರಿ ಧ್ವನಿ ಎತ್ತಲಾಗಿದ್ದು, ಅಕ್ರಮ ದಂಧೆಗೆ ತಕ್ಷಣ ಬ್ರೇಕ್ ಬೀಳಬೇಕು ಎಂದು ಆಗ್ರಹಿಸಿದರು.
