Janivara Controversy ಶಿವಮೊಗ್ಗ: ಸಿಇಟಿ ಪರೀಕ್ಷೆಯ ವೇಳೆ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ ಪ್ರಕರಣವನ್ನು ವಿರೋಧಿಸಿ, ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಸಂಜೆ ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘಟನೆಯ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮೇ 1 ರಿಂದ ಬೆಂಗಳೂರು-ಶಿವಮೊಗ್ಗ ಇಂಡಿಗೋ ಸೇವೆ ಸ್ಥಗಿತ, ಖಾಸಗಿ ನಿರ್ವಹಣೆ ಬಗ್ಗೆ ಚರ್ಚೆ, ಬಿವೈಆರ್ ಹೇಳಿದ್ಧೇನು
ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಎಚ್.ಎಸ್. ಗಣೇಶ್ ಮಾತನಾಡಿ, ಬೆಂಗಳೂರಿನ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿರುವುದು ಬಹಳ ಬೇಸರದ ಸಂಗತಿ. ಈ ರೀತಿ ಮಾಡುವ ಮೂಲಕ ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗಿದೆ, ಎಂದು ಆರೋಪಿಸಿದರು.
ರಾಜ್ಯ ಸರ್ಕಾರಕ್ಕೆ ಬ್ರಾಹ್ಮಣರನ್ನು ಕಂಡರೆ ಏಕೆ ಅಷ್ಟು ಭಯ ಎಂದು ತಿಳಿಯುತ್ತಿಲ್ಲ. ನಮ್ಮ ಸಮುದಾಯ ಯಾರ ತಂಟೆಗೂ ಹೋಗುವುದಿಲ್ಲ. ಆದರೂ ಕೂಡ ನಮ್ಮ ಸಮುದಾಯವನ್ನು ರಾಜ್ಯ ಸರ್ಕಾರ ಗುರಿ ಮಾಡುತ್ತಿದೆ. ದೇಶ, ರಾಜ್ಯ ಹಾಗೂ ಸಮಾಜದ ವಿಚಾರ ಬಂದಾಗ ನಾವು ಯಾವಾಗಲೂ ಸಿದ್ಧರಿರುತ್ತೇವೆ. ಅದೇ ರೀತಿ ನಮ್ಮ ಸಮಾಜಕ್ಕೆ ತೊಂದರೆ ಉಂಟಾದಾಗ ನಾವು ಶಾಂತಿಗೂ ಸಿದ್ಧ, ಸಮರಕ್ಕೂ ಬದ್ಧ, ಎಂದು ಗುಡುಗಿದರು.
ಜನಿವಾರ ಬಿಚ್ಚಿಸಿರುವುದು ಸಿಇಟಿ ಅಧಿಕಾರಿಗಳ ವೈಯಕ್ತಿಕ ನಿರ್ಧಾರವೋ ಅಥವಾ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರು ರೂಪಿಸಿದ ನಿಯಮವೋ ಎಂಬುದರ ಕುರಿತು ನಮಗೆ ಸ್ಪಷ್ಟನೆ ನೀಡಬೇಕು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಗೆ ನಾವು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ,” ಎಂದು ಅವರು ತಿಳಿಸಿದರು.
