ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಳ್ಳತನ ಮಾಡಲು ಯತ್ನಿಸಿದ್ದ ಅಂದಾಜು 1.29 ಕೋಟಿ ರೂಪಾಯಿ ಬೆಲೆಯ 350 ಚೀಲ ಅಡಿಕೆ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ ಹೊಳೆಹೊನ್ನೂರು ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಲಾರಿ ಚಾಲಕನಾಗಿದ್ದ ಮುಹಿಬುಲ್ಲಾ ಖಾನ್ ಹಾಗೂ ಆತನ ಸಹಚರರಾದ ಮಹಮ್ಮದ್ ಗೌಸ್ ಮತ್ತು ನೌಶಾದ್ ಎಂಬುವರು ತಪ್ಪಿಸಿಕೊಂಡಿದ್ದಾರೆ.
ಎಚ್. ಕೃಷ್ಣ ಪೂಜಾರಿ ಎನ್ನುವವರು ಶಿವಮೊಗ್ಗ ನಗರದಿಂದ ಬೆಂಗಳೂರಿಗೆ ಲಾರಿಯಲ್ಲಿ ಅಡಿಕೆ ಚೀಲಗಳನ್ನು ರವಾನಿಸಿದ್ದರು. ಈ ವಾಹನ ಬೆಂಗಳೂರು ತಲುಪದ ಹಿನ್ನೆಲೆಯಲ್ಲಿ ಅನುಮಾನಗೊಂಡು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗಬೇಕಿದ್ದ 1 ಕೋಟಿಯ ಅಡಕೆ
ತನಿಖೆ ಕೈಗೊಂಡ ಪೊಲೀಸರು ಚನ್ನಗಿರಿ ತಾಲೂಕಿನ ಕೌಡಿ ಹೊಸೂರು ಬಳಿ ವಾಹನವನ್ನು ಪತ್ತೆಹಚ್ಚಿ ಅಡಿಕೆ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಈ ಅಡಿಕೆಯನ್ನು ಚಿತ್ರದುರ್ಗದಲ್ಲಿ ಮಾರಾಟ ಮಾಡಿ ಹಣ ಹಂಚಿಕೊಳ್ಳಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಪಿಐ ಶಿವಪ್ರಸಾದ್ ಎಂ, ಪಿಎಸ್ಐ ಶಾಂತಲಾ, ಕಾನ್ ಸ್ಟೇಬಲ್ಸ್ ಆದ ಅಣ್ಣಪ್ಪ, ಪ್ರಕಾಶ್ ನಾಯ್, ನಾಗರಾಜ್, ಕುಬೇರನಾಯ್, ಪ್ರಶಾಂತ್, ಪ್ರವೀಣ್ ಹಂಪಿಹೊಳಿ ಮತ್ತು ವಿಶ್ವನಾಥ್ ಆಮರಗೋಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

