ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರಕೃತಿಯ ವಿಕೋಪಗಳು ಸೃಷ್ಟಿಯಾಗುತ್ತಿದ್ದು, ಅನಾಹುತವೊಂದು ಸಂಭವಿಸುವ ಮುನ್ನವೇ ಕೂದಲೆಳೆ ಅಂತರದಲ್ಲಿ ತಪ್ಪಿದೆ. ತಾಲೂಕಿನ ಆಲ್ದೂರು ಗ್ರಾಮದ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಉರುಳುವ ಮುನ್ನವೇ ಚಾಲಕನ ಸಮಯಪ್ರಜ್ಞೆಯಿಂದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಸಂಜೆ ಮಲೆನಾಡು ಭಾಗದಲ್ಲಿ ಆರ್ಭಟಿಸುತ್ತಿದ್ದ ಮಳೆ ಮತ್ತು ಗಾಳಿಯ ನಡುವೆ ಈ ಘಟನೆ ಸಂಭವಿಸಿದೆ. ಹಾಸನ ಮೂಲದ ನಾಲ್ವರು ಪ್ರವಾಸಿಗರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾಕತಾಳೀಯ ಎಂಬಂತೆ ಕಾರಿನಲ್ಲಿದ್ದವರು ಮಲೆನಾಡಿನ ರಸ್ತೆಯ ಸೌಂದರ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಾ ಸಾಗುತ್ತಿದ್ದರು. ಇದೇ ವೇಳೆ ರಸ್ತೆ ಬದಿಯ ಮರವೊಂದು ಬುಡಸಮೇತ ಉರುಳಿ ಕಾರಿನ ಮುಂದೆಯೇ ಬಿದ್ದಿದೆ.
ಮರ ಬೀಳುವುದನ್ನು ಮೊದಲೇ ಗಮನಿಸಿದ ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದರಿಂದ ಕಾರು ಮರದ ಅಡಿಗೆ ಸಿಲುಕುವುದು ತಪ್ಪಿದೆ. ಒಂದು ಕ್ಷಣ ತಡವಾಗಿದ್ದರೂ ದೊಡ್ಡ ಮಟ್ಟದ ಜೀವಹಾನಿ ಸಂಭವಿಸುವ ಸಾಧ್ಯತೆ ಇತ್ತು. ಪ್ರವಾಸಿಗರು ವಿಡಿಯೋ ಮಾಡಿಕೊಳ್ಳುತ್ತಿದ್ದ ಕಾರಣ ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆಝಲ್ಲೆನಿಸುವಂತಿದೆ.
Chikkamagaluru 4 Survive as Tree Falls on Car

