ಸಾಗರ | ಸಾಗರದ ರೂಫ್ ಟಾಪ್ ಕೆಫೆಯ ಅಡುಗೆ ಸಿಬ್ಬಂದಿ ಠಿಂಕು ಶರ್ಮಾ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಈ ಹಿಂದೆ ವ್ಯವಹಾರದ ವಿಚಾರಕ್ಕೆ ಕೊಲೆ ನಡೆದಿದೆಯೇ ಎಂಬ ಪ್ರಾಥಮಿಕ ಮಾಹಿತಿಯ ಪ್ರಕಾರ ಆರಂಭಗೊಂಡ ಈ ಕೇಸ್ ಹೋಟೆಲ್ನ ಹಣಕಾಸಿನ ವ್ಯವಹಾರವೇ ಕೊಲೆಗೆ ನಿಜವಾದ ಕಾರಣ ಎಂಬುದು ಇದೀಗ ಎಫ್ ಐ ಆರ್ ಮೂಲಕ ಬಯಲಾಗಿದೆ.
ಈ ಪ್ರಕರಣದ ಎಫ್ಐಆರ್ ಪ್ರತಿ ಇದೀಗ ‘ಮಲೆನಾಡು ಟುಡೆ’ಗೆ ಲಭ್ಯವಾಗಿದ್ದು, ಅದರಲ್ಲಿ ನಾಲ್ವರು ಆರೋಪಿಗಳು ಠಿಂಕು ಶರ್ಮನಿಗೆ ನೀಡಿದ ಕಿರುಕುಳವು, ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಗೆ ನೀಡಿದ್ದ ಚಿತ್ರಹಿಂಸೆಯನ್ನು ನೆನಪಿಸುವಂತಿದೆ.
Sagara Tinku Sharma ಎಫ್ಐಆರ್ನಲ್ಲಿ ಏನಿದೆ?
ಠಿಂಕು ಶರ್ಮಾ ಹತ್ಯೆಯ ಭೀಕರತೆಯನ್ನು ತಿಳಿಯುವ ಮೊದಲು ಆತನ ಸಾವಿಗೆ ನಿಜವಾದ ಕಾರಣವೇನು ಎಂಬುದನ್ನು ಗಮನಿಸಬೇಕು. ಠಿಂಕು ಶರ್ಮಾ ಸೋದರ ಸಂಬಂಧಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಠಿಂಕು ಸಾಗರದ ರೂಫ್ ಟಾಪ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಮ್ರಾನ್ ಅಲ್ಲಿ ‘ಸ್ನೂಕರ್ ಗೇಮ್’ ಕೂಡ ಆಡಿಸುತ್ತಿದ್ದ. ಏಪ್ರಿಲ್ 01 ರಂದು ರಾತ್ರಿ ಇಮ್ರಾನ್ ಸೇರಿದಂತೆ ನಾಲ್ವರು ಆರೋಪಿಗಳು ಠಿಂಕು ಶರ್ಮನ ಬಳಿ ಬಂದು, “ಹೋಟೆಲ್ಗೆ ಹೆಚ್ಚು ಅಡುಗೆ ಪದಾರ್ಥಗಳನ್ನು ತರುತ್ತಿದ್ದರೂ ವ್ಯಾಪಾರದಲ್ಲಿ ಅಷ್ಟು ಲಾಭ ಬರುತ್ತಿಲ್ಲ. ಹಣವನ್ನು ಯಾರು ತೆಗೆದುಕೊಳ್ಳುತ್ತಿದ್ದೀರಾ?” ಎಂದು ಕೇಳಿದ್ದಾರೆ.
ಅಷ್ಟೇ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, “ಹಣವನ್ನು ಎಲ್ಲಿಟ್ಟಿದ್ದೀಯಾ? ಎಷ್ಟು ದಿನದಿಂದ ಹಣ ಕದಿಯುತ್ತಿದ್ದೀಯಾ? ನೀನು ನನ್ನ ವ್ಯಾಪಾರವನ್ನು ಹಾಳು ಮಾಡುತ್ತಿದ್ದೀಯಾ!” ಎಂದು ಕಿರುಚಿದ್ದಾರೆ. ನಂತರ ಅವರೆಲ್ಲರೂ ಸೇರಿ, “ಕದ್ದ ಹಣವನ್ನೆಲ್ಲಾ ವಾಪಸ್ ಕೊಡಬೇಕು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಕಿರುಕುಳ ನೀಡಲು ಶುರು ಮಾಡಿದ್ದಾರೆ.
Sagara Tinku Sharma ರೇಣುಕಾಸ್ವಾಮಿ ಪ್ರಕರಣ ನೆನಪಿಸಿದ ಠಿಂಕು ಶರ್ಮಾ ಹತ್ಯೆ
ಆರೋಪಿಗಳು ಠಿಂಕುವಿನ ಹತ್ಯೆ ಎಷ್ಟು ಭೀಕರವಾಗಿತ್ತು ಎಂಬುವುದನ್ನು ಸೋದರ ಸಂಬಂಧಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಂದು ರಾತ್ರಿಯಿಡೀ ಠಿಂಕುವನ್ನು ಹೋಟೆಲ್ನಲ್ಲಿ ಕೂಡಿಹಾಕಿ, ಮಲಗಲು ಬಿಡದೆ ಬೈಯುತ್ತಾ ಹಲ್ಲೆ ನಡೆಸಿದ್ದಾರೆ. ಬೆಳಗಿನ ಜಾವ ಸುಮಾರು 05:30 ರ ವೇಳೆಗೆ, ಮೊಹಮ್ಮದ್ ಇಮ್ರಾನ್ ಮತ್ತು ತಂಡದವರು ಠಿಂಕುವನ್ನು ಕೊಲೆ ಮಾಡುವ ಉದ್ದೇಶದಿಂದ ಹೋಟೆಲ್ನಾದ್ಯಂತ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.
ಅಷ್ಟೇ ಅಲ್ಲದೆ, ಕಣ್ಣಿಗೆ ಕಾರದ ಪುಡಿ ಎರಚಿ, ಸ್ನೂಕರ್ ಸ್ಟಿಕ್, ಕಬ್ಬಿಣದ ರಾಡ್ ಹಾಗೂ ಹಗ್ಗದಿಂದ ಮುಖ, ಮೈಕೈ ಮತ್ತು ಕಾಲುಗಳಿಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ಮೊಹಮ್ಮದ್ ಇಮ್ರಾನ್ ಠಿಂಕುವಿನ ಕೆನ್ನೆಗೆ ಬಲವಾಗಿ ಹೊಡೆದಾಗ ಠಿಂಕು ಅಲ್ಲೇ ಕುಸಿದು ಬಿದ್ದು ಒದ್ದಾಡಿದ್ದಾರೆ. ಆಗ ಆರೋಪಿಗಳೆಲ್ಲಾ ಸೇರಿ ಸಾಯಿ ಮಗನೇ ಎಂದು ಕಾಲಿನಿಂದ ಒದ್ದಿದ್ದಾರೆ.
Sagara Tinku Sharma ಸಾಕ್ಷ್ಯ ನಾಶಕ್ಕೆ ಯತ್ನ
ನಂತರ ಠಿಂಕು ಚಲನವಲನವಿಲ್ಲದೆ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಆರೋಪಿಗಳು, ಅಲ್ಲಿಯೇ ಇದ್ದ ದೂರುದಾರನಿಗೂ ಸಹ ನೀನು ಸುಮ್ಮನಿರಬೇಕು, ಇಲ್ಲವಾದರೆ ನಿನಗೂ ಇದೇ ಗತಿ ಎಂದು ಬೆದರಿಕೆ ಹಾಕಿದ್ದಾರೆ. ಸ್ವಲ್ಪ ಸಮಯದ ನಂತರ ಠಿಂಕುವಿನ ಮೈಮೇಲಿದ್ದ ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಬಳಿಕ ಮೃತದೇಹವನ್ನು ತಮ್ಮ ಕಾರಿನ ಹಿಂಬದಿ ಸೀಟಿನಲ್ಲಿ ಹಾಕಿಕೊಂಡು ಹೋಗಿದ್ದಾರೆ. ಹೋಟೆಲ್ ಮಾಲೀಕ ಮೊಹಮ್ಮದ್ ಇಮ್ರಾನ್ ಮತ್ತು ಇತರ ನಾಲ್ವರು ಸೇರಿ ಠಿಂಕುವನ್ನು ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಇದನ್ನೆಲ್ಲಾ ನೋಡಿದಾಗ ಈ ಹಿಂದೆ ಚಿತ್ರದುರ್ಗದ ರೇಣುಕಾ ಸ್ವಾಮಿಗೆ ದರ್ಶನ್ ಮತ್ತು ಗ್ಯಾಂಗ್ ಕಿರುಕುಳ ನೀಡಿ ಕೊಲೆ ಮಾಡಿದ ರೀತಿಯನ್ನೇ ನೆನಪಿಸಿದಂತಿದೆ. ಪ್ರಕರಣ ದಾಖಲಿಸಿಕೊಂಡ ಸಾಗರ ಪೊಲೀಸರು ಇದೀಗ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Sagara Tinku Sharma Murder FIR Reveals


