ಶಿವಮೊಗ್ಗ: ಜಿಲ್ಲಾ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗಾಗಿ ಏಪ್ರಿಲ್ 09 ರಂದು ತೃಪ್ತಿ ಹೆಲ್ತ್ ಕೇರ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ಸಲ್ಟೆಂಟ್ ಯೂರಾಲಜಿಸ್ಟ್ ಮತ್ತು ಆಂಡ್ರಾಲಜಿಸ್ಟ್ ಡಾ. ಎಸ್. ಚಂದ್ರಶೇಖರ್ ಅವರು ಮಾತನಾಡಿ, ದುರ್ಗಿ ಗುಡಿ ಮುಖ್ಯ ರಸ್ತೆಯಲ್ಲಿರುವ ಶನೇಶ್ವರ ದೇವಾಲಯದ ಮುಂಭಾಗದ ತೃಪ್ತಿ ಹೆಲ್ತ್ ಕೇರ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. ಇದುವರೆಗೂ ದೇವರಿಂದ ಮತ್ತು ಭೂಮಿ ತಾಯಿಯಿಂದ ಪಡೆದದ್ದು ಸಾಕು, ಇನ್ನಾದರೂ ಬಡ ಬಗ್ಗರಿಗೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಈ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. ಈ ಹಿಂದೆಯೂ ಸಹ ಅನೇಕ ಉಚಿತ ಶಿಬಿರವನ್ನು ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಈ ತಪಾಸಣಾ ಶಿಬಿರದಲ್ಲಿ ಯುರಾಲಜಿ ಕನ್ಸಲ್ಟೇಷನ್, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಸಿ-ಆರ್ಎಂ ಫ್ಲೋರೋಸ್ಕೋಪ್ ಸ್ಕ್ಯಾನ್, ಮೂತ್ರಪಿಂಡದ ಕಲ್ಲಿನ ಸ್ಕ್ಯಾನ್, ಇ.ಸಿ.ಜಿ ಹಾಗೂ ಬಿಪಿ ಮತ್ತು ಶುಗರ್ (RBS) ಪರೀಕ್ಷೆಗಳು ಸಂಪೂರ್ಣ ಉಚಿತವಾಗಿರುತ್ತದೆ. ಅಷ್ಟೇ ಅಲ್ಲದೇ, ಈ ಕಾರ್ಯಕ್ರಮದಲ್ಲಿ ಕಾರ್ಮಿಕರಿಗಾಗಿ ಇ-ಶ್ರಮ ಕಾರ್ಡ್, ಅಸಂಘಟಿತ ಕಾರ್ಮಿಕರ ಕಾರ್ಡ್ ಮತ್ತು ಸೆಂಟ್ರಲ್ ಬ್ಯಾಂಕ್ ಜೀರೋ ಬ್ಯಾಲೆನ್ಸ್ ಅಕೌಂಟ್ ಮಾಡಿಸಿಕೊಡಲಾಗುವುದು. ಇದರ ಸೌಲಭ್ಯ ಪಡೆಯುವವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ 2 ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ತರಬೇಕೆಂದು ಅವರು ಮನವಿ ಮಾಡಿದರು.
ಈ ವಿಶೇಷ ತಪಾಸಣಾ ಶಿಬಿರವು ಪ್ರತಿ ಗುರುವಾರ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಸಂಸದರಾದ ಬಿ. ವೈ. ರಾಘವೇಂದ್ರ ಅವರು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಸಂಸದರು ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ಗಳನ್ನು ವಿತರಣೆ ಮಾಡಲಿದ್ದಾರೆ ಎಂದು ಡಾ. ಎಸ್ ಚಂದ್ರಶೇಖರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Free Health Camp by Trupti Health Care

