ಸಾಗರ: ಹಣಕಾಸಿನ ವಿಚಾರ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೆಫೆ ಮಾಲೀಕನೊಬ್ಬ ತನ್ನದೇ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸಾಗರ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ವಿವರ:
ಸಾಗರದ ಶಿವಮೊಗ್ಗ ರಸ್ತೆಯಲ್ಲಿರುವ ಕೆಫೆ ಒಂದರಲ್ಲಿ ಕಳೆದ 7 ತಿಂಗಳಿಂದ ಬಿಹಾರ ಮೂಲದ ಟಿಂಕು ಶರ್ಮಾ (30) ಎಂಬುವವರು ಶೆಫ್ ಹಾಗೂ ಸರ್ವರ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಹೊಂಡಾ ಸಿಟಿ ಕಾರೊಂದರಲ್ಲಿ ಟಿಂಕು ಶರ್ಮಾ ಅವರ ಶವ ಪತ್ತೆಯಾಗಿದ್ದು, ಕೆಫೆ ಮಾಲೀಕ ಇಮ್ರಾನ್ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರ ರಾತ್ರಿಯಿಂದಲೇ ಮಾಲೀಕ ಮತ್ತು ಕಾರ್ಮಿಕನ ನಡುವೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ಜಗಳ ನಡೆದಿತ್ತು. ಇಂದು ಬೆಳಗ್ಗೆಯೂ ಇದೇ ವಿಚಾರಕ್ಕೆ ವಾಗ್ವಾದ ಮುಂದುವರಿದಿದ್ದು, ಈ ವೇಳೆ ಆಕ್ರೋಶಗೊಂಡ ಇಮ್ರಾನ್ ಕಾರ್ಮಿಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ಸ್ವರೂಪದ ಪೆಟ್ಟು ಬಿದ್ದ ಪರಿಣಾಮ ಟಿಂಕು ಶರ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ . ಸಾಗರ ಪೊಲೀಸರು ಈ ಕುರಿತಾಗಿ ಹೆಚ್ಚಿನ ತನಿಖೆ ಕೈಗೊಂಡಿದ್ದು ಘಟನೆ ಕುರಿತಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
Sagara Cafe Murder Owner Kills Bihar Worker
