shivamogga Mar 16, 2024 ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಪೊಲೀಸರು ವಿಶೇಷ ಕಾರ್ಯಾಚರಣೆ ಒಂದರಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ಪೇಟೆಯ ಯನೈಟೆಡ್ ಟ್ರೇಡಿಂಗ್ ಕಂಪನಿಯಲ್ಲಿ 2023ರ ಮೇ ತಿಂಗಳಲ್ಲಿ ನಡೆದಿದ್ದ 17 ಲಕ್ಷ ಮೊತ್ತದ ಸಿಗರೇಟ್ ತುಂಬಿದ್ದ ಬಾಕ್ಸ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಈ ಸಂಬಂಧ ಒಬ್ಬ ಅಂತರ ರಾಜ್ಯ ಕಳ್ಳನನ್ನು ಬಂಧಿಸಿರುವ ಸಾಗರ ಟೌನ್ ಪೊಲೀಸ್ ಸ್ಟೇಷನ್ ಪೋಲಿಸರು, ₹6 ಲಕ್ಷ ವಶ ಪಡಿಸಿಕೊಂಡಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಮೂವರಿಗೆ ಹುಡುಕಾಟ ಮುಂದುವರಿಸಿದ್ದಾರೆ. ರಾಜಸ್ಥಾನದ ಜಾಲೂರು ಜಿಲ್ಲೆಯ ಮಾಂಡವಾಲ ಗ್ರಾಮದ ನಿವಾಸಿ ಜೀತೇಂದ್ರ ಕುಮಾರ್ (27) ಬಂಧಿತ ಆರೋಪಿ,
ಕಳೆದ ವರ್ಷ ಮೇ ತಿಂಗಳ 14ರಂದು ಪಟ್ಟಣದ ಸೊರಬ ರಸ್ತೆಯ ಯುನೈಟೆಡ್ ಟ್ರೇಡಿಂಗ್ ಕಂಪೆನಿ ಕಟ್ಟಡದ ಹಿಂದಿನ ಬಾಗಿಲು ಒಡೆದು ಕಳ್ಳತನ ಮಾಡಲಾಗಿತ್ತು. ಅಲ್ಲಿದ್ದ ₹17 ಲಕ್ಷ ಮೌಲ್ಯದ ಸಿಗರೇಟ್ ತುಂಬಿದ್ದ ಬಾಕ್ಸ್ ಗಳನ್ನು ಕಳವು ಮಾಡಲಾಗಿತ್ತು. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಆಧರಿಸಿ, ತನಿಖೆ ಪ್ರಾರಂಭಿಸಿದ್ದ ಪೊಲೀಸರಿಗೆ ವಾಹನದ ನಂಬರ್ ದೊರೆತಿತ್ತು.
ವಾಹನದ ನಂಬರ್ ಪಡೆದು ವಿಚಾರಣೆ ಆರಂಭಿಸದ ಪೊಲೀಸರಿಗೆ ಹುಬ್ಬಳ್ಳಿಯಲ್ಲಿ ಬಾಡಿಗೆಗೆ ಬಂದಿದ್ದ ರಾಜಸ್ಥಾನ ಮೂಲದ ಮೂವರು ಯುವಕರು ಕಾರನ್ನು ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾರಿನ ಮಾಲೀಕನನ್ನು ಹೋಟೆಲ್ನಲ್ಲಿ ಬಿಟ್ಟು ಸಾಗರಕ್ಕೆ ಬಂದು ಕಳ್ಳತನವೆಸಗಿರುವುದು ಗೊತ್ತಾಗಿದೆ.
ಇನ್ನೂ ಆರೋಪಿಗಳು ಸಾಗರಕ್ಕೆ ಬಂದು ಹೋಲ್ಸೇಲ್ ಸಿಗರೇಟು ಮಾರುವವರು ಯಾರಿದ್ದಾರೆ. ಅವರಲ್ಲಿ ಎಷ್ಟು ಮಾಲಿದೆ ಎನ್ನುವುದೆಲ್ಲದರ ಮಾಹಿತಿ ಕಲೆ ಹಾಕಿದ್ದರು ಎನ್ನಲಾಗಿದೆ. ಕದ್ದಿದ್ದ ಸಿಗರೇಟನ್ನು ಮಾರಾಟ ಮಾಡಿ, ಬಂದ ಹಣವನ್ನು ಎಲ್ಲರೂ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಆರೋಪಿಗಳು ಬಿಜಾಪುರ, ಸಿಂಧಗಿ, ಸವದತ್ತಿ ಸೇರಿದಂತೆ ಹಲವೆಡೆ ಹೋಲ್ಸೇಲ್ ಸಿಗರೇಟ್ ಮಾರಾಟ ಮಾಡುವವರನ್ನು ದೋಚಿರುವುದು ಇದೇ ವೇಳೆ ಪತ್ತೆಯಾಗಿದೆ.