KARNATAKA NEWS/ ONLINE / Malenadu today/ Jul 9, 2023 SHIVAMOGGA NEWS
ಶಿವಮೊಗ್ಗ/ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ನಡುವೆ ಪ್ರಮುಖ ಸರ್ಕಲ್ಗಳಲ್ಲಿ ಹಲವು ಯಡವಟ್ಟುಗಳು ನಡೆದಿದ್ದರ ಬಗ್ಗೆ ಈಗಾಗಲೇ ಹಲವು ಸಲ ವರದಿಯಾಗಿದೆ. ಇದೀಗ ಶಿವಮೂರ್ತಿ ಸರ್ಕಲ್ನಲ್ಲಿದ್ದ ಹುತಾತ್ಮ ವೀರ ಶಿವಮೂರ್ತಿ ಸರ್ಕಲ್ ಎಂಬ ಬೋರ್ಡ್ ಮಾಯವಾಗಿದೆ. ಸುಮಾರು 2 ತಿಂಗಳಿನಿಂದ, ವೃತ್ತದಲ್ಲಿ ಬೋರ್ಡ್ ಕಾಣದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಾಣೆಯಾದ ಫಲಕ
ಸ್ಮಾರ್ಟ್ ಸಿಟಿಯ ಯೋಜನೆ ಅಡಿಯಲ್ಲಿ ಶಿವಮೂರ್ತಿ ಸರ್ಕಲ್ನ ಮೆಟ್ರೋ ಆಸ್ಪತ್ರೆಯ ಆವರಣದ ಬದಿಯಲ್ಲಿ ಮ್ಯೂರಲ್ ಆರ್ಟ್ ಬಳಸಿ ಕಲಾಕೃತಿಯನ್ನು ಚಿತ್ರಿಸಲಾಗಿದೆ. ಅದೇ ರೀತಿಯಲ್ಲಿ ಶಿವಮೂರ್ತಿ ಸರ್ಕಲ್ ಬೋರ್ಡ್ ಇದ್ದ ಜಾಗದಲ್ಲಿಯು ಮ್ಯೂರಲ್ ಆರ್ಟ್ ನಿಂದಲೇ ಶಿವಮೂರ್ತಿ ನಾಮಫಲಕ ಅಳವಡಿಸುವ ಪ್ಲಾನ್ ಆಗಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಪ್ಲಾನ್ ಅನುಷ್ಠಾನವಾಗಲಿಲ್ಲ. ಮೊದಲಿದ್ದ ಕಬ್ಬಿಣದ ನಾಮಫಲಕವೂ ಕಾಣುತ್ತಿಲ್ಲ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗ ನಗರ ಪಾಲಿಕೆ ಮೇಯರ್ ಹೇಳಿದ್ದೇನು?
ಈ ವಿಚಾರವಾಗಿ ಮೇಯರ್ ಶಿವಕುಮಾರ್ ರವರನ್ನ ಜೀ ಕನ್ನಡ ವಾಹಿನಿಯ ವರದಿಗಾರರು ಸಂಪರ್ಕಿಸಿದಾಗ, ಶಿವಮೂರ್ತಿ ಸರ್ಕಲ್ನಲ್ಲಿ ಹುತಾತ್ಮ ಶಿವಮೂರ್ತಿ ಸರ್ಕಲ್ ಹೆಸರಿನ ನಾಮಫಲಕ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿಲ್ಲ . ಈ ಬಗ್ಗೆ ಗಮನಿಸುತ್ತೇನೆ ಎಂದಿದ್ದಾರೆ.

ಶಿವಮೊಗ್ಗ ನಗರ ಶಾಸಕ ಎಸ್.ಎನ್ ಚನ್ನಬಸಪ್ಪರವರು ಹೇಳಿದ್ದೇನು?
ಇದೇ ವಿಚಾರವಾಗಿ ಮಾತನಾಡಿರುವ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್ ಚನ್ನಬಸಪ್ಪರವರು, ಹುತಾತ್ಮ ಶಿವಮೂರ್ತಿಯವರ ಹೆಸರಿನ ಶಿಲೆಯಿಂದ ಮಾಡಿರುವ ಫಲಕವನ್ನು, ಈ ಹಿಂದೇ ಇದ್ದ ಸ್ಥಳದಲ್ಲಿಯೇ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೆಯು ನಡೆದಿತ್ತು ಯಡವಟ್ಟು
ಈ ಹಿಂದೆ ಶಿವಮೊಗ್ಗದ ಜೈಲ್ ಸರ್ಕಲ್ನಲ್ಲಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಮಫಲಕವನ್ನು ತೆಗೆದುಹಾಕಿದ್ದಲ್ಲದೆ ಅದರ ನಿರ್ವಹಣೆಯನ್ನು ಕಡೆಗಣಿಸಲಾಗಿತ್ತು. ಆನಂತರ ಈ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಕ್ಷಣವೇ ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ, ವೃತ್ತದಲ್ಲಿ ಪುನಃ ಹೊಸದಾಗಿ ಅಂಬೇಡ್ಕರ್ ವೃತ್ತ ಹೆಸರಿನ ಬೋರ್ಡ್ ಹಾಕಲಾಗಿತ್ತು. ಇದೇ ರೀತಿಯಲ್ಲಿ ಕನ್ನಡ ಧ್ವಜ ಕಟ್ಟೆ ತೆರವಿನ ವಿಚಾರವೂ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದೀಗ ಹುತಾತ್ಮ ಶಿವಮೂರ್ತಿಯವರ ಫಲಕ ಕಾಣದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಶಿವಮೂರ್ತಿ ಸರ್ಕಲ್ನ ಇತಿಹಾಸವೇನು ಗೊತ್ತಾ?
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಹಾಗೂ ಶಿವಮೂರ್ತಿ ಸರ್ಕಲ್ಗೂ ಅವಿನಾಭಾವ ಸಂಬಂಧವಿದೆ. 1947 ರ ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಎರಡು ಕೋಮುಗಳ ನಡುವಿನ ಗಲಭೆಯಲ್ಲಿ ಶಿವಮೂರ್ತಿ ಎನ್ನುವ 26 ವರ್ಷದ ಯುವಕನ ಹತ್ಯೆಯಾಗಿತ್ತು. ಗಲಭೆ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿ ವಾರಗಟ್ಟಲೆ ಕರ್ಫ್ಯೂ ವಿಧಿಸಲಾಯಿತು. ಪೊಲೀಸರ ಸರ್ಪಗಾವಲಿನಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು. ಶಿವಮೂರ್ತಿ ಯುವಕನ ನೆನಪಿನಲ್ಲಿ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ವೃತ್ತಕ್ಕೆ ಶಿವಮೂರ್ತಿ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ಪ್ರತಿ ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ಈ ಸರ್ಕಲ್ ವೃತ್ತದಲ್ಲಿ ಶಿವಮೂರ್ತಿ ಪೋಟೋ ಇಟ್ಟು ಪ್ರತಿವರ್ಷ ಗೌರವ ಸಲ್ಲಸಲಾಗುತ್ತದೆ…





