police station ತೀರ್ಥಹಳ್ಳಿ: ತಾಲೂಕಿನ ನಿವಾಸಿಯೊಬ್ಬರು ತಮ್ಮ ಸಹೋದರ ಕಾಣೆಯಾಗಿ 43 ವರ್ಷಗಳ ನಂತರ ಆಸ್ತಿ ಹಂಚಿಕೆಗಾಗಿ ಅವರನ್ನು ಹುಡುಕಿ ಕೊಡಿ ಎಂದು ತೀರ್ಥಹಳ್ಳಿ ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.
police station ಏನಿದು ಪ್ರಕರಣ
ದೂರುದಾರರಾದ ವ್ಯಕ್ತಿ ದೂರಿನಲ್ಲಿ ಅವರ ತಂದೆ-ತಾಯಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಹಿರಿಯ ಮಗ (ಹೆಸರನ್ನು ಗೌಪ್ಯವಾಗಿ ಇಡಲಾಗಿದೆ ) 1982 ರಲ್ಲಿ ಚಿತ್ರದುರ್ಗದ ಹೊಳಲ್ಕೆರೆ ತಾಲೂಕು ಒಂದರ ಅನಾಥ ಸೇವಾ ಆಶ್ರಮದ ಹಾಸ್ಟೆಲ್ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ದೂರುದಾರರು ಕೂಡ ಅದೇ ಸಮಯದಲ್ಲಿ ಅದೇ ಹಾಸ್ಟೆಲ್ನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದರು.
1982ರ ಜನವರಿ ತಿಂಗಳಲ್ಲಿ ಒಂದು ವಾರ ರಜೆ ಇದ್ದ ಕಾರಣ ಇಬ್ಬರೂ ಸಹೋದರರು ಮನೆಗೆ ಬಂದಿದ್ದರು. ಆದರೆ, ಜನವರಿ 14, 1982ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸಹೋದರ ಕಾಲೇಜಿಗೆ ಹಿಂತಿರುಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟವರು ಮತ್ತೆಂದೂ ಹಿಂದಿರುಗಲಿಲ್ಲ. ಅವರು ಕಾಲೇಜನ್ನೂ ತಲುಪಲಿಲ್ಲ, ಹಾಸ್ಟೆಲ್ಗೂ ಹೋಗಲಿಲ್ಲ. ಆ ಸಮಯದಲ್ಲಿ ತಮ್ಮ ತಂದೆ-ತಾಯಿಗೆ ಕಾನೂನಿನ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರಲಿಲ್ಲ. ಹಾಗಾಗಿ ಅಣ್ಣ ಕಾಣೆಯಾದ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಈಗ, ತಾಯಿಯ ಹೆಸರಿನಲ್ಲಿರುವ ಜಮೀನು ಹಂಚಿಕೆ ಮಾಡಿಕೊಳ್ಳಲು ಮತ್ತು ದಾಖಲೆಗಳನ್ನು ಸರಿಪಡಿಸಲು ಸಹೋದರನ ಅವರ ಅವಶ್ಯಕತೆ ಇರುವುದರಿಂದ, 43 ವರ್ಷಗಳ ನಂತರ ದೂರು ನೀಡಲಾಗಿದೆ.
ಕಾಣೆಯಾದ ತಮ್ಮ ಸಹೋದರನನ್ನು ಪತ್ತೆ ಮಾಡಿಕೊಡಬೇಕು ಎಂದು ದೂರುದಾರರು ಪೊಲೀಸರನ್ನು ಕೋರಿದ್ದಾರೆ. ಈ ಕುರಿತು ತೀರ್ಥಹಳ್ಳಿ ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.
