ತೀರ್ಥಹಳ್ಳಿ: ತಾಲೂಕಿನ ಲಕ್ಕುಂದದ ಬಳಿ ವ್ಯಕ್ತಿಯೊಬ್ಬರು ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಾಹಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಇಂದಿರಾನಗರದ ನಿವಾಸಿ ಅಭಿಷೇಕ್ ಶೆಟ್ಟಿ ಮೃತಪಟ್ಟ ದುರ್ದೈವಿ. ಮೃತ ಅಭಿಷೇಕ್ ಇಂದು ಮಧ್ಯಾಹ್ನ ಪತ್ರೋಡೆ ಮಾಡಲು ಮರಕೆಸುವಿನ ಎಲೆಗಳನ್ನು ಕೊಯ್ಯಲು ಮರ ಹತ್ತಿದ್ದರು. ಆದರೆ ಮರದ ಮೇಲಿಂದ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಅವರು ಗಮನಿಸಿರಲಿಲ್ಲ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಾಹ ಉಂಟಾಗಿ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
Thirthahalli Tragedy ಅರಣ್ಯ ಇಲಾಖೆ ಹಾಗೂ ಕೆಇಬಿ ವಿರುದ್ಧ ಸ್ಥಳೀಯರ ಆಕ್ರೋಶ
ಈ ಕುರಿತು ಸ್ಥಳೀಯರು ಪ್ರತಿಕ್ರಿಯಿಸಿದ್ದು, ಈ ದುರಂತಕ್ಕೆ ಅರಣ್ಯ ಇಲಾಖೆ ಹಾಗೂ ಕೆಇಬಿ (ಮೆಸ್ಕಾಂ) ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ. ಅವರಿಬ್ಬರೂ ಪರಸ್ಪರ ಚರ್ಚಿಸಿ ವಿದ್ಯುತ್ ಲೈನ್ ಬಳಿ ಇರುವ ಹಾಗೂ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕಿತ್ತು. ಇಲ್ಲದಿದ್ದರೆ ಮಳೆಗಾಲದ ಸಂದರ್ಭದಲ್ಲಿ ಮರಗಳು ಬಿದ್ದು ಅಥವಾ ಇಂತಹ ಸಂದರ್ಭಗಳಲ್ಲಿ ಮರ ಹತ್ತಿದಾಗ ಕರೆಂಟ್ ಶಾಕ್ ಹೊಡೆದು ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
