ಶಿವಮೊಗ್ಗ : ನಗರದ ವಿನೋಬನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಮನೆಯೊಂದರಲ್ಲಿ ಕಳೆದ ಒಂದು ವಾರದಿಂದ ಅಡಗಿಕೊಂಡಿದ್ದ ನಾಗರ ಹಾವನ್ನು ಉರಗ ತಜ್ಞ ಸ್ನೇಕ್ ಕಿರಣ್ ಅವರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಶೌಚಾಲಯದ ಪೈಪ್ ಒಳಗಿದ್ದ ಹಾವನ್ನು ಹೊರತೆಗೆಯಲು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬೇಕಾಯಿತು.
ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಫೆಬ್ರವರಿ 17 ಮತ್ತು 18 ರಂದು ವಿದ್ಯುತ್ ವ್ಯತ್ಯಯ
ಮನೆಯ ಮಾಲೀಕ ಗವಿ ಸಿದ್ದೇಶ್ ಅವರಿಗೆ ವಾರದ ಹಿಂದೆಯೇ ಹಾವಿನ ಸುಳಿವು ಸಿಕ್ಕಿತ್ತು. ಆದರೆ ಎಷ್ಟೇ ಹುಡುಕಿದರೂ ಹಾವು ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಶೌಚಾಲಯದ ಕಮೋಡ್ ಪೈಪ್ ಅಡಿಯಲ್ಲಿ ಹಾವು ಸೇರಿಕೊಂಡಿರುವುದು ತಿಳಿದಾಗ, ತಕ್ಷಣ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಿರಣ್ ಅವರು, ಅನಿವಾರ್ಯವಾಗಿ ಟಾಯ್ಲೆಟ್ ಬೇಸಿನ್ ಒಡೆದು ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಬೇಸಿಗೆ ಕಾಲ ಆರಂಭವಾಗುತ್ತಿರುವುದರಿಂದ ನೆಲ ಒಣಗುತ್ತಿದ್ದು, ತಂಪಾದ ಜಾಗ ಅರಸುತ್ತಾ ಹಾವುಗಳು ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಮನೆಯ ಮುಂಭಾಗದಲ್ಲಿ ಸಾಲಾಗಿ ಹೂವಿನ ಕುಂಡಗಳನ್ನು ಇಡುವುದರಿಂದ ಹಾವಿನ ಚಲನವಲನಗಳು ಪತ್ತೆಯಾಗುವುದು ಕಷ್ಟವಾಗುತ್ತದೆ. ಆದ್ದರಿಂದ ಕುಂಡಗಳ ಸಂಖ್ಯೆ ಕಡಿಮೆ ಮಾಡುವುದು ಸೂಕ್ತ ಎಂದು ಸ್ನೇಕ್ ಕಿರಣ್ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.
