Chandragutti Fair ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಚಂದ್ರಗುತ್ತಿಯಲ್ಲಿ ನಡೆಯಲಿರುವ ಶ್ರೀ ರೇಣುಕಮ್ಮ ದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ. ಫೆಬ್ರವರಿ 24 ಮತ್ತು 25 ರಂದು ನಡೆಯಲಿರುವ ಈ ಜಾತ್ರೆಯಲ್ಲಿ ಸಾಂಪ್ರದಾಯಿಕ ಬೆತ್ತಲೆ ಸೇವೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಈ ಎರಡು ದಿನಗಳ ಕಾಲ ವರದಾ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ದೇವರಿಗೆ ಮುಡಿ ಅರ್ಪಿಸುವುದು, ಪಡ್ಲಿಗಿ ತುಂಬಿಸುವುದು ಹಾಗೂ ಪ್ರಮುಖವಾಗಿ ಬೆತ್ತಲೆ ಸೇವೆ’ ನೀಡುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ. ಸಾರ್ವಜನಿಕ ನೈತಿಕತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆದರೆ, ಈ ನಿಷೇಧಾಜ್ಞೆಯು ದೇವಸ್ಥಾನದ ಮೂಲ ಧಾರ್ಮಿಕ ವಿಧಿವಿಧಾನಗಳಿಗೆ ಅನ್ವಯಿಸುವುದಿಲ್ಲ. ಶ್ರೀ ರೇಣುಕಮ್ಮ ದೇವಿಯ ರಥೋತ್ಸವ, ಪೂಜಾ ಕೈಂಕರ್ಯಗಳು ಮತ್ತು ಇತರ ಸಂಪ್ರದಾಯಬದ್ಧ ಧಾರ್ಮಿಕ ಆಚರಣೆಗಳನ್ನು ಎಂದಿನಂತೆ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಭಕ್ತಾದಿಗಳು ಶಾಂತಿಯುತವಾಗಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
Chandragutti Fair DC Bans Naked Worship




