Sigandur ಶಿವಮೊಗ್ಗ :ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಳೆಗಟ್ಟಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರಿನಲ್ಲಿ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಶ್ರದ್ಧೆ ಹಾಗೂ ವಿಶಿಷ್ಟ ದೇಶಪ್ರೇಮದೊಂದಿಗೆ ಆಚರಿಸಲಾಯಿತು. ಮಲೆನಾಡಿನ ಪ್ರಸಿದ್ಧ ಶಕ್ತಿಪೀಠ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಹಾಗೂ ನೂತನ ಸಿಗಂದೂರು ಸೇತುವೆಯ ಮೇಲೆ ತ್ರಿವರ್ಣ ಧ್ವಜ ಹಾರಾಡುವ ಮೂಲಕ ಇಡೀ ಕರೂರು ಹೋಬಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಧರ್ಮದರ್ಶಿ ಎಸ್. ರಾಮಪ್ಪನವರು ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು. ಧ್ವಜಾರೋಹಣಕ್ಕೂ ಮುನ್ನ ದೇವಿಯ ಗರ್ಭಗುಡಿಯಲ್ಲಿ ರಾಷ್ಟ್ರಧ್ವಜವನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಮೃದ್ಧಿ ಹಾಗೂ ಕ್ಷೇಮಕ್ಕಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಸಿಬ್ಬಂದಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಇತ್ತ ಕರೂರು ಹೋಬಳಿಯ ಸಾರ್ವಜನಿಕರು ಹಾಗೂ ಯುವಕರು ಸಿಗಂದೂರು ಸೇತುವೆಯಮೇಲೆ ನಡುರಾತ್ರಿಯಲ್ಲೇ ಧ್ವಜಾರೋಹಣ ಮಾಡುವ ಮೂಲಕ ತಮ್ಮ ಅಪೂರ್ವ ದೇಶಪ್ರೇಮವನ್ನು ತೋರ್ಪಡಿಸಿದರು. ಸರಿಯಾಗಿ ರಾತ್ರಿ 12 ಗಂಟೆಯಾಗುತ್ತಿದ್ದಂತೆ ಸೇತುವೆ ಮೇಲೆ ನೆರೆದಿದ್ದ ನೂರಾರು ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಹಾಗೂ ಭಾರತ್ ಮಾತಾ ಕಿ ಜೈ ಎಂಬ ಜಯಘೋಷಗಳನ್ನು ಕೂಗಿದರು.
