CRIME INVESTIGATION

ಶಿವಮೊಗ್ಗ ಸಂಕ್ಷಿಪ್ತ ಸುದ್ದಿ : ಮನೆಗಳ್ಳತನ, ಬಾರ್‌ನಲ್ಲಿ ಹಲ್ಲೆ ಸೇರಿ ಪ್ರಮುಖ ಕ್ರೈಂ ಸುದ್ದಿಗಳು

ajjimane ganesh ನವೀಕರಣ: 22 ಏಪ್ರಿಲ್ 2026, 4:40 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗದಲ್ಲಿ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ವಿವರಗಳನ್ನು ನೀಡುವ ಮಲೆನಾಡು ಟುಡೆ ಡಿಜಿಟಲ್ ಮೀಡಿಯಾದ ಇವತ್ತಿನ ಚಟ್ ಪಟ್ ನ್ಯೂಸ್ ಇಲ್ಲಿದೆ

ಶಿವಮೊಗ್ಗ ಸಂಕ್ಷಿಪ್ತ ಸುದ್ದಿ 1 : ಮನೆ ಬೀಗ ಮುರಿದು ಕಳ್ಳತನ

ಸಾಗರ ರಸ್ತೆಯ ವಾಜಪೇಯಿ ಬಡಾವಣೆಯ ನಿವಾಸಿಯೊಬ್ಬರ ಮನೆಯ ಬೀಗ ಮುರಿದು ನಗದು ದೋಚಿರುವ ಘಟನೆ ನಡೆದಿದೆ. ವಾಜಪೇಯಿ ಬಡಾವಣೆಯ ಶ್ರೀರಂಗ ಎಂಬುವವರು ತಮ್ಮ ಪತ್ನಿಯೊಂದಿಗೆ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸಮಯದಲ್ಲಿ ಕಳ್ಳರು ಈ ಕೃತ್ಯವೆಸಗಿದ್ದಾರೆ. ಮದುವೆ ಮುಗಿಸಿ ರಾತ್ರಿ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಮನೆಯ ಮುಖ್ಯದ್ವಾರದ ಬೀಗ ಒಡೆದು ಒಳಪ್ರವೇಶಿಸಿದ್ದಾರೆ. ಕೋಣೆಯಲ್ಲಿದ್ದ ವಾರ್ಡ್‌ರೋಬ್ ಬೀಗವನ್ನು ಮುರಿದು ಅದರಲ್ಲಿದ್ದ 10000 ರೂಪಾಯಿ ನಗದು ಹಣವನ್ನು ಕಳವು ಮಾಡಿದ್ದಾರೆ. ಕೃತ್ಯದ ಬಳಿಕ ತಮ್ಮ ಯಾವುದೇ ಸುಳಿವು ಲಭ್ಯವಾಗದಿರಲಿ ಎಂಬ ಉದ್ದೇಶದಿಂದ ಮನೆಯೊಳಗೆ ಖಾರದ ಪುಡಿಯನ್ನು ಎರಚಿ ಪರಾರಿಯಾಗಿದ್ದಾರೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಸಂಕ್ಷಿಪ್ತ ಸುದ್ದಿ 2 : ಬಿಲ್​ ಕೆಳಿದ್ದಕ್ಕೆ ಹಲ್ಲೆ

ಮದ್ಯಪಾನ ಹಾಗೂ ಊಟ ಮಾಡಿದ ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ ಗ್ರಾಹಕರು ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಅಬ್ಬಲಗೆರೆಯ ದುರ್ಗಾ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ನಾಲ್ವರು ಅಪರಿಚಿತರು ಬಾರ್‌ನಲ್ಲಿ ಮದ್ಯ ಸೇವಿಸಿ ಊಟ ಮಾಡಿದ್ದು, ಒಟ್ಟು 3000 ರೂಪಾಯಿ ಬಿಲ್ ಆಗಿತ್ತು.

ಈ ಹಣವನ್ನು ನೀಡುವಂತೆ ಬಾರ್‌ನ ಅಡುಗೆ ವಿಭಾಗದ ಉಸ್ತುವಾರಿ ನೋಡಿಕೊಳ್ಳುವ ಕೃಷ್ಣಮೂರ್ತಿ ಅವರು ಕೇಳಿದಾಗ, ಹಣ ಪಾವತಿಸಲು ನಿರಾಕರಿಸಿದ ಗ್ರಾಹಕರು ಏಕಾಏಕಿ ಗಲಾಟೆ ತೆಗೆದಿದ್ದಾರೆ. ವಿವಾದ ವಿಕೋಪಕ್ಕೆ ತಿರುಗಿ ಕೃಷ್ಣಮೂರ್ತಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಈ ವೇಳೆ ಜಗಳ ಬಿಡಿಸಲು ಬಂದ ಅವರ ಪುತ್ರ ಅಕ್ಷಯ ಮೇಲೆಯೂ ಆರೋಪಿಗಳು ಬಿಯರ್ ಬಾಟಲಿ ಹಾಗೂ ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ತಂದೆ, ಮಗ ಇಬ್ಬರೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಸಂಕ್ಷಿಪ್ತ ಸುದ್ದಿ 3 : ಮಹಿಳಾ ವೈದ್ಯೆ ಕೆಲಸಕ್ಕೆ ಅಡ್ಡಿ

ಕರ್ತವ್ಯನಿರತ ಮಹಿಳಾ ವೈದ್ಯಾಧಿಕಾರಿಯೊಬ್ಬರೊಂದಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಘಟನೆ ಸಮೀಪದ ಸನ್ಯಾಸಿ ಕೋಡಮಗ್ಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಜನವರಿ 7ರಂದು ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯಲ್ಲಿ ರೋಗಿಗಳು ಇಲ್ಲದಿದ್ದ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಹಂಸವೇಣಿ ಅವರು ಶೌಚಾಲಯಕ್ಕೆ ತೆರಳಿದ್ದರು.

ಈ ವೇಳೆ ಏಕಾಏಕಿ ಆಸ್ಪತ್ರೆಗೆ ಆಗಮಿಸಿದ ವ್ಯಕ್ತಿಯೊಬ್ಬ, ವೈದ್ಯೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಅವರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಸಂಕ್ಷಿಪ್ತ ಸುದ್ದಿ: ಮನೆಗಳ್ಳತನ, ಬಾರ್‌ನಲ್ಲಿ ಹಲ್ಲೆ ಸೇರಿ 4 ಪ್ರಮುಖ ಕ್ರೈಂ ಸುದ್ದಿಗಳು Shivamogga Brief News: House Theft, Bar Assault, and Other Top Crime Stories
ಶಿವಮೊಗ್ಗ ಸಂಕ್ಷಿಪ್ತ ಸುದ್ದಿ : ಮನೆಗಳ್ಳತನ, ಬಾರ್‌ನಲ್ಲಿ ಹಲ್ಲೆ ಸೇರಿ 4 ಪ್ರಮುಖ ಕ್ರೈಂ ಸುದ್ದಿಗಳು Shivamogga Brief News: House Theft, Bar Assault, and Other Top Crime Stories

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ