Shimoga ಶಿವಮೊಗ್ಗ: ನಗರದ ಎನ್ ಯು (NU) ಆಸ್ಪತ್ರೆಯು ಜಿಲ್ಲೆಯಲ್ಲೇ ಮೊದಲ ಬಾರಿಗೆ ಮೃತ ವ್ಯಕ್ತಿಯಿಂದ (ಕ್ಯಾಡವರಿಕ್) ಪಡೆದ ಮೂತ್ರಪಿಂಡವನ್ನು ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಜೋಡಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ ಎಂದು ಕಿಡ್ನಿ ಕಸಿ ತಜ್ಞ ಡಾ. ಪ್ರವೀಣ್ ಮಾಳವಾದೇ ತಿಳಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಎರಡೂವರೆ ವರ್ಷಗಳಿಂದ ಡಯಾಲಿಸಿಸ್ ಪಡೆಯುತ್ತಿದ್ದ 69 ವರ್ಷದ ವಿಜಯಲಕ್ಷ್ಮೀ ಎಂಬುವವರಿಗೆ ಈ ಕಸಿ ಮಾಡಲಾಗಿದೆ. ಇತ್ತೀಚೆಗೆ ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ 65 ವರ್ಷದ ವ್ಯಕ್ತಿಯ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದರು. ಮಂಗಳೂರಿನಿಂದ ಗ್ರೀನ್ ಕಾರಿಡಾರ್ ಮೂಲಕ ತರಲಾದ ಈ ಕಿಡ್ನಿಯನ್ನು ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿದ್ದ ಮಹಿಳೆಗೆ ಅಳವಡಿಸಲಾಗಿದೆ.
ಹಿರಿಯ ಕಿಡ್ನಿ ಕಸಿ ಶಸ್ತ್ರಚಿಕಿತ್ಸಕ ಡಾ. ಪ್ರದೀಪ ಎಂ.ಜಿ. ನೇತೃತ್ವದಲ್ಲಿ, ಡಾ. ಪ್ರವೀಣ್ ಮಾಳವಾದೇ, ಅರಿವಳಿಕೆ ತಜ್ಞರಾದ ಡಾ. ಕಾರ್ತಿಕ್ ಎಸ್.ಎಲ್. ಮತ್ತು ಡಾ. ಆಕಾಶ್ ಜೆ.ಎಸ್. ಅವರ ತಂಡ ಈ ಕಾರ್ಯಾಚರಣೆ ನಡೆಸಿತು. ಸಂಜೆ 7:30ಕ್ಕೆ ಆರಂಭವಾದ ಶಸ್ತ್ರಚಿಕಿತ್ಸೆ ಸತತ 7 ಗಂಟೆಗಳ ಕಾಲ ನಡೆದು ಮಧ್ಯರಾತ್ರಿ 2:30ಕ್ಕೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ರೋಗಿಯು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಇದು ವೈದ್ಯಕೀಯವಾಗಿ ಅತ್ಯಂತ ಅಪಾಯಕಾರಿ ಕೆಲಸವಾಗಿತ್ತು ಎಂದರು.
Shimoga 30ಕ್ಕೂ ಹೆಚ್ಚು ಕಸಿ ಬಳಿಕ ಹೊಸ ಮೈಲಿಗಲ್ಲು
ಈ ಬಗ್ಗೆ ಹಿರಿಯ ಕಿಡ್ನಿ ಕಸಿ ಶಸ್ತ್ರಚಿಕಿತ್ಸಕ ಡಾ. ಪ್ರದೀಪ ಎಂ.ಜಿ. ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಈವರೆಗೆ ಬದುಕಿರುವ ದಾನಿಗಳಿಂದ 30ಕ್ಕೂ ಹೆಚ್ಚು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೇವೆ. ಆದರೆ, ಮೃತ ವ್ಯಕ್ತಿಯಿಂದ ಕಿಡ್ನಿ ಪಡೆದು ಕಸಿ ಮಾಡಿದ್ದು ಜಿಲ್ಲೆಯಲ್ಲಿ ಇದೇ ಮೊದಲು ಎಂದು ವಿವರಿಸಿದರು. ಸಜೀವ ದಾನಿಗಳಿಂದ ಪಡೆದ ಕಿಡ್ನಿ ಕಸಿ ಮಾಡಿದಾಗ ರೋಗಿ ಬೇಗ ಚೇತರಿಸಿಕೊಳ್ಳುತ್ತಾರೆ, ಆದರೆ ಮೃತ ವ್ಯಕ್ತಿಯ ಕಿಡ್ನಿ ಪ್ರಕರಣದಲ್ಲಿ ಚೇತರಿಕೆಗೆ ಸುಮಾರು 15 ದಿನಗಳ ಕಾಲಾವಕಾಶ ಬೇಕಾಯಿತು ಎಂದು ಅವರು ತಿಳಿಸಿದರು
ಈ ಮಹತ್ಕಾರ್ಯಕ್ಕೆ ಶಿವಮೊಗ್ಗ, ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆಗಳು ಶೂನ್ಯ ಸಂಚಾರ ವಲಯ (Green Corridor) ನಿರ್ಮಿಸಿ ಸಹಕರಿಸಿದ್ದವು. ಅಂಬ್ಯುಲೆನ್ಸ್ ಚಾಲಕ ಯತೀಶ್ ಆಚಾರ್ಯ ಅವರು ಕಿಡ್ನಿಯನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಸ್ಪತ್ರೆಯ ಘಟಕ ಮುಖ್ಯಸ್ಥ ರೋಬಿನ್ ಇಮಾನ್ಯುವೆಲ್ ಜತ್ತನ್ನ ಅವರು ಈ ಎಲ್ಲಾ ಇಲಾಖೆಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

