Shimoga Police ಶಿವಮೊಗ್ಗ: ಶಿವಮೊಗ್ಗ ಅಷ್ಟೇ ಅಲ್ಲದೆ ರಾಜ್ಯದ ಅನೇಕ ಕಡೆಗಳಲ್ಲಿ ಗಾಂಜಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಸಾಕಷ್ಟು ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಆದರೂ ಸಹ ಗಾಂಜಾ ಹಾವಳಿ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಎಸ್.ಪಿ. ನಿಖಿಲ್ ಬಿ. ಅವರು ಹೊಸದಾದ ಕಾನ್ಸೆಪ್ಟ್ ಒಂದನ್ನು ಜಾರಿಗೆ ತಂದಿದ್ದಾರೆ. ಅದೇನೆಂದರೆ ಬೇಡ ಬ್ರೋ ಎನ್ನುವಂತಹ ಕಾನ್ಸೆಪ್ಟ್.
ಶಿವಮೊಗ್ಗ : ಆನ್ಲೈನ್ ಟ್ರೇಡಿಂಗ್ ಆಮಿಷಕ್ಕೆ ಒಳಗಾಗಿ 39 ಲಕ್ಷ ಕಳೆದುಕೊಂಡ ಉದ್ಯಮಿ
Shimoga Police ಏನಿದು ಬೇಡ ಬ್ರೋ ಕಾನ್ಸೆಪ್ಟ್?
ಈ ಕಾನ್ಸೆಪ್ಟ್ನ ಹೆಸರನ್ನು ಕೇಳಿದಾಗ, ಇದು ಇಂದಿನ ಟ್ರೆಂಡಿಂಗ್ ಹೆಸರಿನಂತೆಯೇ ಇದೆ. ಯಾರೋ ಪರಿಚಿತರು, ತುಂಬಾ ಹತ್ತಿರದವರು ಬಳಸುವ ಪದದ ರೀತಿಯಲ್ಲಿದೆ ಎನಿಸುವುದು ಸಹಜ. ಇದರ ನಿಜವಾದ ಉದ್ದೇಶವೂ ಕೂಡ ಅದೇ. ಪೊಲೀಸರು ಗಾಂಜಾದಿಂದಾಗುವ ಅನೇಕ ದುಷ್ಪರಿಣಾಮಗಳನ್ನು ವಿಡಿಯೋ ಮೂಲಕ ಅಥವಾ ಪೋಸ್ಟರ್ ಮೂಲಕ, ಬೇಡ ಬ್ರೋ ಎನ್ನುವ ಅಡಿಬರಹವನ್ನು ಬಳಸಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೇಗಿದೆ?
ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಅದಕ್ಕೆ ನೈಜ ಉದಾಹರಣೆ ಎಂಬಂತೆ, ಈಗಾಗಲೇ ಕಳೆದ 6 ತಿಂಗಳಲ್ಲಿ ಪೊಲೀಸರು 59 ಕೆಜಿ ತೂಕದ, 24 ಲಕ್ಷ ರೂ. ಮೌಲ್ಯದ ಗಾಂಜಾವನ್ನು ಸುಟ್ಟು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಜಿಲ್ಲೆಯಲ್ಲಿಯೇ 340ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಗಾಂಜಾವನ್ನು ನಿರ್ಮೂಲನೆ ಮಾಡಲು ಎಲ್ಲ ರೀತಿಯಲ್ಲೂ ಪಣ ತೊಟ್ಟು ನಿಂತಿದ್ದಾರೆ. ಇದರ ನಡುವೆ, ಪೊಲೀಸ್ ಇಲಾಖೆಯು ಗಾಂಜಾ ನಿರ್ಮೂಲನೆ ಮಾಡಿ ಕೇಸ್ ದಾಖಲಿಸುವುದಷ್ಟೇ ಅಲ್ಲದೆ, ಅನೇಕ ಗಾಂಜಾ ವ್ಯಸನಿಗಳನ್ನು ಕೌನ್ಸೆಲಿಂಗ್ಗೆ ಕಳುಹಿಸಿ ಅವರನ್ನು ಗಾಂಜಾ ಮುಕ್ತರನ್ನಾಗಿ ಮಾಡುವ ಮಾನವೀಯ ಕಾರ್ಯವನ್ನೂ ಮಾಡುತ್ತಿದೆ. ಜೊತೆಗೆ, ಕಾಲೇಜುಗಳಿಗೂ ತೆರಳಿ ಗಾಂಜಾ ಕುರಿತು ಉಪನ್ಯಾಸಗಳನ್ನು ನೀಡುತ್ತಿದ್ದಾರೆ.
ಇಂಪ್ಯಾಕ್ಟ್ ಆಗುತ್ತಾ ಬೇಡ ಬ್ರೋ ಕಾನ್ಸೆಪ್ಟ್?
ಮೊದಲೇ ಹೇಳಿದ ಹಾಗೆ, ಬೇಡ ಬ್ರೋ ಎನ್ನುವ ಪದವೇ ಒಂದು ರೀತಿಯ ಬಾಂಧವ್ಯ ಬೆಸೆಯುವಂತಿದೆ. ಪ್ರೀತಿಯಿಂದ ಹೇಳಿದರೆ ಯಾರು ಕೇಳಲ್ಲ ಹೇಳಿ? ಎಲ್ಲರೂ ಕೇಳುತ್ತಾರೆ. ಆದರೆ, ಅದು ಸಮರ್ಪಕವಾಗಿ ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಿದೆ. ಕೇವಲ ಪೊಲೀಸರಷ್ಟೇ ಅಲ್ಲದೆ, ಸಾರ್ವಜನಿಕರು ಹಾಗೂ ಪ್ರಸ್ತುತ ಟ್ರೆಂಡಿಂಗ್ನಲ್ಲಿರುವ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಗಳು ಇದರಲ್ಲಿ ಕೈಜೋಡಿಸಿದರೆ, ಇದು ಖಂಡಿತವಾಗಿಯೂ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅಷ್ಟೇ ಅಲ್ಲದೆ, ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸರು ಡ್ರೋನ್ ಹಾರಿಸುವ ಮೂಲಕ ಗಾಂಜಾ ಪತ್ತೆಗೆ ಮುಂದಾಗಿದ್ದಾರೆ. ಜೊತೆಗೆ, ಪಬ್ಲಿಕ್ ಐ ಎನ್ನುವಂತಹ ಕಾನ್ಸೆಪ್ಟ್ ಕೂಡ ಜಾರಿಗೆ ತಂದಿದ್ದು, ಸಾರ್ವಜನಿಕರು ಇದನ್ನು ಬಳಸಿಕೊಂಡು ದೂರು ನೀಡುವ ಮೂಲಕ ಪೊಲೀಸರೊಂದಿಗೆ ಕೈಜೋಡಿಸಬೇಕಿದೆ.
ಬರಹ : ಪ್ರತಾಪ್ ತೀರ್ಥಹಳ್ಳಿ





