ಕೈಚೀಲದಲ್ಲಿ ಕೇಳಿಸಿತು ಮಗುವಿನ ಅಳು! ರಿಪ್ಪನ್‌ಪೇಟೆ ಬಸ್​ ನಿಲ್ದಾಣದ ಬಳಿ ಕರುಳು ಹಿಂಡುವ ಘಟನೆ

Newborn Baby ಶಿವಮೊಗ್ಗ : ಹೆಣ್ಣು ಮಗುವನ್ನು ಅನಾಥವಾಗಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಕರುಳು ಹಿಂಡುವ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು ಹೊಳೆ ಬಳಿ ಭಾನುವಾರ ರಾತ್ರಿ ಬೆಳಕಿಗೆ ಬಂದಿದೆ. ಕೇವಲ 10 ರಿಂದ 15 ದಿನ ಪ್ರಾಯದ ನವಜಾತ ಹೆಣ್ಣು ಶಿಶುವನ್ನು ಅಪರಿಚಿತರು ಬಟ್ಟೆಯ ಚೀಲದಲ್ಲಿಟ್ಟು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ.

ಗವಟೂರು ಹೊಳೆ ಬಳಿಯಿರುವ ಬಸ್ ನಿಲ್ದಾಣದಲ್ಲಿ ಯಾರೋ ಅಪರಿಚಿತರು ಮಗುವನ್ನು ಬಟ್ಟೆಯಲ್ಲಿ ಸುತ್ತಿ, ಕೈಚೀಲದೊಳಗೆ ಇಟ್ಟು ಹೋಗಿದ್ದಾರೆ. ಮಗು ಹಸಿವಿನಿಂದ ಬಳಲಬಾರದು ಎಂದುಕೊಂಡೋ ಏನೋ, ಆ ಚೀಲದೊಳಗೆ ಒಂದು ಹಾಲಿನ ಬಾಟಲಿಯನ್ನು ಕೂಡ ಇಟ್ಟಿದ್ದರು. ಭಾನುವಾರ ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಯೊಬ್ಬರಿಗೆ ಮಗುವಿನ ಅಳುವಿನ ಧ್ವನಿ ಕೇಳಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಮಗುವಿನ ಅಳು ಕೇಳಿ ಸ್ಥಳೀಯರು ತಕ್ಷಣವೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣವೇ ಕಾರ್ಯಪ್ರವೃತ್ತರಾದ ಪಿಎಸ್‌ಐ ರಾಜುರೆಡ್ಡಿ ಹಾಗೂ ಅವರ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಧಾವಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಪೊಲೀಸರು ರಕ್ಷಿಸಿದ ಹೆಣ್ಣು ಮಗು ಕೇವಲ 1.6 ಕೆಜಿ ತೂಕವಿದ್ದು, ಸದ್ಯಕ್ಕೆ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಿಪ್ಪನ್‌ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಆರೈಕೆ ನೀಡಿದ ಬಳಿಕ, ಹೆಚ್ಚಿನ ಪಾಲನೆ ಹಾಗೂ ವೈದ್ಯಕೀಯ ನಿಗಾಕ್ಕಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗಕ್ಕೆ ರವಾನಿಸಲಾಗಿದೆ.

Newborn Baby Girl Abandoned Inside Bag