Shivamogga Mar 6, 2024 ಮೊದಲೆ ಮದುವೆಯಾಗಿದ್ದನ್ನ ಮುಚ್ಚಿಟ್ಟು ಮತ್ತೊಂದು ವಿವಾಹವಾಗಿದ್ದಲ್ಲದೇ ಆಕೆ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿದ ಪ್ರಕರಣ ಸಂಬಂಧ ಶಿವಮೊಗ್ಗ ಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ
2017ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ 25 ವರ್ಷದ ಯುವತಿಗೆ ಶಿವಮೊಗ್ಗ ನಗರದ ವಿನೋದ್ ನೊಂದಿಗೆ ವಿವಾಹವಾಗಿತ್ತು ಆದರೆ ಅವನು ಈ ಮೊದಲೇ ಬೇರೆ ಮದುವೆಯಾಗಿದ್ದು ಈ ಬಗ್ಗೆ ಯುವತಿಯು ಕೇಳಿದಾಗ ಆಕೆಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿದ್ದ. ಈ ಸಂಬಂಧ ನೊಂದ ಯುವತಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0004/2018 ಕಲಂ 498(ಎ) ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. .
ಸದರಿ ಪ್ರಕರಣದಲ್ಲಿ ಆಗಿನ ತನಿಖಾಧಿಖಾರಿಗಳಾದ ಪ್ರಭಾವತಿ. ಸಿ. ಶೇತಸನದಿ,ಪೊಲೀಸ್ ಇನ್ಸ್ ಪೆಕ್ಟರ್, ಮಹಿಳಾ ಪೊಲೀಸ್ ಠಾಣೆ ರವರು ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣ ಸಂಬಂಧ ಸರ್ಕಾರದ ಪರವಾಗಿ ಕಿರಣ್ ಕುಮಾರ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು.
ಶಿವಮೊಗ್ಗದ ಘನ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು , ಆರೋಪಿತರ ವಿರುದ್ದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಸನ್ಮತಿ.ಎಸ್.ಆರ್. ಇವರು ದಿನಾಂಕ; 02-03-2024 ರಂದು ಆರೋಪಿ1 ವಿನೋದ್, 29 ವರ್ಷ ಶಿವಮೊಗ್ಗ ಟೌನ್ ಈತನಿಗೆ 6 ವರ್ಷ ಶಿಕ್ಷೆ ಮತ್ತು 20,000/- ದಂಡ , ಆರೋಪಿ 2 ಜಯಮ್ಮ, 56 ವರ್ಷ ಶಿವಮೊಗ್ಗ ಟೌನ್ ಈಕೆಗೆ 3 ವರ್ಷ ಶಿಕ್ಷೆ ಮತ್ತು 10,000/- ರೂ ದಂಡ ಮತ್ತು ಆರೋಪಿ 3 ಶ್ರೀನಿವಾಸ, 62 ವರ್ಷ ಶಿವಮೊಗ್ಗ ಟೌನ್ ಈತನಿಗೆ 3 ವರ್ಷ ಶಿಕ್ಷೆ ಮತ್ತು 10000/-ದಂಡ ವಿಧಿಸಿ ಆದೇಶಿಸಿದ್ದಾರೆ. .