Shimoga ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರು ಇವರಿಬ್ಬರನ್ನೂ ಕರೆಸಿ ಬುದ್ಧಿವಾದ ಹೇಳಬೇಕು ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಉದ್ಯೋಗ ನೇರ ಸಂದರ್ಶನ: ಎಲ್ಲಿ, ಯಾವಾಗ
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾನಗರದಲ್ಲಿರುವ 1920ರ ಅವಧಿಯ ತುಂಗಾ ಸೇತುವೆ ಶಿಥಿಲಗೊಂಡಿರುವ ವಿಚಾರವಾಗಿ, ನಾವು 2018ರಲ್ಲೇ ಅಂದಿನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದೆವು. ಅಷ್ಟೇ ಅಲ್ಲದೆ, 2023ರಲ್ಲಿ ಸತೀಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಲೋಕೋಪಯೋಗಿ ಸಚಿವರಾದ ಬಳಿಕ ಮೂರು ಬಾರಿ ಶಿವಮೊಗ್ಗಕ್ಕೆ ಬಂದಿದ್ದರು. ಆಗೆಲ್ಲಾ ನಾವು ಅವರನ್ನು ಖುದ್ದಾಗಿ ಸೇತುವೆ ಜಾಗಕ್ಕೆ ಕರೆದುಕೊಂಡು ಹೋಗಿ ಸಂಪೂರ್ಣ ಮಾಹಿತಿ ನೀಡಿ, ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆವು. ಅದರ ಫಲವಾಗಿ ಸಚಿವರು ಸೇತುವೆ ಕಾಮಗಾರಿಗೆ 40 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ, ಎಂದು ವಿವರಿಸಿದರು.
ಈ ನಡುವೆ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಈ ಸೇತುವೆ ಮಂಜೂರಾತಿಗೆ ನನ್ನ ಶ್ರಮವೂ ಇದೆ ಎನ್ನುತ್ತಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ, ಅವರ ಶ್ರಮವೂ ಇದೆ ಅವರೂ ಸೇತುವೆ ವಿಚಾರವಾಗಿ ಓಡಾಡಿದ್ದಾರೆ, ನಮ್ಮ ಶ್ರಮವೂ ಇದೆ. ಆದರೆ, ಕಾಮಗಾರಿಗೆ 40 ಕೋಟಿ ರೂಪಾಯಿ ಬಿಡುಗಡೆಯಾಗಿದ್ದರೂ ಸಹ, ರಾಜ್ಯ ಸರ್ಕಾರ ದಿವಾಳಿಯಾಗಿದೆ, ಸರ್ಕಾರದ ಬಳಿ ಹಣವಿಲ್ಲ ಎಂದು ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ 200 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅವರೇ ಹೋಗಿ ಗುದ್ದಲಿ ಪೂಜೆ ನೆರವೇರಿಸಿ ಬಂದಿದ್ದಾರೆ, ಎಂದು ಲೇವಡಿ ಮಾಡಿದರು.
ಗುದ್ದಲಿ ಪೂಜೆಗೆ ಅರಿಶಿನ-ಕುಂಕುಮವನ್ನು ನಾನೇ ತರುತ್ತೇನೆ ಎಂದು ಹೇಳಿ ಪೂಜೆ ನೆರವೇರಿಸಿದ್ದಾರೆ. ಚನ್ನಬಸಪ್ಪನವರೇ, ಗುದ್ದಲಿ ಪೂಜೆಗೆ ಕೇವಲ ಅರಿಶಿನ-ಕುಂಕುಮ ತಂದರೆ ಸಾಲದು, ಸರ್ಕಾರಿ ಶಿಷ್ಟಾಚಾರ ಮುಖ್ಯವಾಗುತ್ತದೆ. ಆದರೆ ಆ ಶಿಷ್ಟಾಚಾರ ಪಾಲಿಸುವ ಕನಿಷ್ಠ ಸೌಜನ್ಯ ನಿಮ್ಮಲ್ಲಿಲ್ಲ, ಎಂದರು.
ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರ ವಿರುದ್ಧವೂ ಹರಿಹಾಯ್ದ ಯೋಗೀಶ್, ಸಂಸದರು ಯಾವಾಗಲೂ ರಾಜ್ಯ ಸರ್ಕಾರವು ಉಡಾನ್ (UDAN) ಯೋಜನೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸುತ್ತಿರುತ್ತಾರೆ. ಅಲ್ಲದೆ, ವಿಮಾನ ನಿಲ್ದಾಣದ ವಿಚಾರವಾಗಿ ರಾಜ್ಯ ಸರ್ಕಾರದ ಮೇಲೆ ಇಲ್ಲದ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ (NEET) ಪರೀಕ್ಷಾ ಅಕ್ರಮದ ಬಗ್ಗೆ ಮಾತ್ರ ಅವರು ಎಲ್ಲೂ ಚಕಾರ ಎತ್ತುತ್ತಿಲ್ಲ. ಆದ್ದರಿಂದ, ಬಿಜೆಪಿ ಜಿಲ್ಲಾಧ್ಯಕ್ಷರು ಇವರಿಬ್ಬರನ್ನೂ ಹತ್ತಿರ ಕುಳ್ಳಿರಿಸಿಕೊಂಡು, ಸರ್ಕಾರದ ವಿರುದ್ಧ ಅಪಪ್ರಚಾರ ಮಾಡದಂತೆ ಬುದ್ಧಿವಾದ ಹೇಳಬೇಕು, ಎಂದು ಆಗ್ರಹಿಸಿದರು.
