ಸಾಗರ : ಒಂದು ಸಣ್ಣ ತಪ್ಪು, ಅನಾಹುತಕ್ಕೆ ದಾರಿ ಮಾಡಿಕೊಡುತ್ತೆ ಎನ್ನುವುದಕ್ಕೆ ಉದಾಹರಣೆಯೊಂದು ಸಾಕ್ಷಿಯಾಗಿದೆ. ಸಿಟ್ಟಿನ ಬರದಲ್ಲಿ ಸ್ವಂತ ತಮ್ಮನ ಮೇಲೆ ಕೈ ಮಾಡಿದ ಅಣ್ಣ ಇದೀಗ ಕೊಲೆ ಕೇಸ್ನಲ್ಲಿ ಜೈಲು ಸೇರುವಂತಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತ ನೋಡುವುದಾದರೆ.
ಘಟನೆಯ ವಿವರ
ಸಾಗರ ತಾಲೂಕಿನ ಮಾದಾರಕೊಪ್ಪ ಗ್ರಾಮದಲ್ಲಿ ರಾಘವೇಂದ್ರ ಹಾಗೂ ಮಹೇಶ್ ಎಂಬ ಇಬ್ಬರು ಅಣ್ಣ-ತಮ್ಮಂದಿರು ಇರುತ್ತಾರೆ. ರಾಘವೇಂದ್ರ ತಮ್ಮ, ಮಹೇಶ್ ಅಣ್ಣ. ಅವರ ತಾಯಿಯ ಹೆಸರಿನಲ್ಲಿ ಎರಡೂವರೆ ಎಕರೆ ಆಸ್ತಿ ಇರುತ್ತದೆ, ಆದರೆ ಅದು ನಾಲ್ಕು ಭಾಗವಾಗಿರುತ್ತದೆ. ಇದರ ನಡುವೆ, ರಾಘವೇಂದ್ರ ಅವರಿಗೆ ತಮ್ಮ ಮುಕ್ಕಾಲು ಎಕರೆ ಜಾಗದಲ್ಲಿ ತೋಟ ಮಾಡಬೇಕು ಎನಿಸುತ್ತದೆ. ಆದರೆ ಅವರ ಬಳಿ ಹಣ ಇರುವುದಿಲ್ಲ. ಈ ಕಾರಣದಿಂದ ರಾಘವೇಂದ್ರ, ತಾಯಿಯ ಹೆಸರಿನಲ್ಲಿದ್ದ ಜಾಗದ ಮೇಲೆ ಬ್ಯಾಂಕೊಂದರಲ್ಲಿ 3 ಲಕ್ಷ ರೂಪಾಯಿ ಲೋನ್ ಪಡೆಯುತ್ತಾರೆ. ಆದರೆ ಲೋನ್ ಕೊಡುವಾಗ ಯಾರಾದರೂ ಶ್ಯೂರಿಟಿ ಇರಬೇಕಲ್ಲ? ಅದಕ್ಕಾಗಿ ಅಣ್ಣ ಮಹೇಶ್ನನ್ನು ಶ್ಯೂರಿಟಿ ಹಾಕಲು ಕರೆಯುತ್ತಾರೆ. ಮಹೇಶ್ ಕೂಡ ಆ ಲೋನ್ಗೆ ಶ್ಯೂರಿಟಿ ಸಹಿ ಹಾಕಿದ ಮೇಲೆ ಲೋನ್ ಮಂಜೂರಾಗುತ್ತದೆ. ಆಮೇಲೆ ನಡೆದದ್ದೇ ಅಸಲಿ ಕಥೆ
Sagara ಲೋನ್ ನೋಟಿಸ್ ಬಂದಿದ್ದೇ ಸಾವಿಗೆ ಕಾರಣವಾಯಿತೇ?
ಹೀಗೆ ರಾಘವೇಂದ್ರ ಲೋನ್ ತೆಗೆದುಕೊಂಡು 4 ವರ್ಷಗಳು ಕಳೆದುಹೋಗುತ್ತವೆ. ಆದರೆ, ರಾಘವೇಂದ್ರ ತಾನು ಪಡೆದಿದ್ದ 3 ಲಕ್ಷ ಸಾಲಕ್ಕೆ ಅಸಲನ್ನು ಕಟ್ಟದೆ ಬರೀ ಬಡ್ಡಿಯನ್ನು ಮಾತ್ರ ಕಟ್ಟುತ್ತಾ ಬರುತ್ತಾರೆ. ಇದರಿಂದಾಗಿ ಬ್ಯಾಂಕ್ನವರು ತಮ್ಮ ರಾಘವೇಂದ್ರ ಹಾಗೂ ಶ್ಯೂರಿಟಿ ಹಾಕಿದ್ದ ಅಣ್ಣ ಮಹೇಶ್ ಇಬ್ಬರಿಗೂ ನೋಟಿಸ್ ಕಳುಹಿಸುತ್ತಾರೆ. ಇದು ಅಣ್ಣ ಮಹೇಶ್ನನ್ನು ಕೆರಳಿಸುತ್ತದೆ. ಅಲ್ಲಿಂದ ಇಬ್ಬರ ನಡುವೆ ದಾಯಾದಿ ಕಲಹ ಶುರುವಾಗುತ್ತದೆ.
ಊಟ ಮುಗಿಸಿ ಬರುತ್ತಿದ್ದಾಗ ದೊಣ್ಣೆಯಿಂದ ಹೊಡೆದ ತಮ್ಮ
ಅಂದು ಮೇ 23ರ ರಾತ್ರಿ 10:30ರ ಸಮಯ. ರಾಘವೇಂದ್ರ ನೆಂಟರ ಮನೆಯಲ್ಲಿ ಊಟ ಮುಗಿಸಿ ಮನೆ ಕಡೆ ಹೆಜ್ಜೆ ಹಾಕುತ್ತಿದ್ದರು. ಆ ರಾತ್ರಿ ತಮಗೆ ಇಂತಹದ್ದೊಂದು ಘಟನೆ ನಡೆಯುತ್ತೇ ಎಂದು ಅವರು ಊಹಿಸಿಯೂ ಇರಲಿಲ್ಲ. ರಾಘವೇಂದ್ರ ಬರುತ್ತಿದ್ದಾಗ ಆರೋಪಿ ಮಹೇಶ್ ತಮ್ಮನನ್ನು ಅಡ್ಡಗಟ್ಟಿದ್ದಾನೆ. ಏನೋ, ಬ್ಯಾಂಕ್ನಲ್ಲಿ ಸಾಲ ತಗೊಳ್ಳೋಕೆ ಗೊತ್ತು ನಿನಗೆ, ಅದನ್ನು ತೀರಿಸೋಕೆ ಗೊತ್ತಿಲ್ವಾ ಎಂದು ಅವಾಚ್ಯ ಶಬ್ದಗಳಿಂದ ಬೈಯಲು ಶುರು ಮಾಡಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲೇ ಪಕ್ಕದಲ್ಲಿದ್ದ ದೊಣ್ಣೆ ತಗೆದುಕೊಂಡು ಸೊಂಟಕ್ಕೆ ಬಲವಾಗಿ ಹೊಡೆದಿದ್ದಾನೆ. ಲೋನ್ ಕಟ್ಟದಿದ್ದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದಾನೆ.
Sagara ಆಸ್ಪತ್ರೆಗೆ ದಾಖಲಾಗಿದ್ದ ಅಣ್ಣ ಚಿಕಿತ್ಸೆ ಫಲಕಾರಿಯಾಗದೆ ಸಾವು
ಸೊಂಟಕ್ಕೆ ಬಲವಾಗಿ ಏಟು ಬಿದ್ದಿದ್ದರಿಂದ ಕೂಡಲೇ ರಾಘವೇಂದ್ರ ಅವರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗುತ್ತದೆ. ಆದರೆ ದುರಾದೃಷ್ಟವಶಾತ್, ರಾಘವೇಂದ್ರ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್.ಪಿ ನಿಖಿಲ್ ಬಿ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
