ಶಿವಮೊಗ್ಗ: ಇನ್ನರ್ ವೀಲ್ ಜಿಲ್ಲೆ 318ರ 56ನೇ ಜಿಲ್ಲಾ ಸಮ್ಮೇಳನವನ್ನು ಇದೇ ಡಿಸೆಂಬರ್ 13 ಮತ್ತು 14 ರಂದು ಸಾಗರ ರಸ್ತೆಯಲ್ಲಿರುವ ಪ್ರೇರಣಾ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮುಂಗಾರು ಮಳೆ ಖ್ಯಾತಿಯ ಪೂಜಾಗಾಂಧಿ ಆಗಮಿಸುತ್ತಿದ್ದಾರೆ.
ಪ್ರತಿಭೆಯಿದ್ದರೆ ಸಾಕು! ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ಶೋಗೆ ಶಿವಮೊಗ್ಗದಲ್ಲಿಯೇ ನಡೆಯಲಿದೆ ಆಡಿಷನ್!
ಈ ಕುರಿತು ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇನ್ನರ್ ವೀಲ್ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ಮಾಹಿತಿ ನೀಡಿ , ಶಿವಮೊಗ್ಗ ನಗರದ ಎಲ್ಲಾ ಐದು ಇನ್ನರ್ ವೀಲ್ ಸಂಸ್ಥೆಗಳು ಜಂಟಿಯಾಗಿ ಈ ಸಮ್ಮೇಳನವನ್ನು ಆಯೋಜಿಸಿವೆ. ಇನ್ನರ್ ವೀಲ್ ಸಂಸ್ಥೆಯು ಜಗತ್ತಿನಾದ್ಯಂತ ಮಹಿಳೆಯಿಂದ, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಸ್ಪಂದಿಸುವ ಸಂಸ್ಥೆಯಾಗಿದ್ದು, ಜನಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಸೇವೆಯನ್ನು ತನ್ನ ಧೈಯ ಹಾಗೂ ಗುರಿಯನ್ನಾಗಿ ಹೊಂದಿರುವ ಸಂಸ್ಥೆಯು, ನಾಗರೀಕರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಸ್ನೇಹ, ಸೌಹಾರ್ದತೆ, ಸಹಬಾಳ್ವೆ ಮತ್ತು ಸಹಿಷ್ಣುತೆಯ ಗುಣಗಳನ್ನು ಪ್ರಸಾರ ಮಾಡುತ್ತಿದೆ.

ಪ್ರಸಕ್ತ ವರ್ಷದಲ್ಲಿ ಶಿವಮೊಗ್ಗ ಇನ್ನರ್ ವೀಲ್ ಸಂಸ್ಥೆಗಳು ಮತ್ತು ಇನ್ನರ್ ವೀಲ್ ಸಂಸ್ಥೆ ಶಿವಮೊಗ್ಗ ಪೂರ್ವವು ಹತ್ತು ಹಲವಾರು ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅದರಲ್ಲಿ ಪ್ರಮುಖವಾಗಿ ಗರ್ಭಕಂಠ ಕ್ಯಾನ್ಸರ್ ಜಾಗೃತಿ, ‘ಸ್ವಪ್ ಆಸ್ ಅಂಡ್ ಸ್ಪೀಕ್ ಔಟ್’ ಎಂಬ ಮಹಿಳಾ ಜಾಗೃತಿ ಅಭಿಯಾನ, ಉಚಿತ ಎಚ್ಪಿವಿ ವ್ಯಾಕ್ಸಿನೇಷನ್ ಡ್ರೈವ್, ಸ್ತನಪಾನ ಮಹತ್ವ ಜಾಗೃತಿ ಇವೇ ಮೊದಲಾದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿವೆ.
ಈ ಸಮ್ಮೇಳನವು ಇದೇ ತಿಂಗಳ 13 ಮತ್ತು 14ರಂದು ನಡೆಯಲಿದ್ದು, ಇನ್ನರ್ ವೀಲ್ ಜಿಲ್ಲೆಗೆ ಸಂಬಂಧಪಟ್ಟ 8 ಜಿಲ್ಲೆಗಳಾದ ಮೈಸೂರು, ಹಾಸನ, ಚಾಮರಾಜನಗರ, ಉಡುಪಿ, ಮಂಗಳೂರು, ಮಡಿಕೇರಿ, ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ 700ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಸಮ್ಮೇಳನದ ಮುಖ್ಯ ಅತಿಥಿ ಹಾಗೂ ಉದ್ಘಾಟಕಿಯಾಗಿ ಪ್ರಸಿದ್ಧ ಚಲನಚಿತ್ರ ನಟಿ ಮತ್ತು ‘ಮುಂಗಾರು ಮಳೆ’ ಖ್ಯಾತಿಯ ಪೂಜಾ ಗಾಂಧಿಯವರು ಆಗಮಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ನಂತರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಪ್ರಮುಖ ಆಕರ್ಷಣೆಯಾಗಿ ‘ಶ್ರೀ ಕೃಷ್ಣ ಲೀಲಾಮೃತ’ ಎಂಬ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ. ಎಂದರು.
ಡಿಸೆಂಬರ್ 14 ರಂದು ಮುಂದುವರೆಯುವ ಸಮ್ಮೇಳನದಲ್ಲಿ ಇನ್ನರ್ ವೀಲ್ ಸಂಸ್ಥೆಯ ಧೈಯೋದ್ದೇಶಗಳ ಬಗ್ಗೆ, ಎಲ್ಲಾ ಇನ್ನರ್ ವೀಲ್ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಸಮೀಕ್ಷೆ, ಮಹಿಳಾ ಸಬಲೀಕರಣ ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಅದರ ಕಾರ್ಯರೂಪುರೇಷೆಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಮಾರ್ಗಸೂಚಿಯನ್ನು ನೀಡಲಾಗುವುದು ಎಂದರು.
Pooja Gandhi to Grace 56th Inner Wheel Conference








