ಮಲೆನಾಡು ಟುಡೆ ಸುದ್ದಿ / ಸಾಗರ / ಮಲ್ನಾಡ್ನ ಮನೆಗಳಲ್ಲಿ ಗಾದೆಯೊಂದಿದೆ, ನಮ್ಮ ಕೈ ಆಗಬೇಕು, ಕಂಡೋರ ಮಕ್ಕಳಾಗಬೇಕು ಎಂಬ ಗಾದೆಯದು. ಅಂದರೆ ಹೊಡೆಯಬೇಕು ಅಂದರೆ ಯಾರದ್ದೋ ಮಕ್ಕಳಾಗಬೇಕು, ಹೊಡೆಯುವ ಕೈ ನಮ್ಮದಾಗಬೇಕು.. ಆಗ ಬೀಳುವ ಪೆಟ್ಟಿಗೆ ಯಾವುದೇ ಭಾವನೆಗಳಿರಲ್ಲ. ಕೇವಲ ಏಟಿನ ದೌರ್ಜನ್ಯ ಮಾತ್ರ ಇರುತ್ತದೆ ಎಂಬುದನ್ನ ಹೇಳುವುದಕ್ಕೆ ಪರ್ಯಾಯವಾಗಿ ಈ ಗಾದೆಯನ್ನ ಹೇಳುತ್ತಾರೆ. ಈ ಗಾದೆಯಂತೆ ಶಿವಮೊಗ್ಗದ ಶಾಲೆಯೊಂದರಲ್ಲಿ ನಡೆದ ಘಟನೆಯೊಂದು ಇದೀಗ ಚರ್ಚೆಗೆ ಕಾರಣವಾಗಿದೆ.
ಸಣ್ಣ ವಯಸ್ಸಿನ ಬಾಲಕರ ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಹೊಡೆಯಲಾಗಿದೆ. ಪೆಟ್ಟು ಬಿದ್ದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದ್ದುನ್ನ ನೋಡಿ ಕುಟುಂಬಸ್ಥರ ಕಣ್ಣು ಸಹ ಕೆಂಪಾಗಿದೆ. ತಮ್ಮ ಪರಿಚಯಸ್ಥರನ್ನ ಕರೆದು ನೋಡಿ ಹೇಗೆ ಹೊಡೆದಿದ್ದಾರೆ ಅಂತಾ ಮಕ್ಕಳ ಟೀಶರ್ಟ್ ಎತ್ತಿ ಬಾಸುಂಡೆ ಬಿದ್ದ ಬೆನ್ನನ್ನ ತೋರಿಸ್ತಾ, ಒತ್ತರಿಸಿ ಬಂದ ಕಣ್ಣೀರನ್ನ ಸೆರೆಗಿನಲ್ಲಿ ಒರೆಸಿಕೊಂಡು, ಹೀಗಾ ಹೊಡೆಯದು ಅಂತಾ ಅಮ್ಮಂದಿರು ಪ್ರಶ್ನಿಸ್ತಿದ್ದಾರೆ.
ಮಕ್ಕಳ ಬೆನ್ನು ತುಂಬೆಲ್ಲಾ ಊದ್ದುದ್ದ ಗೀರ್ ಗೀರು ಬಾಸುಂಡೆ ಬಂದಿದ್ದು ಮಕ್ಕಳನ್ನ ತೋರಿಸ್ತಾ ಸಂಬಂಧಿಕರು ಮೊದಲೇ ಹುಷಾರಿರಲಿಲ್ಲ ಮತ್ತು ಜ್ವರದಿಂದ ಬಳಲುತ್ತಿದ್ದ , ಅಂತ್ರದಲ್ಲಿ ಬರೆ ಎಳೆದಂತೆ ಹೊಡ್ದು ಕಳಿಸಿದ್ದಾರಲ್ಲ! ಕೇಳೋರ ಯಾರಿಲ್ಲ ಅಂತಾನಾ ಎಂದು ಪ್ರಶ್ನಿಸ್ತಿದ್ದಾರೆ.
ಸ್ಥಳೀಯ ವರದಿಗಾರರು ಮಲೆನಾಡು ಟುಡೆಗೆ ನೀಡಿರುವ ಮಅಹಿತಿ ಪ್ರಕಾರ, ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುವಾಸೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (Government School) ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆ ಎಂಬ ಕಾರಣಕ್ಕೆ 2, 3 ಮತ್ತು 4ನೇ ತರಗತಿಯ ಮೂವರು ವಿದ್ಯಾರ್ಥಿಗಳಿಗೆ ಅತಿಥಿ ಶಿಕ್ಷಕಿಯೊಬ್ಬರು ಕೋಲಿನಿಂದ ಹೊಡೆದಿದ್ದಾರಂತೆ.
ಈ ಬಗ್ಗೆ ಇನಷ್ಟೆ ಪೂರ್ತಿ ವಿಚಾರ ಗೊತ್ತಾಗಬೇಕಿದೆ. ಪೋಷಕರ ಆರೋಪ ಇರೋದು, ಶಾಲೆಯ ಅತಿಥಿ ಶಿಕ್ಷಕಿ ಒಬ್ಬರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ಹಿನ್ನೆಲೆಯಲ್ಲಿ ಮೂವರು ಮಕ್ಕಳಿಗೆ ಕೋಲಿನಿಂದ ಹೊಡೆದಿದ್ದಾರೆ ಅನ್ನೋದು. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಬಿದ್ದ ಏಟಿನ ವಿಡಿಯೋ ಮಾಡಿ ತೋರಿಸಲಾಗಿದೆ. ಶಿಕ್ಷಣಸಚಿವರ ತವರು ಜಿಲ್ಲೆಯಾದ್ದರಿಂದ ವಿಷಯ ಇನ್ನಷ್ಟು ಗಂಭೀರವಾಗಲಿದ್ದು, ಪ್ರಕರಣದ ಬಗ್ಗೆ ಪೂರ್ತಿ ಮಾಹಿತಿ ಸದ್ಯದಲ್ಲಿಯೇ ಹೊರಬೀಳಲಿದೆ.
