ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಪೊಲೀಸರು ಆಗಾಗ ತಮ್ಮದೆ ಆದ ವರ್ಕಿಂಗ್ ಸ್ಟೈಲ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ನಡೆದಿದ್ದು, ಅದಕ್ಕೆ ಸಂಬಂಧಿಸಿದ ಕಾರ್ಯಾಚರಣೆ ಬಗ್ಗೆ ಸ್ವತಃ ಪೊಲೀಸ್ ಇಲಾಖೆಯೇ ಪ್ರಕಟಣೆಯನ್ನ ನೀಡಿದೆ.
ನಡೆದ ಘಟನೆಯನ್ನ ಮೊದಲು ನೋಡುವುದಾದರೆ, ದಾವಣಗೆರೆ ಜಿಲ್ಲೆ ಚನ್ನಗಿರಿಯಿಂದ ನಾಲ್ಕು ದಿನಗಳ ಕೆಳಗೆ 14 ವರ್ಷ ಹುಡುಗಿಯೊಬ್ಬಳು ತಪ್ಪಿಸಿಕೊಂಡಿದ್ದಳು. ತನ್ನ ಪೋಷಕರ ಸುಪರ್ದಿಯಿಂದ ತಪ್ಪಿಸಿಕೊಂಡ ಆಕೆಗೆ ಮತ್ತೆ ತನ್ನ ಮನೆ ಸೇರಲು ಗೊತ್ತಾಗಲಿಲ್ಲ. ಕಾರಣ ಆಕೆಗೆ ಮಾತು ಬರುತ್ತಿರಲಿಲ್ಲ. ಹೀಗಾಗಿ ಗೊತ್ತಾಗದೆ ಶಿವಮೊಗ್ಗಕ್ಕೆ ಬಂದಿದ್ದಾಳೆ , ಕುಂಸಿ ಪೊಲೀಸ್ ಸ್ಟೇಷನ್ ಲಿಮಿಟ್ನಲ್ಲಿ ಬರುವ ತಮ್ಮಡಿಹಳ್ಳಿಯಲ್ಲಿ ಬಸ್ನಿಂದ ಇಳಿದು ಮುಂದಿನ ದಾರಿ ತಿಳಿಯದೇ ಆತಂಕದಲ್ಲಿದ್ದಳು.
ಈಕೆಯ ಬಗ್ಗೆ ಸಂಶಯಗೊಂಡ ಒಬ್ಬರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ವಿಷಯ ತಿಳಿದು ಕುಂಸಿ ಪೊಲೀಸ್ ಠಾಣೆಯ (Kumsi Police) ಎಎಸ್ಐ ಕೃಷ್ಣ ಮೂರ್ತಿ ಹಾಗೂ ಎಎಸ್ಐ ಲೀಲಾವತಿ ಅವರು ಸ್ಥಳಕ್ಕೆ ತೆರಳಿದ್ದಾರೆ. ಬಾಲಕಿಯೊಂದಿಗೆ ಮಾತನಾಡಿ ಆಕೆಯ ಮನೆ, ಪೋಷಕರು ಹಾಗೂ ವಿಳಾಸದ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ.ಆದರೆ ಬಾಲಕಿಗೆ ಮಾತು ಬಾರದ ಕಾರಣ ಆಕೆಯ ಪೋಷಕರು ಯಾರು, ಎಲ್ಲಿಯವರು ಎಂಬುದನ್ನು ತಿಳಿದುಕೊಳ್ಳುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಬಾಲಕಿಯ ಸುರಕ್ಷತೆ ದೃಷ್ಟಿಯಿಂದ ಆಕೆಯನ್ನು ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ತಾತ್ಕಾಲಿಕವಾಗಿ ಇರಿಸಲು ಕ್ರಮ ಕೈಗೊಂಡರು.
ಈ ನಡುವೆ ಸೋಶಿಯಲ್ ಮೀಡಿಯಾ ಹಾಗೂ ಮಿಸ್ಸಿಂಗ್ ಕಂಪ್ಲೆಂಟ್ ಸರ್ಚ್ ಹಾಗೂ ಡಿಪಾರ್ಟ್ಮೆಂಟ್ ನಡುವಿನ ಎನ್ಕ್ವೈರಿಗಳ ಸಹಾಯದಿಂದ ಬಾಲಕಿಯ ಮೂಲ ಪತ್ತೆಯಾಗಿದೆ. ಚನ್ನಗಿರಿಯ ಮೂಲದವಳಾಗಿದ್ದ ಬಾಲಕಿಯ ಪೋಷಕರನ್ನ ಪತ್ತೆ ಹಚ್ಚಿ , ಬಾಲಮಂದಿರಕ್ಕೆ ಅವರನ್ನ ಕರೆಸಿಕೊಂಡಿದ್ದಾರೆ. ಬಳಿಕ ಅಗತ್ಯ ವಿಚಾರಣೆ ಹಾಗೂ ಕಾನೂನು ಪ್ರೊಸಿಜರ್ಗಳನ್ನ ಮುಗಿಸಿ ಬಾಲಕಿಯನ್ನ ಪೋಷಕರ ಸುಪರ್ಧಿಗೆ ಒಪ್ಪಿಸಿದ್ದಾರೆ.
ಪೊಲೀಸರು ತಮಗೆ ಬಂದ ಒಂದು ಕರೆಯಿಂದ ಆಕೆಯನ್ನ ಪೋಷಕರ ಸುಪರ್ಧಿಗೆ ಒಪ್ಪಿಸುವರೆಗೂ ಸಾಕಷ್ಟು ಕೆಲಸ ಮಾಡಿದ್ದರು. ಅವರ ಶ್ರಮಕ್ಕೆ ಮೂಕ ಬಾಲಕಿಯ ಮುಖದಲ್ಲಿ ಕೊನೆಯದಾಗಿ ಕಂಡ ನಗು ಸಾರ್ಥಕತೆಯನ್ನ ತಂದುಕೊಟ್ಟಿದೆ.
