ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಗುತ್ತಿಗೆದಾರ ಸಂಸ್ಥೆಗೆ ಬೃಹತ್ ಪ್ರಮಾಣದ ಹಣ ಪಾವತಿಸಿ ಅಕ್ರಮ ಎಸಗಲಾಗಿದೆ ಎಂದು ರಾಷ್ಟ್ರಭಕ್ತರ ಬಳಗ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆ ಗಂಭೀರ ಆರೋಪ ಮಾಡಿವೆ .
Sharavathi Scam ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಎಲ್. ಕೆ. ಶ್ರೀಪತಿ ಅವರು ಮಾತನಾಡಿ, ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಯಾವುದೇ ರೀತಿಯ ಪೂರ್ವಾನುಮತಿ ದೊರೆತಿಲ್ಲ. ಅಲ್ಲದೆ, ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಹೈಕೋರ್ಟ್ ತಡೆಯಾಜ್ಞೆಯೂ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.
ನಿಯಮಗಳ ಪ್ರಕಾರ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಇಲ್ಲದೆ ಕಾಮಗಾರಿ ನಡೆಸುವಂತಿಲ್ಲ ಎಂಬ ಉನ್ನತ ನ್ಯಾಯಾಲಯದ ಆದೇಶವಿದ್ದರೂ, ಕೆಪಿಸಿಎಲ್ (KPCL) ಸಂಸ್ಥೆಯು 2025ರ ಡಿಸೆಂಬರ್ 11ರಂದು ಒಂದೇ ದಿನ ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾ ಸಂಸ್ಥೆಗೆ 380 ಕೋಟಿಗೂ ಅಧಿಕ ಹಣವನ್ನು ವರ್ಗಾಯಿಸಿದೆ. ಕಾರ್ಯಾದೇಶವೇ ಇಲ್ಲದ ಯೋಜನೆಗೆ ಸಾರ್ವಜನಿಕರ ತೆರಿಗೆ ಹಣವನ್ನು ಅಕ್ರಮವಾಗಿ ಸಂದಾಯ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ದೂರಿದರು.
ಒಂದು ವೇಳೆ ಕೇಂದ್ರ ಪರಿಸರ ಇಲಾಖೆಯು ಈ ಯೋಜನೆಗೆ ಅನುಮತಿ ನಿರಾಕರಿಸಿದರೆ, ಈಗಾಗಲೇ ಪಾವತಿಸಲಾಗಿರುವ 380 ಕೋಟಿಗೂ ಹೆಚ್ಚಿನ ಹಣದ ನಷ್ಟಕ್ಕೆ ಕೆಪಿಸಿಎಲ್ ನೇರ ಹೊಣೆಯಾಗಲಿದೆ. ಈ ಯೋಜನೆಯಲ್ಲಿ ಬೃಹತ್ ಮಟ್ಟದ ಭ್ರಷ್ಟಾಚಾರ ನಡೆದಿರುವ ಶಂಕೆ ಇರುವುದರಿಂದ, ರಾಜ್ಯ ಸರ್ಕಾರ ತಕ್ಷಣವೇ ಯೋಜನೆಯನ್ನು ಹಿಂಪಡೆಯಬೇಕು. ಹಾಗೂ ಈ ಅಕ್ರಮ ಹಣಕಾಸು ವಹಿವಾಟಿನ ಕುರಿತು ಸಿಬಿಐ (CBI) ತನಿಖೆಗೆ ಆದೇಶಿಸಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.
