ಮಲೆನಾಡು ಟುಡೆ ಸುದ್ದಿ / ಸಾಗರ / ಮಲ್ನಾಡ್ನಲ್ಲಿ ಅಕ್ರಮ ಬೇಟೆ ವಿಚಾರ ಕುತೂಹಲ ಮೂಡಿಸ್ತಿರುತ್ತದೆ. ಆದರೆ ಸಾಗರದಲ್ಲಿ ಬೇರೆಯದ್ದೆ ಕೇಸ್ ಆಗಿದೆ. ಇಲ್ಲಿ ಕಾಡು ಪ್ರಾಣಿಯನ್ನ ಬೇಟೆಯಾಡಿಲ್ಲ. ಅದಾಗಿಯೇ ಬಂದು ಬಲೆಗೆ ಬಿದ್ದಿದೆ. ಇನ್ನೇನು ಪಾಲು ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಪಾರೆಸ್ಟ್ನೋರ್ ಇನ್ಫಾರ್ಮೇಷನ್ ತಗಂಡು ಎಂಟ್ರಿಕೊಟ್ಟಿದ್ದರು. ಹಾಗಾಗಿ ಮೂವರು ಸಿಕ್ಕಿಬಿದ್ದು , ಇನ್ಮೂವರು ಎಸ್ಕೇಪ್ ಆಗಿದ್ದಾರೆ. ನಡೆದ ಘಟನೆ ಪೂರ್ತ ವಿವರ ಹೀಗಿದೆ.
ಸಾಗರ ತಾಲೂಕಿನ ನಾಗವಳ್ಳಿ (nagavalli) ಗ್ರಾಮದಲ್ಲಿ ನಡೆದ ಘಟನೆ ಇದು. ಇಲ್ಲಿನ ಸರ್ವೇ ನಂಬರ್ 72ರಲ್ಲಿ ಷಾಜಿ ಎಂಬವರ ಜಮೀನಿನ ಬೇಲಿಗೆ ಕರೆಂಟ್ ಕೊಡಲಾಗಿತ್ತು. ಇದರಿಂದ ಬೇಲಿ ಮುಟ್ಟಿ ಎರಡು ಗಂಡು ಚುಕ್ಕೆ ಜಿಂಕೆ ಅಲ್ಲೆ ಸತ್ತುಹೋಗಿದ್ದವು. ಅವುಗಳ ಮಾಂಸವನ್ನು ಜಮೀನಿನಲ್ಲೇ ಬೇಯಿಸಿದ್ದ ವೇಳೆ ಶರಾವತಿ ವನ್ಯಜೀವಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಪ್ರಕರಣದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದರು. ಶರಾವತಿ ವನ್ಯಜೀವಿ ವಲಯದ ಕೋಗಾರ್ ವಲಯ ಅರಣ್ಯಾಧಿಕಾರಿ ಧನಂಜಯ ನಾಯ್ಕ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಾಗವಳ್ಳಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ವೇಳೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ, ಜಿಂಕೆಗಳ ಮಾಂಸ, ಬೇಯಿಸಲಾಗಿದ್ದ ಮಾಂಸದ ಅವಶೇಷಗಳು, ಸಾಂಬಾರು ತಯಾರಿಸಲು ಬಳಸಿದ್ದ ವಸ್ತುಗಳು ಹಾಗೂ ಮಣ್ಣಿನಲ್ಲಿ ಹೂತುಹಾಕಿದ್ದ ಜಿಂಕೆಗಳ ಕಳೇಬರದ ಕುರುಹುಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಈ ಕಾರಣಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅನುಸೂಚಿ–IIರಲ್ಲಿರುವ ಚುಕ್ಕೆ ಜಿಂಕೆ (Axis axis) ಜಾತಿಗೆ ಸೇರಿದ ಗಂಡು ಜಿಂಕೆಯನ್ನ ಬೇಟೆಯಾಡಿದ ಹಿನ್ನೆಲೆಯಲ್ಲಿ ಒಟ್ಟು ಆರು ಮಂದಿಯ ವಿರುದ್ಧ ಕೇಸ್ ಮಾಡಿದ್ದಾರೆ.ಈ ಪೈಕಿ ಎ1 ಸೇರಿದಂತೆ ಎ3, ಎ4, ಆರೋಪಿ ಎಸ್ಕೇಪ್ ಆಗಿದ್ದಾರೆ. ಎ2 ಆರೋಪಿ, ಎ5, ಎ6 ಆರೋಪಿಯನ್ನ ಬಂದಿಸಲಾಗಿದೆ. ಬಂಧಿತ ಮೂವರು ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಹಾಜರುಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ತಂಡಗಳು ಕ್ರಮ ಮುಂದುವರಿಸಿವೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಗುರುರಾಜ ತೊಳಬಂದಿ, ಕಿರಣ ಎ. ಬಿದರಳ್ಳಿ ಹಾಗೂ ಸಂಧ್ಯಾ ಎಸ್. ಭಾಗವಹಿಸಿದ್ದರು. ಗಸ್ತು ಅರಣ್ಯ ಪಾಲಕ ದೀಪಕ ಎಸ್. ಪ್ರಭು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.
