ಶಿವಮೊಗ್ಗ: ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಇನ್ನು ಏಳು ತಿಂಗಳ ಅವಧಿಯಲ್ಲಿ ರಾತ್ರಿ ವೇಳೆ ವಿಮಾನಗಳ ಹಾರಾಟಕ್ಕೆ (Night Landing Facility) ಚಾಲನೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (KSIIDC) ಅಧ್ಯಕ್ಷ ನಂಜನಯ್ಯನ ಮಠ ತಿಳಿಸಿದ್ದಾರೆ.
ದಾವಣಗೆರೆ ಟು ಶಿವಮೊಗ್ಗ: ಬೆಸ್ಕಾಂ ಸಿವಿಲ್ ಎಂಜಿನಿಯರ್ ಅರ್ಜುನ್ ಮನೆಗಳ ಮೇಲೆ ಲೋಕಾಯುಕ್ತ ರೇಡ್
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಪರವಾನಗಿ ನವೀಕರಣದ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಹಿಂದೆ 22 ಲಕ್ಷ ರೂ. ದಂಡ ಪಾವತಿಸಿ ಮೂರು ವರ್ಷಗಳ ಅವಧಿಗೆ ಪರವಾನಗಿ ನವೀಕರಿಸಲಾಗಿದ್ದು, ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಲಾಗಿದೆ. ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ವಿಮಾನಗಳು ವಾಪಸ್ ಹೋಗುವುದನ್ನು ತಡೆಯಲು ಮತ್ತು ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲು 6 ಕೋಟಿ ರೂ. ವೆಚ್ಚದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಡಿವಿಒಆರ್ (DVOR) ಯಾಂತ್ರಿಕ ವ್ಯವಸ್ಥೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಆರಂಭವಾಗಲಿದೆ. ಮಣ್ಣಿನ ಪರೀಕ್ಷಾ ವರದಿ ಬಂದ ಆರು ತಿಂಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.
ಉಡಾನ್ ಯೋಜನೆ ಮುಂದುವರಿಕೆಗೆ ಪ್ರಯತ್ನ
ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ ಹಾಗೂ ಗೋವಾಗೆ ಹೆಚ್ಚಿನ ಪ್ರಯಾಣಿಕರಿದ್ದಾರೆ. ವಿಮಾನ ನಿಲ್ದಾಣದ ‘ಉಡಾನ್’ ಯೋಜನೆ ಅವಧಿ ಮುಕ್ತಾಯದ ಹಂತದಲ್ಲಿದ್ದು, ಪ್ರಯಾಣಿಕರಿಗೆ ದರದ ಬಿಸಿ ತಟ್ಟದಂತೆ ತಡೆಯಲು ಸಂಸದರನ್ನು ವಿಶ್ವಾಸಕ್ಕೆ ಪಡೆದು ಯೋಜನೆಯನ್ನು ಮುಂದುವರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಾಗೆಯೇ ನಿವೇಶನಕ್ಕಾಗಿ ಆಗ್ರಹಿಸುತ್ತಿರುವ 300 ರೈತರ ಬೇಡಿಕೆಯನ್ನು ಕೆಹೆಚ್ಬಿ (KHB) ಮೂಲಕ ಈಡೇರಿಸಲು ಸಿಎಂಗೆ ಮನವಿ ಸಲ್ಲಿಸಲಾಗುವುದು. ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಪಿಪಿಟಿ (PPT) ಮಾದರಿಯಲ್ಲಿ ನಿರ್ಮಿಸಲಾಗುವುದು ಹಾಗೂ ಶೀಘ್ರದಲ್ಲೇ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭಿಸಲು ಅರ್ಜಿ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.





