Shivamogga Mar 11, 2024 ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಗೆ ಸಕಲ ಸಿದ್ಧತೆಗಳು ಅಂತಿಮ ಹಂತ ಪಡೆದುಕೊಂಡಿದೆ. ನಾಳೆಯಿಂದ ಜಾತ್ರೆ ನಡೆಯಲಿದೆ. ವಿಶೇಷ ಅಂದರೆ ಮಾರಿಕಾಂಬಾ ಜಾತ್ರೆಯ ಅಲಂಕಾರ ಈ ಸಲ ಸಖತ್ ಕುತೂಹಲ ಮೂಡಿಸುತ್ತಿದೆ. ಅಷ್ಟೆ ಅಲ್ಲದೆ ಹಿಂದೆಂದಿಗಿಂತಲೂ ವಿಶೇಷವಾಗಿ ಕಾಣಿಸುತ್ತಿದೆ.
ಮಾರ್ಚ್ 12 ರಿಂದ 16 ರವರೆಗೆ ಐದು ದಿನಗಳ ಕಾಲ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಕೋಟೆ ಮಾರಿಗದ್ದಿಗೆಯ ದೇವಸ್ಥಾನ ಹಾಗೂ ಅಮ್ಮನನ್ನು ಕೂರಿಸಲಾಗುವ ಗಾಂಧಿ ಬಜಾರಿನ ಸ್ಥಳದಲ್ಲಿ ಇದೇ ಪ್ರಥಮ ಬಾರಿಗೆ ವಿಶೇಷಾಲಂಕಾರ ಹಾಗೂ ದೀಪಾಲಂಕಾರ ಮಾಡಲಾಗಿದೆ.
ಬೆಂಗಳೂರಿನಿಂದ 40ಕ್ಕೂ ಹೆಚ್ಚಿನ ಕೆಲಸಗಾರರು ಮಾರಿಕಾಂಬೆಯನ್ನು ಕೂರಿಸುವ ಗದ್ದುಗೆ ಸುತ್ತ ವಿಶೇಷ ಅಲಂಕಾರವನ್ನ ಮಾಡಿದ್ದಾರೆ. ಹಣ್ಣು, ಕಾಯಿ, ಅರಶಿನ ಕುಂಕುಮ ಹಾಗೂ ಕೃತಕ ಹೂವು ಎಲೆಗಳನ್ನ ಬಳಸಿ ಮಾರಿಕಾಂಬಾ ದೇವಸ್ಥಾನವನ್ನು ಸಿಂಗರಿಸಲಾಗಿದೆ. ಅಷ್ಟೆ ಅಲ್ಲದೆ ಕಬ್ಬು ಬಳಸಿ ಮಂಟಪ ನಿರ್ಮಿಸಿರುವುದು ಇನ್ನಷ್ಟು ಕಳೆ ಕೊಟ್ಟಿದೆ. ದೀಪಾಲಂಕಾರವಂತೂ ಇಡೀ ಶಿವಮೊಗ್ಗವನ್ನು ಜಗಮಗವೆನಿಸುತ್ತಿದೆ.
ಲೋಡುಗಟ್ಟಲೇ ಬೆಲ್ಲದ ಹಣ್ಣುಗಳನ್ನ ಬಳಸಿ ವಿಶೇಷ ಅಲಂಕಾರ ಮಾರಲಾಡುತ್ತಿದೆ. ದೇವಸ್ಥಾನದ ಒಳಕ್ಕೆ ಪ್ರವೇಶಿಸುವ ಮುನ್ನ ಒಂಭತ್ತು ದೇವತೆಗಳ ನವ ದೇವತಾ ದರ್ಶನ ಪಡೆದು ಭಕ್ತರು ಪ್ರಸನ್ನರಾಗುವಂತೆ ಮಂಟಪವನ್ನ ನಿರ್ಮಿಸಲಾಗಿದ್ದು, ಅದನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ಹೂವು, ಹಣ್ಣು, ಮಾರಿಯಮ್ಮನಿಗೆ ಇಷ್ಟವೆನ್ನಲಾಗುವ ಹಸಿರು, ಕೆಂಪು ಗಾಜಿನ ಬಳೆಗಳನ್ನೂ ಅಲಂಕಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.
ವಿಶೇಷ ಅಂದರೆ, ಇಷ್ಟೆಲ್ಲಾ ಅಲಂಕಾರದ ಹಿಂದಿರೋದು ಎಂ ಶ್ರೀಕಾಂತ್ . ಎಂ.ಶ್ರೀಕಾಂತ್ ತಮ್ಮದೆ ಆದ ವಿಶಿಷ್ಟ ಕಲ್ಪನೆಯನ್ನ ಆಧರಿಸಿ ನಗರ ಹಾಗೂ ಮಾರಿಕಾಂಬೆಯನ್ನು ಕೂರಿಸುವ ದೇವಾಲಯ ಮತ್ತು ಗಾಂಧಿಬಜಾರ್ನಲ್ಲಿ ಅಲಂಕಾರಕ್ಕೆ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆಯೇ ಬೆಂಗಳೂರಿನಿಂದ ಬಂದಿರುವ ಕೆಲಸಗಾರರು ಸಿಂಗರಿಸುತ್ತಿದ್ದಾರೆ. ಈಗಾಗಲೇ ಗಾಂಧಿ ಬಜಾರ್ನಲ್ಲಿ ಚಾಮುಂಡೇಶ್ವರಿಯ ವಿಗ್ರಹವನ್ನು ನಿಲ್ಲಿಸಲಾಗಿದೆ. ಇದು ಜಾತ್ರೆಗೆ ಮತ್ತಷ್ಟು ಕಳೆಕೊಟ್ಟಿದೆ.
ಇತ್ತ ಸಂಪ್ರದಾಯಬದ್ದವಾಗಿ ಹೂವು, ಹಣ್ಣು, ಕಾಯಿ, ಬಳೆ, ಅರಶಿನ ಕುಂಕುಮಗಳನ್ನ ಬಳಸಿಕೊಂಡು ಜಾತ್ರೆಯ ಅಲಂಕಾರ ಮಾಡುತ್ತಿರುವುದು ಇನ್ನೊಂದು ರೀತಿಯ ಆಕರ್ಷಣೆಯಾಗಿದೆ.