Arecanut Lorries / ಮಲೆನಾಡು ಟುಡೆ ಸುದ್ದಿ / ಮಲ್ನಾಡ್ನಿಂದ ಹೊರಕ್ಕೆ ಸಾಗಿಸಲಾಗುತ್ತಿರುವ ಅಡಿಕೆಯ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಅಡ್ಡ ಹಾಕಲಾಗುತ್ತಿದೆಯಾ? ಹೀಗೊಂದು ವರದಿ ಸ್ಟೇಟ್ ಮೀಡಿಯಾವೊಂದರಲ್ಲಿ ವರದಿಯಾಗಿದೆ. ರಾಜ್ಯ ಮಟ್ಟದ ಪತ್ರಿಕಾ ಮಾಧ್ಯಮದ ವರದಿಯನ್ನು ಗಮನಿಸುವುದಾದರೆ, ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಿಂದ ಸಾಗಣೆಯಾಗುತ್ತಿರುವ ಅಡಕೆ ತುಂಬಿದ ಲಾರಿಗಳನ್ನು (Arecanut Lorries) ಮಹಾರಾಷ್ಟ್ರದ ಗಡಿಯಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ತಡೆದು ನಿಲ್ಲಿಸುವುದಷ್ಟೆ ಅಲ್ಲದೆ ಸೀಜ್ ಮಾಡುತ್ತಿದ್ದಾರಂತೆ. ಇದರಿಂದ ಅಡಿಕೆ ಮಾರಾಟಗಾರರಿಗೆ ಸಮಸ್ಯೆಯಾಗುತ್ತಿದೆ. ವಿಶೇಷವಾಗಿ ಶಿರಸಿಯಲ್ಲಿ ಈ ಬಗ್ಗೆ ಹೆಚ್ಚು ಸಮಸ್ಯೆಯಾಗಿದೆ ಎನ್ನಲಾಗಿದೆ. ಶಿವಮೊಗ್ಗ, ಮಂಗಳೂರು, ಪ್ರತಿಷ್ಠಿತ ಕ್ಯಾಂಪ್ಕೋ ಹಾಗೂ ಮ್ಯಾಮ್ಕೋಸ್ ಸಂಸ್ಥೆಗಳಿಂದ ಅಧಿಕೃತವಾಗಿ ರವಾನೆಯಾದ ಅಡಕೆ ವಾಹನಗಳನ್ನು ಸಹ ತಡೆಹಿಡಿಯಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Whatsapp / https://chat.whatsapp.com/JrsZ8He4nN600n0r3tJItz
ಮುಂದುವರಿದು, ಮಹಾರಾಷ್ಟ್ರ ಆಹಾರ ಇಲಾಖೆಯ ಕಮಿಷನರ್ ತುಕಾರಾಮ ಮುಂಡೆ ಅವರ ನೇರ ಆದೇಶದನ್ವಯ ಈ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ. ಸ್ಥಳೀಯವಾಗಿ ಕೆಲವು ಅಡಿಕೆ ಮಂಡಿಗಳ ಮೇಲೂ ರೇಡ್ ನಡೆದಿದೆ ಎನ್ನಲಾಗುತ್ತಿದೆ. ಈ ಸಂಬಂಧ ಶಿರಸಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರ ನೇತೃತ್ವದಲ್ಲಿ, ಬೆಳೆಗಾರರ ಮಹಾಮಂಡಳ ಹಾಗೂ ಕ್ಯಾಂಪ್ಕೋ ನಿಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸಿದೆ ಎಂದು ಸಹ ವರದಿಯಲ್ಲಿ ತಿಳಿಸಲಾಗಿದೆ.
