Eshwarappa ಶಿವಮೊಗ್ಗ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹೆದರಬಾರದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿರಲಿ ಅಥವಾ ದೇಶದಲ್ಲೇ ಇರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವಿಚಾರವನ್ನು ಪ್ರತಿಭಟನೆ ಮಾಡಲು ಮತ್ತು ವಿರೋಧಿಸಲು ಸಂಪೂರ್ಣ ಅವಕಾಶವಿದೆ. ಆದರೆ ಲೋಕಸಭೆಗೆ ಮುತ್ತಿಗೆ ಹಾಕುತ್ತೇವೆ, ಪೊಲೀಸರಿಗೆ ಕಲ್ಲಿನಿಂದ ಹೊಡೆಯುತ್ತೇವೆ, ನಮಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳುತ್ತೇವೆ ಎನ್ನುವ ಧೋರಣೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದರು.
ಪ್ರತಿಭಟನೆ ಮಾಡಲು ತನ್ನದೇ ಆದ ಒಂದು ಕಾನೂನಾತ್ಮಕ ವ್ಯವಸ್ಥೆ ಇದೆ. ಆದರೆ ಅಲ್ಲಿ ಪೊಲೀಸ್ ಇಲಾಖೆಯ ಅನೇಕ ಅಧಿಕಾರಿಗಳಿಗೆ ರಕ್ತಗಾಯಗಳಾಗಿ, ಹೊಡೆತ ಬಿದ್ದು ಆಸ್ಪತ್ರೆ ಮತ್ತು ಪೊಲೀಸ್ ಸ್ಟೇಷನ್ ತಲುಪಿರುವುದನ್ನು ನೋಡಿದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವಾ ಅಥವಾ ಗೂಂಡಾ ವ್ಯವಸ್ಥೆಗೆ ಬೆಂಬಲ ಕೊಡುತ್ತಿದ್ದೇವಾ ಎಂಬ ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಈ ನಿಟ್ಟಿನಲ್ಲಿ ನಾನು ಪ್ರಧಾನಿಯವರಿಗೆ ತುಂಬಾ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ; ನೀವು ದೇಶದ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸಗಳು ಕೆಲವರಿಗೆ ಅಸಹ್ಯ ಹುಟ್ಟಿಸುತ್ತಿವೆ. ಕೆಲವರಿಗೆ ಇದು ಸಮಾಧಾನ ನೀಡುತ್ತಿಲ್ಲ, ಅದಕ್ಕಾಗಿಯೇ ಈ ರೀತಿ ಗೂಂಡಾಗಿರಿಯನ್ನು ಬಳಸಿಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಈ ಯಾವುದೇ ಕಾರಣಕ್ಕೂ ನೀವು ಧೃತಿಗೆಡಬಾರದು, ಹೆದರಬಾರದು. ಇಡೀ ದೇಶದ ದೇಶಭಕ್ತರು ನರೇಂದ್ರ ಮೋದಿಯವರ ಜೊತೆಗಿದ್ದೇವೆ ಎಂದು ಬೆಂಬಲ ಸೂಚಿಸಿದರು.
ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿ ಹೋರಾಟ ಮಾಡಲು ಅವಕಾಶವಿದೆ, ಅವರ ಬೇಡಿಕೆಗಳಿಗೆ ನಾನು ಬೇಡ ಎಂದಿಲ್ಲ. ಈಗಾಗಲೇ ಜೆ.ಪಿ. ನಡ್ಡಾ ಅವರಿಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ. ಹಾಗಿರುವಾಗ ಪೊಲೀಸರ ಮೇಲೆ ಕಲ್ಲಿನಿಂದ ಹೊಡೆಯಲು ಇವರಿಗೆ ಯಾರು ಹೇಳಿದರು? ಇದರ ಹಿಂದೆ ಯಾವುದೋ ಬೃಹತ್ ವಿದೇಶಿ ಶಕ್ತಿಯ ಕೈವಾಡವಿದೆ. ಇದು ವಿದೇಶಿ ಶಕ್ತಿಗಳು ಮಾಡುತ್ತಿರುವ ಕುತಂತ್ರದ ಆಟವಾಗಿದೆ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
